Darshan: ರೇಣುಕಾ ಸ್ವಾಮಿ ಪ್ರಕರಣ: ಪೊಲೀಸರಿಂದ ಹೊಸ ತಂತ್ರಜ್ಞಾನ ಬಳಕೆ, ದರ್ಶನ್​ ಆಂಡ್ ಗ್ಯಾಂಗ್​ಗೆ ಸಂಕಷ್ಟ

|

Updated on: Aug 04, 2024 | 10:48 AM

Darshan-Renuka Swamy: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗ ವಶಪಡಿಸಿಕೊಂಡಿರುವ ವಿಡಿಯೋ ಸಾಕ್ಷಿಗಳನ್ನು ಇನ್ನಷ್ಟು ಬಲಗೊಳಿಸಲು ಹೊಸ ತಂತ್ರಜ್ಞಾನವೊಂದನ್ನು ಬಳಸುತ್ತಿದ್ದಾರೆ. ಈ ತಂತ್ರಜ್ಞಾನದಿಂದ ಸಾಕ್ಷ್ಯಗಳು ಇನ್ನಷ್ಟು ಪ್ರಬಲಗೊಳ್ಳಲಿವೆ.

Darshan: ರೇಣುಕಾ ಸ್ವಾಮಿ ಪ್ರಕರಣ: ಪೊಲೀಸರಿಂದ ಹೊಸ ತಂತ್ರಜ್ಞಾನ ಬಳಕೆ, ದರ್ಶನ್​ ಆಂಡ್ ಗ್ಯಾಂಗ್​ಗೆ ಸಂಕಷ್ಟ
ರೇಣುಕಾ-ದರ್ಶನ್
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದವನ್ನು ಪೊಲೀಸರು ಈವರೆಗೆ ತನಿಖೆ ನಡೆಸಿರುವ ರೀತಿ, ಹ್ಯಾಂಡಲ್ ಮಾಡಿರುವ ರೀತಿ ಜನಸಾಮಾನ್ಯರ ಮೆಚ್ಚುಗೆಗೆ ಕಾರಣವಾಗಿದೆ. ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಪೊಲೀಸರು ಈ ವರೆಗೆ ಸುಮಾರು 200 ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರಂತೆ. ಮಾತ್ರವಲ್ಲದೆ ಸಾಕ್ಷ್ಯಗಳನ್ನು ಒದ್ದಕ್ಕೊಂದು ಪೂರಕವಾಗಿರುವಂತೆ ಹೊಂದಿಸಿದ್ದಾರೆ. ಮಾತ್ರವಲ್ಲದೆ ಇದೀಗ ಈ ಪ್ರಕರಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಪೊಲೀಸರು ಮಾಡುತ್ತಿದ್ದು ಸಾಕ್ಷ್ಯವನ್ನು ಇನ್ನಷ್ಟು ಪ್ರಬಲಗೊಳಿಸುತ್ತಿದ್ದಾರೆ.

ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶೆಡ್, ದರ್ಶನ್ ಮನೆ, ಸ್ಟೂನಿ ಬ್ರೂಕ್ ರೆಸ್ಟೊರೆಂಟ್, ಶೆಡ್​ಗೆ ಹೋಗುವ ರಸ್ತೆ ಇನ್ನೂ ಹಲವು ಕಡೆಗಳಿಂದ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ. ಮಾತ್ರವಲ್ಲದೆ ಕೊಲೆ ನಡೆದ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿರುವ ಮೊಬೈಲ್ ವಿಡಿಯೋಗಳನ್ನು ಸಹ ಕಲೆ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಕ್ಷಿಗಳನ್ನು ಇನ್ನಷ್ಟು ಬಲಗೊಳಿಸಲು ವಿಷ್ಯುಯಲ್ ಕಂಪಾರಿಷನ್ ತಂತ್ರಜ್ಞಾನವನ್ನು ಪೊಲೀಸರು ಬಳಸಿದ್ದಾರೆ.

ಈವರೆಗೆ ಸಂಗ್ರಹಿಸಿರುವ ಎಲ್ಲ ವಿಡಿಯೋಗಳನ್ನು ಎಫ್​ಎಸ್ಎಲ್​ನಲ್ಲಿ ಈಗಾಗಲೇ ಒಮ್ಮೆ ಪರಿಶೀಲನೆಗೆ ಒಳಪಡಿಸಲಾಗಿದೆ. ಅದರ ಜೊತೆಗೆ ಪರಸ್ಪರ ಎಲ್ಲ ವಿಡಿಯೋಗಳ ವಿಶುಯಲ್ ಕಂಪಾರಿಷನ್ (ವಿಡಿಯೋಗಳಲ್ಲಿನ ವ್ಯಕ್ತಿಗಳ ಹೋಲಿಕೆ) ಸಹ ಮಾಡಿಸಲಾಗುತ್ತಿದೆ. ಈ ವಿಷ್ಯುಲ್ ಕಂಪಾರಿಷನ್​ನಿಂದ ಬೇರೆ ಬೇರೆ ವಿಡಿಯೋಗಳಲ್ಲಿರುವ ವ್ಯಕ್ತಿಗಳು ಒಬ್ಬರೇ ಹೌದೇ ಅಲ್ಲವೆ ಎಂಬುದು ತಿಳಿಯುತ್ತದೆ. ಹಾಗೂ ವಿಡಿಯೋ ನಕಲಿಯೇ, ಅಸಲಿಯೇ, ಗ್ರಾಫಿಕ್ಸ್ ಮಾಡಲಾಗಿದೆಯೇ ಇನ್ನಿತರೆ ವಿಷಯಗಳು ಸಹ ತಿಳಿದು ಬರಲಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಪೋಟೊಗಳು ಹಾಗೂ ಬಂಧಿಸಿದ ಸಮಯದಲ್ಲಿ ತೆಗೆದ ಪೋಟೋಗಳು ಹೋಲಿಕೆ ಆಗುತ್ತಿವೆಯೇ ಎಂಬುದು ಸಹ ಈ ಪರೀಕ್ಷೆಯಿಂದ ಗೊತ್ತಾಗುತ್ತದೆ.

ಇದನ್ನೂ ಓದಿ:ದರ್ಶನ್​ ಮನೆ ಸಿಸಿಟಿವಿಯಲ್ಲಿ ಶಾಕಿಂಗ್​ ವಿಚಾರ ಬಯಲು; ಕೊಲೆ ಕೇಸ್​ನಲ್ಲಿ ನಟನಿಗೆ ಹೆಚ್ಚಿತು ಸಂಕಷ್ಟ

ವಿಡಿಯೋದಲ್ಲಿರುವ ವ್ಯಕ್ತಿಗಳ ಕಣ್ಣುಗಳ ಆಕಾರ, ಕಣ್ಣುಗಳ ಬಣ್ಣ, ಕಣ್ಣುಗಳ ನಡುವಿನ ಅಂತರ, ದೇಹದ ಆಕಾರ, ಬಾಯಿ ಹಾಗೂ ತುಟಿಯ ಆಕಾರ, ಮೂಗಿನ ಆಕಾರ ಹಾವಭಾವಗಳನ್ನು ಹೋಲಿಕೆ ಮಾಡಿ ನೋಡಲಾಗುತ್ತದೆ. ಇದರಿಂದಾಗಿ
ನ್ಯಾಯಾಲಯದಲ್ಲಿ ವಿಡಿಯೋಗಳು ನಕಲಿ ಅಥವಾ ತಿದ್ದಿದ ವಿಡಿಯೋಗಳು ಅಲ್ಲ ಅನ್ನೋದು ಧೃಡ ಆಗುತ್ತದೆ. ಸಂಗ್ರಹಿಸಿದ ದೃಶ್ಯದಲ್ಲಿ ಇರುವ ವ್ಯಕ್ತಿ ಯಾರು? ಆತನ ಗುರುತೇನು ಎಂಬುದು ಖಾತ್ರಿ ಆಗುತ್ತದೆ. ಇದು ಬಲವಾದ ಸಾಕ್ಷಿಯಾಗಿ ಪರಿಗಣನೆಯಾಗುತ್ತದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಪ್ರಕರಣದಲ್ಲಿ ಮೂರು ಜನ ಸಾಕ್ಷಿಗಳಿದ್ದು ಅವರನ್ನು ತುಮಕೂರಿನ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಆರೋಪಿಗಳೆಲ್ಲ ನ್ಯಾಯಾಂಗ ಬಂಧನದಲ್ಲಿದ್ದು, ಆಗಸ್ಟ್ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:46 am, Sun, 4 August 24