ಗೆಳೆಯ ಸಂಚಾರಿ ವಿಜಯ್​ ಅಗಲಿಕೆ ನೋವಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ನೀನಾಸಂ ಸತೀಶ್​

|

Updated on: Jun 18, 2021 | 9:52 PM

ಸಂಚಾರಿ ವಿಜಯ್​ ಮೃತಪಟ್ಟ ನೋವನ್ನು ಸತೀಶ್​ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ಮದಿನ ಆಚರಿಸಿಕೊಳ್ಳಲೇ ಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಗೆಳೆಯ ಸಂಚಾರಿ ವಿಜಯ್​ ಅಗಲಿಕೆ ನೋವಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ನೀನಾಸಂ ಸತೀಶ್​
Follow us on

ನೀನಾಸಂ ಸತೀಶ್​ ಹಾಗೂ ಸಂಚಾರಿ ವಿಜಯ್​ ಆಪ್ತ ಗೆಳೆಯರಾಗಿದ್ದರು. ವಿಜಯ್​ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರನ್ನು ಕಳೆದುಕೊಂಡಿದ್ದಕ್ಕೆ ವಿಜಯ್​ಗೆ ಸಾಕಷ್ಟು ನೋವುಂಟಾಗಿದೆ. ಈ ನೋವಿನ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಸತೀಶ್​ ಘೋಷಣೆ ಮಾಡಿದ್ದಾರೆ.

ಜೂನ್​ 20 ಸತೀಶ್​ ಜನ್ಮದಿನ. ಪ್ರತಿ ವರ್ಷ ಅವರು ಅಭಿಮಾನಿಗಳ ಜತೆ ಸೇರಿ ಕೇಕ್​ ಕತ್ತರಿಸುತ್ತಿದ್ದರು. ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಸಂಚಾರಿ ವಿಜಯ್​ ಮೃತಪಟ್ಟ ನೋವನ್ನು ಸತೀಶ್​ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ಮದಿನ ಆಚರಿಸಿಕೊಳ್ಳಲೇ ಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಗೆಳೆಯರೇ ಇದೇ 20 ನನ್ನ ಹುಟ್ಟು ಹಬ್ಬ. ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯರ ಬಳಗವಿದೆ. ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರುವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡ ಮುಂದೂಡಿದ್ದೇವೆ ಥ್ಯಾಂಕ್ ಯೂ’ ಎಂದು ಬರೆದುಕೊಂಡಿದ್ದಾರೆ.

ವಿಜಯ್​ ಆಸ್ಪತ್ರೆಗೆ ದಾಖಲಾಗಿದ್ದ ದಿನ ಮಾಧ್ಯಮಗಳ ಜತೆ ಮಾತನಾಡಿದ್ದ ಸತೀಶ್​, ‘ವಿಜಯ್​ಗೆ ಯಾವುದೇ ತೊಂದರೆ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ. ಆಪರೇಷನ್​ ಮಾಡಿದ್ದರಿಂದ ಪ್ರಜ್ಞೆ ಬಂದಿಲ್ಲ ಅಷ್ಟೇ’ ಎಂದಿದ್ದರು. ಮರುದಿನ ಮಾತನಾಡಿದ್ದ ಸತೀಶ್​ ‘ನಾನು ಮಾಧ್ಯಮಗಳ ಎದುರು ಸುಳ್ಳು ಹೇಳಿದ್ದೆ. ವಿಜಯ್​ ಆರೋಗ್ಯ ತುಂಬಾ ಗಂಭೀರವಾಗಿತ್ತು. ಆದರೆ, ಅದನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿರಲಿಲ್ಲ. ಅವರು ಇರುವುದಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳೋಕೆ ಕಷ್ಟ’ ಎಂದು ಅತ್ತಿದ್ದರು.

ಇತ್ತೀಚೆಗೆ ಸಂಚಾರಿ ವಿಜಯ್​ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರ ಸತತ ಪ್ರಯತ್ನಗಳ ನಡುವೆಯೂ ವಿಧಿಯಾಟವೇ ಮೇಲುಗೈ ಸಾಧಿಸಿತು. ಸಂಚಾರಿ ವಿಜಯ್​ ಮೃತಪಟ್ಟ ಬಗ್ಗೆ ಜೂನ್​ 15ರಂದು ವೈದ್ಯರು ಘೋಷಣೆ ಮಾಡಿದರು. ನಂತರ ಅವರ ಕಳೇಬರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ಯಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಗೆಳೆಯನ ತೋಟದಲ್ಲಿ ವಿಜಯ್​ ಅಂತ್ಯಸಂಸ್ಕಾರ ನೆರವೇರಿತು.

ಇದನ್ನೂ ಓದಿ: Actor Satish Ninasam Help : ದಿನಕ್ಕೆ ಸಾವಿರ ಫುಡ್ ಕಿಟ್ ವಿತರಣೆ ಮಾಡ್ತಿರುವ ನಟ ಸತೀಶ್ ನೀನಾಸಂ!