Puneeth Rajkumar: ಪುನೀತ್ ಯಾವಾಗ ಸಿಕ್ಕರೂ ಒಳ್ಳೆಯ ಮಾತನ್ನಷ್ಟೇ ಆಡುತ್ತಿದ್ದರು; ಕಂಬನಿ ಮಿಡಿದ ನಾಗಾರ್ಜುನ

| Updated By: shivaprasad.hs

Updated on: Nov 02, 2021 | 4:34 PM

Nagarjuna: ಪುನೀತ್ ರಾಜಕುಮಾರ್ ನಿವಾಸಕ್ಕೆ ತೆರಳಿ, ನಟ ನಾಗಾರ್ಜುನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಂತರ ಮಾತನಾಡಿದ ಅವರು, ಇದನ್ನು ಇನ್ನೂ ನಂಬಲಾಗುತ್ತಿಲ್ಲ ಎಂದಿದ್ದಾರೆ.

Puneeth Rajkumar: ಪುನೀತ್ ಯಾವಾಗ ಸಿಕ್ಕರೂ ಒಳ್ಳೆಯ ಮಾತನ್ನಷ್ಟೇ ಆಡುತ್ತಿದ್ದರು; ಕಂಬನಿ ಮಿಡಿದ ನಾಗಾರ್ಜುನ
ಪುನೀತ್ ರಾಜಕುಮಾರ್ ಹಾಗೂ ನಾಗಾರ್ಜುನ (ಸಾಂದರ್ಭಿಕ ಚಿತ್ರ)
Follow us on

ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಭಾರತೀಯ ಚಿತ್ರರಂಗವನ್ನು ಆಘಾತಕ್ಕೆ ತಳ್ಳಿತ್ತು. ವಿವಿಧ ಚಿತ್ರರಂಗದ ಕಲಾವಿದರು ಪುನೀತ್​ಗೆ ಶ್ರದ್ಧಾಂಜಲಿ ಕೋರಿದ್ದರು. ಟಾಲಿವುಡ್​ನ ಖ್ಯಾತ ನಟರು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ, ಪುನೀತ್ ಅಂತಿಮ ದರ್ಶನ ಪಡೆದಿದ್ದರು. ಅಂತಿಮ‌ದರ್ಶನ ಮತ್ತು ಅಂತ್ಯ ಸಂಸ್ಕಾರಕ್ಕೆ ಆಗಮಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ, ನಟ ನಾಗಾರ್ಜುನ ಇಂದು ಪುನೀತ್ ನಿವಾಸಕ್ಕೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಮನೆಗೆ ಭೇಟಿ ನೀಡಿರುವ ನಾಗಾರ್ಜುನ, ಪುನೀತ್ ಪತ್ನಿ ಅಶ್ವಿನಿ ಹಾಗೂ ಮಕ್ಕಳು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ನಂತರ ಮಾತನಾಡಿರುವ ನಾಗಾರ್ಜುನ, ‘‘ಪುನೀತ್​​ ನಿಧನ ನಮಗೆ ಶಾಕಿಂಗ್ ಆಗಿತ್ತು. ಪುನೀತ್ ನಿಧನರಾಗಿದ್ದಾರೆ ಎಂದು ನಂಬಲಾಗುತ್ತಿಲ್ಲ. ಪುನೀತ್​ ಬಗ್ಗೆ ಏನು ಮಾತಾಡಬೇಕೆಂದು ಗೊತ್ತಾಗುತ್ತಿಲ್ಲ. ಸೆಟ್​ನಲ್ಲಿ ಪುನೀತ್ ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಅವರು ಯಾವಾಗ ಸಿಕ್ಕರೂ ಒಳ್ಳೆಯ ಮಾತನ್ನಷ್ಟೇ ಆಡುತ್ತಿದ್ದರು. ನಾಲ್ಕು ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದರು, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಸ್ಕೂಲ್​ಗಳು, ಅನಾಥಾಶ್ರಮ ನಡೆಸುತ್ತಿದ್ದರು. ಇಂತಹವರಿಗೆ ಹೀಗೆ ಆಗಿದ್ದು ನಿಜಕ್ಕೂ ಶಾಕಿಂಗ್ ವಿಚಾರ. ನನಗೆ ಈಗಲೂ ಅವರು ಕುಟುಂಬಕ್ಕೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’’ ಎಂದಿದ್ಧಾರೆ. ಈ ಹಿಂದೆ ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರು ನಿಧನಹೊಂದಿದ್ದಾಗ ಪುನೀತ್ ತೆರಳಿ, ಅಂತಿಮ ನಮನ ಸಲ್ಲಿಸಿ, ಸಾಂತ್ವನ ಹೇಳಿದ್ದರು.

ಪುನೀತ್ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದ್ದು, ನಂದಮೂರಿ ಬಾಲಕೃಷ್ಣ, ಚಿರಂಜೀವಿ, ಅಲಿ, ಪ್ರಭುದೇವ, ಜ್ಯೂ.ಎನ್​ಟಿಆರ್ ಸೇರಿದಂತೆ ಹಲವು ಕಲಾವಿದರು ಅಂತಿಮ ದರ್ಶನಕ್ಕೆ ಆಗಮಿಸಿ ನಮನ ಸಲ್ಲಿಸಿದ್ದರು. ಇದರೊಂದಿಗೆ ಬಹಳಷ್ಟು ಕಲಾವಿದರು, ಸಾಮಾಜಿಕ ಜಾಲತಾಣಗಳ ಮುಖಾಂತರ ಶೋಕ ವ್ಯಕ್ತಪಡಿಸಿದ್ದರು.

ಇನ್ನೂ ಅಭಿಮಾನಿಗಳಿಗೆ ಸಿಗದ ಅಪ್ಪು ದರ್ಶನ ಅವಕಾಶ:
ಪುನೀತ್ ನಿಧನಾನಂತರ ಕಾರ್ಯಗಳು ನೆರವೇರಿದ ನಂತರ ದರ್ಶನಕ್ಕೆ ಅವಕಾಶ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಸಂಪೂರ್ಣ ವ್ಯವಸ್ಥೆಯಾಗದ ಕಾರಣ, ಇನ್ನೂ ಅಭಿಮಾನಿಗಳಿಗೆ ದರ್ಶನದ ಅವಕಾಶ ಲಭ್ಯವಾಗಿಲ್ಲ. ಇಂದು ಕುಟುಂಬಸ್ಥರಿಂದ ಹಾಲುತುಪ್ಪ ಕಾರ್ಯ ಪೂರ್ಣ‌ಗೊಂಡಿದ್ದು, ಸಮಾಧಿ ಸ್ಥಳದ ಬಳಿ ಬ್ಯಾರಿಕೇಡ್ ವ್ಯವಸ್ಥೆಯಾದ ಬಳಿಕ ಅಭಿಮಾನಿಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ. ಸದ್ಯ ಸಮಾಧಿ ಸ್ಥಳದ ಬಳಿ ಬ್ಯಾರಿಕೇಡ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಾಳೆಯಿಂದ ಅಭಿಮಾನಿಗಳಿಗೆ ದರ್ಶನ ಸಿಗುವ ಸಾಧ್ಯತೆ ಇದೆ. ಇಂದು ಮಾತನಾಡಿದ್ದ ರಾಘವೇಂದ್ರ ರಾಜಕುಮಾರ್, ಸಾಧ್ಯವಾದರೆ ಇಂದಿನಿಂದಲೇ ಅಭಿಮಾನಿಗಳಿಗೆ ದರ್ಶನದ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ:

ಈ ನೋವಿನ ಜತೆ ಬದುಕೋಕೆ ಶಕ್ತಿಕೊಡು ಎಂದು ದೇವರಲ್ಲಿ ಕೇಳಿಕೊಳ್ಳಬೇಕಷ್ಟೆ; ರಾಘವೇಂದ್ರ ರಾಜ್​ಕುಮಾರ್​

Puneeth Rajkumar: ಪುನೀತ್ ಅಕಾಲಿಕ ನಿಧನ ಬಹಳ ಅನ್ಯಾಯ; ಕಂಬನಿ ಮಿಡಿದ ಚಿರಂಜೀವಿ

Published On - 4:32 pm, Tue, 2 November 21