Yash: ಹೀರೋಯಿಸಂ ಬದಿಗಿಟ್ಟು ರೈತನಾದ ಯಶ್​; ಫೋಟೋ ವೈರಲ್​

ಯಶ್​ಗೆ ಮೊದಲಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಇದೆ. ಅನೇಕ ಸಂದರ್ಶನಗಳಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಿದೆ. ನಟನೆಯ ಜತೆ ಜತೆಗೆ ಕೃಷಿಗೂ ಒತ್ತು ಕೊಡುವುದಾಗಿ ಅವರು ಈ ಮೊದಲು ಹೇಳಿದ್ದರು.

Yash: ಹೀರೋಯಿಸಂ ಬದಿಗಿಟ್ಟು ರೈತನಾದ ಯಶ್​; ಫೋಟೋ ವೈರಲ್​
ಕೃಷಿ ಭೂಮಿಯಲ್ಲಿ ಯಶ್​

Updated on: Apr 12, 2021 | 4:42 PM

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಆದರೆ, ಈ ಪ್ರತಿಭಟನೆಗೆ ಕನ್ನಡ ಚಿತ್ರರಂಗದ ಸ್ಟಾರ್​​ಗಳು ಬೆಂಬಲವನ್ನೇ ನೀಡಿಲ್ಲ ಎನ್ನುವ ಮಾತು ಬಲವಾಗಿ ಕೇಳಿಬಂದಿತ್ತು. ಸ್ಟಾರ್​ಗಳು ಸಿನಿಮಾ ಮಾಡುತ್ತಾರೆ. ರೈತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಗಳುತ್ತಾರೆ. ಆದರೆ ಅವರ ಬೆಂಬಲಕ್ಕೆ ಮಾತ್ರ ನಿಲ್ಲುವುದಿಲ್ಲ ಎನ್ನುವ ಆರೋಪವನ್ನು ಮಾಡಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಈಗ ಯಶ್​ ಸ್ವತಃ ರೈತನಾಗೋಕೆ ಹೊರಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಭಿಮಾನಿಗಳ ಮನ ಗೆದ್ದಿದೆ.

ಯಶ್​ಗೆ ಮೊದಲಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಇದೆ. ಅನೇಕ ಸಂದರ್ಶನಗಳಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಿದೆ. ನಟನೆಯ ಜತೆ ಜತೆಗೆ ಕೃಷಿಗೂ ಒತ್ತು ಕೊಡುವುದಾಗಿ ಅವರು ಈ ಮೊದಲು ಹೇಳಿದ್ದರು. ಅಂತೆಯೇ, ಯಶ್​ ಹಾಸನದ ತಿಮ್ಲಾಪುರ ಬಳಿಯ ತಮ್ಮ ಜಮೀನಿನಲ್ಲಿ ಕೃಷಿ ಮಾಡೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮಳೆಗಾಲ ಆರಂಭವಾಗೋಕೆ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಮಳೆಗಾಲ ಬಂತೆಂದರೆ ಬಿತ್ತನೆಕಾರ್ಯ ಆರಂಭವಾಗುತ್ತದೆ. ಈಗಲೇ ಭೂಮಿ ಹದ ಮಾಡಿದರೆ ಮಳೆಗಾಲದಲ್ಲಿ ಕೃಷಿ ಆರಂಭಿಸಬಹುದು ಎಂಬುದು ಯಶ್​ ಆಲೋಚನೆ. ಇನ್ನು, ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಒಂದೊಮ್ಮೆ ಲಾಕ್​ಡೌನ್​ ಘೋಷಣೆ ಆದರೆ, ಯಶ್​ ಹಾಸನಕ್ಕೆ ತೆರಳಿ ಅಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

ಯಶ್​ ಮುಂದಾಳತ್ವದಲ್ಲಿ ಜಮೀನನ್ನು ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ. ಈ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ, ಈ ಫೋಟೋಗಳು ಸಾಕಷ್ಟು ವೈರಲ್​ ಆಗುತ್ತಿವೆ.

ಈ ಜಮೀನಿನಲ್ಲಿ ಮಾದರಿ ಕೃಷಿ ಮಾಡಬೇಕು ಎಂಬುದು ಯಶ್​ ಉದ್ದೇಶವಂತೆ. ಇಲ್ಲಿ ನೀರು ಮರುಪೂರ್ಣ ಮಾಡೋಕೆ ವ್ಯವಸ್ಥೆ, ಇಂಗು ಗುಂಡಿ ನಿರ್ಮಾಣ ಮತ್ತಿತ್ಯಾದಿ ಕೆಲಸ ಮಾಡೋ ಆಲೋಚನೆ ಅವರದ್ದು. ಇದರಿಂದ ಅಂತರ್ಜಲ ಹೆಚ್ಚೋಕೆ ಸಹಕಾರಿಯಾಗಲಿದೆ ಎಂಬುದು ಅವರ ಆಶಯ.

ಜಮೀನು ವಿವಾದದಲ್ಲಿ ಇತ್ತೀಚೆಗೆ ಯಶ್ ಹೆಸರು ಕೇಳಿ ಬಂದಿತ್ತು. ದೇವಸ್ಥಾನದ ಜಾಗವನ್ನು ಅವರು ಅತಿಕ್ರಮಿಸಿದ್ದಾರೆ ಎನ್ನುವ ಆರೋಪವನ್ನು ಗ್ರಾಮಸ್ಥರು ಮಾಡಿದ್ದರು. ನಂತರ ಗ್ರಾಮಸ್ಥರು ಹಾಗೂ ಯಶ್ ತಂಡ ಮಾತುಕತೆ ನಡೆಸಿ ವಿವಾದವನ್ನು ಬಗೆಹರಿಸಿಕೊಂಡಿತ್ತು.

ಇದನ್ನೂ ಓದಿ: KGF-2 ಶೂಟಿಂಗ್ ಪೂರ್ಣವಾದರೂ ಯಶ್​ ಗಡ್ಡಕ್ಕಿಲ್ಲ ಕತ್ತರಿ; ರಾಕಿಂಗ್​ ಸ್ಟಾರ್​ ನಿರ್ಧಾರದ ಹಿಂದಿದೆ ಬಹುದೊಡ್ಡ ಕಾರಣ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us