ಪಿಎಂ ಮೋದಿ ಭೇಟಿ ವೇಳೆ ವಿಶೇಷ ಮನವಿ ಇಟ್ಟ ರಾಕಿಂಗ್ ಸ್ಟಾರ್ ಯಶ್​; ಏನದು?

ಔತಣಕೂಟಕ್ಕೆ ಆಹ್ವಾನ ಪಡೆದ ಅಶ್ವಿನಿ ಪುನೀತ್, ಯಶ್, ರಿಷಬ್ ಶೆಟ್ಟಿ, ವಿಜಯ್ ಅವರು ಮೋದಿಯನ್ನು ಭೇಟಿ ಮಾಡಿದ್ದಾರೆ. ರಾಜಭವನದಲ್ಲಿ ರಾತ್ರಿ 8.30ರಿಂದ 9 ಗಂಟೆವರೆಗೂ ಚರ್ಚೆ ನಡೆದಿದೆ.

ಪಿಎಂ ಮೋದಿ ಭೇಟಿ ವೇಳೆ ವಿಶೇಷ ಮನವಿ ಇಟ್ಟ ರಾಕಿಂಗ್ ಸ್ಟಾರ್ ಯಶ್​; ಏನದು?
ಮೋದಿ-ಯಶ್

Updated on: Feb 13, 2023 | 10:53 AM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ (ಫೆಬ್ರವರಿ 12) ಅವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದರು. ಈ ವೇಳೆ ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ (Ashwini Puneeth Rajkumar), ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಮೋದಿ ಸಿನಿಮಾ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ವಿಚಾರ ಚರ್ಚೆ ಆಗಿಲ್ಲ ಎನ್ನಲಾಗಿದೆ.

ಔತಣಕೂಟಕ್ಕೆ ಆಹ್ವಾನ ಪಡೆದ ಅಶ್ವಿನಿ ಪುನೀತ್, ಯಶ್, ರಿಷಬ್ ಶೆಟ್ಟಿ, ವಿಜಯ್ ಅವರು ಮೋದಿಯನ್ನು ಭೇಟಿ ಮಾಡಿದ್ದಾರೆ. ರಾಜಭವನದಲ್ಲಿ ರಾತ್ರಿ 8.30ರಿಂದ 9 ಗಂಟೆವರೆಗೂ ಚರ್ಚೆ ನಡೆದಿದೆ. ‘ಕೆಜಿಎಫ್’, ‘ಕಾಂತಾರ’ ಚಿತ್ರಗಳ ಬಗ್ಗೆ ಮೋದಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಭಾರತೀಯ‌ ಚಿತ್ರರಂಗದ‌ ಕುರಿತು ಚರ್ಚೆ ಮಾಡಿದ್ದಾರೆ. ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಏನು ಮಾಡಬೇಕು ಎಂಬ ಕುರಿತು ಅವರು ಮಾತುಕತೆ ನಡೆಸಿದ್ದಾರೆ. ಹಾಲಿವುಡ್ ಬೆಳೆದ ರೀತಿಯಲ್ಲೇ ಭಾರತದ ಚಿತ್ರರಂಗವೂ ಬೆಳೆಯಬೇಕು ಎಂಬುದು ಮೋದಿ ಇಂಗಿತ.

ಕೆಲ ವರ್ಷಗಳ ಹಿಂದೆ ಪುನೀತ್ ರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಮೋದಿ ಭೇಟಿ ಮಾಡಿದ್ದರು. ಪುನೀತ್ ನಿಧನದ ನಂತರ ಇದೇ ಮೊದಲ ಬಾರಿಗೆ ಅಶ್ವಿನಿ ಅವರನ್ನು ಮೋದಿ ಭೇಟಿ ಮಾಡಿದ್ದಾರೆ. ಅಪ್ಪು ಅಗಲಿಕೆ ಬಗ್ಗೆ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಭೇಟಿ ವೇಳೆ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Yash: ‘ಅಪ್ಪನಿಗಿಂತ ನಾನೇ ಗಟ್ಟಿ’: ಯಶ್​ ಬಾಡಿ ಬಗ್ಗೆ ಪುತ್ರ ಯಥರ್ವ್​ ಮಾತಾಡಿದ ಕ್ಯೂಟ್​ ವಿಡಿಯೋ ವೈರಲ್​

‘ಕೆಜಿಎಫ್ 2’, ‘ಕಾಂತಾರ’ ಹಾಗೂ ‘ಗಂಧದ ಗುಡಿ’ ಸಿನಿಮಾಗಳು ಮೆಚ್ಚುಗೆ ಪಡೆದುಕೊಂಡಿವೆ. ಈ ಬಗ್ಗೆ ಮೋದಿ ಖುಷಿ ಹೊರಹಾಕಿದ್ದಾರೆ. ಅಶ್ವಿನಿ ಪುನೀತ್ ಅವರ ಕನಸುಗಳಿಗೆ ಪ್ರೋತ್ಸಾಹ ಸಿಗಲಿ ಎಂದು ಮೋದಿ ಹಾರೈಸಿದ್ದಾರೆ.

ಯಶ್ ಬೇಡಿಕೆ

ಒಂದೊಳ್ಳೆಯ ಫಿಲ್ಮ್​​ಸಿಟಿ ನಿರ್ಮಾಣ ಆಗಬೇಕು ಎಂಬುದು ಚಿತ್ರರಂಗದವರ ಬೇಡಿಕೆ. ಇದೇ ಬೇಡಿಕೆಯನ್ನು ಯಶ್ ಅವರು ಪ್ರಧಾನಿ ಮೋದಿ ಎದುರು ಇಟ್ಟಿದ್ದಾರೆ. ಶೂಟಿಂಗ್​ಗೆ ಬೇಕಾದ ಎಲ್ಲಾ ವ್ಯವಸ್ಥೆ ಇರುವಂತಹ ಫಿಲ್ಮ್​ ಸಿಟಿ ನಿರ್ಮಾಣ ಮಾಡಿ ಎಂದು ಯಶ್ ಕೋರಿದ್ದಾರೆ. ವಿದೇಶಕ್ಕೆ ಹೋಗಿ ಶೂಟಿಂಗ್ ಮಾಡುವ ಬದಲು ಇಲ್ಲಿಯೇ ಶೂಟಿಂಗ್ ನಡೆಯುವಂತಹ ವ್ಯವಸ್ಥೆ ಆಗಬೇಕು ಎಂದು ಚರ್ಚೆ ಆಗಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us