
ನೆಪೋಟಿಸಂ ಬಗ್ಗೆ ಬಾಲಿವುಡ್ನಲ್ಲಿ ಚರ್ಚೆ ಆದಷ್ಟು ಕನ್ನಡ ಚಿತ್ರರಂಗದಲ್ಲಿ ಆಗೋದಿಲ್ಲ. ಇಲ್ಲಿ ಟ್ಯಾಲೆಂಟ್ ಇದ್ದರೆ ಮಾತ್ರ ಅವಕಾಶಗಳು ಸಿಗುತ್ತವೆ. ಇತ್ತೀಚೆಗೆ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ನೆಪೋಟಿಸಂ ಹೇಳಿಕೆ ಚರ್ಚೆಗೆ ಬಂದಿತ್ತು. ಸುದೀಪ್ಗೆ ಈ ಬಗ್ಗೆ ಪ್ರಶ್ನೆ ಕೂಡ ಎದುರಾಯಿತು. ಆಗ ಕಿಚ್ಚ (Kichcha Sudeep) ‘ಶಿವರಾಜ್ಕುಮಾರ್ಗೆ ಈ ಪ್ರಶ್ನೆ ಏಕೆ ಕೇಳಲ್ಲ’ ಎಂದು ನೇರವಾಗಿ ಪ್ರಶ್ನೆ ಮಾಡಿದ್ದರು. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಮ್ಮದೇ ಶೈಲಿಯಲ್ಲಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಎದುರಾದ ಪ್ರಶ್ನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಿವಣ್ಣ, ‘ಆ ರೀತಿಯ ಪ್ರಶ್ನೆಯನ್ನು ಕೇಳಿದ್ದೇ ತಪ್ಪು’ ಎಂದು ನೇರವಾಗಿ ಹೇಳಿದ್ದಾರೆ.
‘ಮ್ಯಾಂಗೋ ಪಚ್ಚ’ ವಿಶೇಷ ಶೋ ನೋಡಿ ಬಂದ ಶಿವಣ್ಣ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪತ್ರಕರ್ತರೊಬ್ಬರು ಸುದೀಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ‘ನೆಪೋಟಿಸಂ ಪ್ರಶ್ನೆಯನ್ನು ಶಿವಣ್ಣ ಅವರಿಗೆ ಏಕೆ ಕೇಳಿಲ್ಲ ಎಂದು ಸುದೀಪ್ ಹೇಳಿದ್ದಾರೆ’ ಎಂಬ ಪ್ರಶ್ನೆಯನ್ನು ಶಿವಣ್ಣನಿಗೆ ಕೇಳಿದರು. ಈ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಶಿವಣ್ಣ, ‘ನೀವು ಆ ಪ್ರಶ್ನೆಯನ್ನು ಏಕೆ ಕೇಳಿದ್ರಿ? ನಾನು ಆ ವಿಡಿಯೋ ನೋಡಿದ್ದೇನೆ. ಆದರೆ ನೀವು ಆ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ? ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ’ ಎಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ನೆಪೋಟಿಸಂ ಇರೋದು ನಿಜ, ಅದರಿಂದಲೇ ನನಗೆ ಕೆಲಸ ಸಿಗುತ್ತಿದೆ: ಆಮಿರ್ ಖಾನ್ ಮಗನ ನೇರ ಮಾತು
ಮುಂದುವರಿದು ಮಾತನಾಡಿದ ಶಿವಣ್ಣ, ‘ಚಿತ್ರರಂಗದಲ್ಲಿ ಕೇವಲ ಇವರ ಮಕ್ಕಳು ಅಥವಾ ಅವರ ಮಕ್ಕಳೇ ಬಂದು ಕನಸು ಕಾಣಬೇಕು ಎಂದೇನೂ ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ, ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ. ಚಿತ್ರರಂಗಕ್ಕೆ ಯಾರ ಮಕ್ಕಳು ಬೇಕಾದರೂ ಬರಬಹುದು, ನೀವು ಕೂಡ ಬರಬಹುದು. ಎಲ್ಲರಿಗೂ ಇಲ್ಲಿ ಅವಕಾಶವಿದೆ’ ಎಂದು ನೆಪೋಟಿಸಂ ವಾದಕ್ಕೆ ತಕ್ಕ ಉತ್ತರ ನೀಡಿದರು.
ಶಿವಣ್ಣ ಅವರು ಪತ್ರಕರ್ತನಿಗೆ ಖಡಕ್ ಆಗಿ ಉತ್ತರಿಸುತ್ತಿದ್ದಾಗ ಪಕ್ಕದಲ್ಲೇ ನಿಂತಿದ್ದ ನಟ ಕಿಚ್ಚ ಸುದೀಪ್ ಅವರು ಮುಗುಳ್ನಗುತ್ತಿದ್ದರು. ಶಿವಣ್ಣ ಮಾತು ಮುಗಿಸುತ್ತಿದ್ದಂತೆ ಮೈಕ್ ಕೈಗೆತ್ತಿಕೊಂಡ ಸುದೀಪ್, ‘ಗ್ರೇಟ್ನೆಸ್ ಅಂದ್ರೆ ಏನು ಗೊತ್ತಾ? ಈ ಪ್ರಶ್ನೆಯನ್ನು ಶಿವಣ್ಣನಿಗೆ ಕೇಳಿದ್ರಲ್ಲ’ ಎಂದು ಸುದೀಪ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.