ಕೊರೊನಾದಿಂದ ತನ್ನವರನ್ನು ಕಳೆದುಕೊಂಡ ಯುವ ನಟ; ವಿಡಿಯೋ ನೋಡಿ ಸಿದ್ದರಾಮಯ್ಯ ಹೇಳಿದ್ದೇನು?

ಗಟ್ಟಿಮೇಳ ಧಾರಾವಾಹಿ ನಟ ಪವನ್​ ಕುಮಾರ್​ ಅವರು ಭಾವ ಮತ್ತು ಭಾವನ ತಂದೆಯನ್ನು ಕೊರೊನಾದಿಂದ ಕಳೆದುಕೊಂಡಿದ್ದಾರೆ. ಆ ನೋವಿನಲ್ಲೇ ಒಂದು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾದಿಂದ ತನ್ನವರನ್ನು ಕಳೆದುಕೊಂಡ ಯುವ ನಟ; ವಿಡಿಯೋ ನೋಡಿ ಸಿದ್ದರಾಮಯ್ಯ ಹೇಳಿದ್ದೇನು?
ಪವನ್​ ಕುಮಾರ್​ - ಸಿದ್ದರಾಮಯ್ಯ

Updated on: Apr 24, 2021 | 1:44 PM

ಕೊರೊನಾ ವೈರಸ್​ ಎರಡನೇ ಅಲೆ ಕಾಟಕ್ಕೆ ಇಡೀ ದೇಶವೇ ತತ್ತರಿಸುತ್ತಿದೆ. ಸೂಕ್ತ ಚಿಕಿತ್ಸೆ ಸಿಗದೇ ಜನರು ಪರದಾಡುತ್ತಿದ್ದಾರೆ. ಆಕ್ಸಿಜನ್​ ಕೊರತೆ ಮತ್ತು ಬೆಡ್​ಗಳ ಕೊರತೆಯಿಂದ ಪರಿಸ್ಥಿತಿ ಚಿಂತಾಜನಕ ಆಗುತ್ತಿದೆ. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗಟ್ಟಿಮೇಳ ಧಾರಾವಾಹಿ ನಟ ಪವನ್​ ಕುಮಾರ್​ ಅವರು ಭಾವ ಮತ್ತು ಭಾವನ ತಂದೆಯನ್ನು ಕೊರೊನಾದಿಂದ ಕಳೆದುಕೊಂಡಿದ್ದಾರೆ. ಆ ನೋವಿನಲ್ಲೇ ಒಂದು ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಎಲ್ಲೆಡೆ ವೈರಲ್​ ಆಗಿದ್ದು, ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದಾರೆ.

‘ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ನಿಷ್ಕ್ರಿಯತೆಯಿಂದ ತನ್ನವರನ್ನು ಕಳೆದುಕೊಂಡ ಈ ದುಃಖತಪ್ತ ಯುವನಟನ ಹೃದಯವಿದ್ರಾವಕ ಮಾತುಗಳನ್ನೊಮ್ಮೆ ಕೇಳಿ. ರಾಜ್ಯ ಸರ್ಕಾರ ಸಾಮೂಹಿಕ ಹತ್ಯೆ ನಡೆಸುತ್ತಿದೆ ಎನ್ನುತ್ತಿದ್ದಾನೆ’ ಎಂದು ಪವನ್​ ಕುಮಾರ್​ ಅವರ ವಿಡಿಯೋವನ್ನು ಟ್ವಿಟರ್​ನಲ್ಲಿ ಸಿದ್ದರಾಮಯ್ಯ ಶೇರ್​ ಮಾಡಿಕೊಂಡಿದ್ದಾರೆ.

‘ದಯವಿಟ್ಟು ನಾನು ಹೇಳುತ್ತಿರುವನ್ನು ಸರಿಯಾಗಿ ಕೇಳಿಸಿಕೊಳ್ಳಿ. ಈವಾಗ ಆಗುತ್ತಿರುವ ಕೊರೊನಾ ಕಳೆದ ವರ್ಷದ ರೀತಿ ಇಲ್ಲ. ತುಂಬ ಕೆಟ್ಟದಾಗಿದೆ. ರಾಜಕಾರಣಿಗಳು ಸುಳ್ಳು ಹೇಳುತ್ತಿದ್ದಾರೆ. ಗ್ರೌಂಡ್​ ರಿಯಾಲಿಟಿ ಬೇರೆಯೇ ಇದೆ. ಸರ್ಕಾರದ ಅವ್ಯವಸ್ಥೆಗೆ ನಾವೇ ಬಲಿಪಶು ಆಗಿದ್ದೇವೆ. ನನ್ನ ಕುಟುಂಬದಿಂದ ನಾನು ಇಬ್ಬರನ್ನು ಕಳೆದುಕೊಂಡಿದ್ದೇನೆ. ಎರಡು ದಿನದ ಗ್ಯಾಪ್​ನಲ್ಲಿ ಭಾವ ಮತ್ತು ಅವರ ತಂದೆ ನಿಧನರಾಗಿದ್ದಾರೆ’ ಎಂದು ಪವನ್​ ಕುಮಾರ್​ ಹೇಳಿದ್ದಾರೆ.

‘ಸಾವಿನ ಸಂಖ್ಯೆ ತೋರಿಸುತ್ತಿರುವುದೆಲ್ಲ ಸುಳ್ಳು. ನಾನು ನಿಮಗೆ ಸರಿಯಾಗ ಲೆಕ್ಕ ಹೇಳುತ್ತೇನೆ. ನಿಮಗೆ ಕೊರೊನಾ ಬಂದಿದೆಯೋ ಇಲ್ಲವೋ ಎಂಬುದಕ್ಕೆ ಆರ್​ಟಿಪಿಸಿಆರ್​ ಮಾಡಿಸುತ್ತಾರೆ. ಅದರಲ್ಲಿ ನೆಗೆಟಿವ್​ ಬಂದರೆ ನಿಮಗೆ ಕೊರೊನಾ ಇಲ್ಲ. ಆಗ ನಿಮಗೆ ಬಿಯು ನಂಬರ್​ ಜನರೇಟ್​ ಆಗುವುದಿಲ್ಲ. ಪಾಸಿಟಿವ್​ ಆದವರಿಗೆ ಬಿಯು ನಂಬರ್​ ಬರುತ್ತದೆ. ಅದನ್ನು ಇಟ್ಟುಕೊಂಡು ಬಿಬಿಎಂಪಿಗೆ ಕರೆ ಮಾಡಿ ಆಸ್ಪತ್ರೆ ನಿಗದಿ ಮಾಡಿಕೊಳ್ಳಬೇಕು. ಆದರೆ ಆ ನಂಬರ್​ಗೆ ಕರೆ ಕನೆಕ್ಟ್​ ಆಗುವುದೇ ಇಲ್ಲ’ ಎಂದು ಪವನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಿಮ್ಮ ಕುಟುಂಬದವರು ಆಕ್ಸಿಜನ್​ಗಾಗಿ ನಿಮ್ಮ ಕಣ್ಣೆದುರಿನಲ್ಲೇ ಒದ್ದಾಡುತ್ತ ಇರುತ್ತಾರೆ. ನೀವು ಕಂಗಾಲಾಗುತ್ತೀರಿ. ಬಿಯು ನಂಬರ್​ ಇಟ್ಟುಕೊಂಡು ಬಿಬಿಎಂಪಿಗೆ ಕರೆ ಮಾಡಿದರೆ ಯಾರೂ ಫೋನ್​ ಎತ್ತದೇ ಇದ್ದಾಗ ನಿಮಗೆ ಆಗುವ ಹತಾಶೆಯನ್ನು ತಿಳಿದುಕೊಳ್ಳಿ. ಆಸ್ಪತ್ರೆ ಬೆಡ್​ ಕೊಡಿಸಿ ದುಡ್ಡು ಹೊಡೆಯಲು ಇಲ್ಲಿ ಬ್ರೋಕರ್​ಗಳು ಇದ್ದಾರೆ. 10-20 ಸಾವಿರ ಕೊಟ್ಟರೆ ಎಲ್ಲೋ ಒಂದು ಕಡೆ ಬೆಡ್​ ವ್ಯವಸ್ತೆ ಮಾಡಿಸುತ್ತಾರೆ. ಅಲ್ಲಿ ಹೋದರೂ ಆಕ್ಸಿಜನ್​ ಇರುವುದಿಲ್ಲ. ನಿನ್ನೆ ನನ್ನ ಕಣ್ಣ ಎದುರಿನಲ್ಲಿಯೇ ಒಬ್ಬರು ಮಹಿಳೆ ಸತ್ತಿದನ್ನು ನೋಡಿದ್ದೇನೆ’ ಎಂದಿದ್ದಾರೆ ಪವನ್​ ಕುಮಾರ್​.

‘ಆಕ್ಸಿಜನ್​ಗೆ ಆಸ್ಪತ್ರೆಗಳಲ್ಲಿ ಹೆಚ್ಚವರಿ ದರ ನಿಗದಿ ಮಾಡಲಾಗಿದೆ. ಆಕ್ಸಿಜನ್​ ತುಂಬ ಬೇಸಿಕ್​. ಅದನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ಇನ್ನೇನು ಕೊಡುತ್ತಾರೆ? ನಿನ್ನೆ ಆಸ್ಪತ್ರೆ ವಾರ್ಡ್​ನಲ್ಲಿ ಒಂದೇ ದಿನ ಆರು ಜನರ ಸಾವನ್ನು ನಾನು ನೋಡಿದ್ದೇನೆ. ನನ್ನ ಕುಟುಂಬದ ಇನ್ನೂ ಮೂರು ಜನರು ಆಸ್ಪತ್ರೆಯಲ್ಲಿ ಇದ್ದಾರೆ’ ಎಂದು ಪವನ್​ ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಅಮ್ಮ, ಮಗನ ದೂರ ಮಾಡಿದ ಕೊರೊನಾ; ಮಗನಿಗೆ ತಾಯಿಯ ಸಾವಿನ ಸುದ್ದಿ ಹೇಳದೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು

ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

(Siddaramaiah reacts to Gattimela actor Pawan Kumar angry video on Coronavirus mismanagement by government)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us