
ನಟಿ ರಚಿತಾ ರಾಮ್ ಅವರು ಸದಾ ವಿವಾದಗಳಿಂದ ದೂರ ಇರಲು ಬಯಸುವವರು. ಆದರೆ, ಅವರನ್ನೇ ವಿವಾದ ಹುಡುಕಿ ಬರುತ್ತಿದೆ. ಈ ವಿಚಾರದಲ್ಲಿ ಅವರಿಗೆ ಸಾಕಷ್ಟು ಬೇಸರ ಇದೆ. ಈ ಮೊದಲು ರಾಜಕಾರಣಿ ಜೊತೆ ಅವರ ಹೆಸರು ತಳುಕು ಹಾಕಿ ಅಪಪ್ರಚಾರ ಮಾಡಲಾಗಿತ್ತು. ಇದನ್ನು ರಚಿತಾ (Rachita Ram) ಖಂಡಿಸಿದ್ದರು. ಆ ಬಳಿಕ ‘ಸಂಜು ವೆಡ್ಸ್ ಗೀತಾ 2’ ಪ್ರಚಾರಕ್ಕೆ ಅವರು ಬರುತ್ತಿಲ್ಲ ಎಂಬ ಆರೋಪ ಬಂತು. ಇದಕ್ಕೂ ಅವರು ಖಡಕ್ ಉತ್ತರ ಕೊಟ್ಟರು. ಈಗ ಬಿಕ್ಲು ಶಿವ ಕೊಲೆ ಕೇಸ್ನ ಎ1 ಆರೋಪಿ ಜಗ್ಗಿ ಜೊತೆ ರಚಿತಾ ಇರೋ ಪೋಟೋ ವೈರಲ್ ಆಗಿದೆ. ಇದಕ್ಕೆ ರಚಿತಾ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.
ಇತ್ತೀಚೆಗೆ ಬಿಕ್ಲು ಶಿವನ ಕೊಲೆ ನಡೆದಿದೆ. ಈ ಪ್ರಕರಣದಲ್ಲಿ ಜಗದೀಶ್ ಎ1 ಆರೋಪಿ ಆಗಿದ್ದಾನೆ. ಈತನ ಜೊತೆ ರಚಿತಾ ರಾಮ್ ಇರೋ ಫೋಟೋ ವೈರಲ್ ಆಗಿದೆ. ರಚಿತಾಗೆ ಜಗದೀಶ್ ಸೀರೆ ಹಾಗೂ ಒಡವೆ ಗಿಫ್ಟ್ ಕೊಟ್ಟಿದ್ದಾನೆ ಎನ್ನುವ ಆರೋಪ ಇದೆ. ಈ ವಿಚಾರದಲ್ಲಿ ಅಸಲಿಗೆ ನಡೆದಿದ್ದು ಏನು ಎಂಬುದರ ಸ್ಪಷ್ಟ ಮಾಹಿತಿ ಸಿಕ್ಕಿದೆ.
ರವಿಚಂದ್ರನ್, ರಾಧಿಕಾ ಕುಮಾರಸ್ವಾಮಿ, ಮೊದಲಾದವರು ನಟಿಸಿರೋ ‘ರವಿ ಬೋಪಣ್ಣ’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಚಿತ್ರಕ್ಕೆ ಜಗದೀಶ್ ಸಹ ನಿರ್ಮಾಪಕನಾಗಿದ್ದ. ಈ ಚಿತ್ರದಲ್ಲಿ ರಚಿತಾ ರಾಮ್ ಅತಿಥಿ ಪಾತ್ರ ಮಾಡಿದ್ದರು. ಆದರೆ, ಅವರು ಸಂಭಾವನೆ ಪಡೆದಿರಲಿಲ್ಲ. ಹೀಗಾಗಿ ರವಿಚಂದ್ರನ್ ಅವರ ಪತ್ನಿ ಸೆಲೆಕ್ಟ್ ಮಾಡಿದ್ದ ಸೀರೆಯನ್ನು ರಚಿತಾಗೆ ನೀಡಲಾಯಿತು.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್: ಬಗೆದಷ್ಟು ಬಯಲಾಗ್ತಿವೆ ಸ್ಫೋಟಕ ಮಾಹಿತಿ, ಆರೋಪಿಗೆ ನಟ-ನಟಿಯರ ಜತೆಗೂ ನಂಟು
ರವಿಚಂದ್ರನ್ ಕೊಟ್ಟ ಉಡುಗೊರೆ ಇದಾಗಿದ್ದು, ಅದನ್ನು ರಚಿತಾ ಪ್ರೀತಿಯಿಂದ ಪಡೆದಿದ್ದರು. ಆತ ಕೂಡ ನಿರ್ಮಾಪಕನಾಗಿದ್ದರಿಂದ ಫೋಟೋದಲ್ಲಿ ಜೊತೆಗಿದ್ದ ಅಷ್ಟೇ ಹೊರತು ಇದು ಜಗ್ಗಿ ಕೊಟ್ಟಿರೋ ಉಡುಗೊರೆ ಅಲ್ಲ. ಇದನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ರಚಿತಾ ಆಪ್ತ ಮೂಲಗಳು ಹೇಳಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:00 am, Tue, 22 July 25