ರಿಯಲ್​ ಹೀರೋ ಸೋನು ಸೂದ್​ ಕಡೆಯಿಂದ ಬೆಂಗಳೂರಿನ 5 ಸಾವಿರ ಜನರಿಗೆ ನಿತ್ಯ ಆಹಾರ ವಿತರಣೆ

ಸೂದ್​ ಚಾರಿಟಿ ಫೌಂಡೇಷನ್​ ವತಿಯಿಂದ ಈ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ‘ಫುಡ್​ ಫ್ರಮ್​ ಸೂದ್​​’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ಕೆ ಬೀಜಿಂಗ್​ ಬೈಟ್ಸ್​ ರೆಸ್ಟೊರೆಂಟ್​ ಮತ್ತು ಪೊಲೀಸರು ಕೂಡ ಸಾಥ್ ನೀಡಿದ್ದಾರೆ.

ರಿಯಲ್​ ಹೀರೋ ಸೋನು ಸೂದ್​ ಕಡೆಯಿಂದ ಬೆಂಗಳೂರಿನ 5 ಸಾವಿರ ಜನರಿಗೆ ನಿತ್ಯ ಆಹಾರ ವಿತರಣೆ
ಸೋನು ಸೂದ್​

Updated on: May 27, 2021 | 1:19 PM

ನಟ ಸೋನು ಸೂದ್​ ಅವರು ತಮ್ಮ ಸಿನಿಮಾಗಳಿಗಿಂತಲೂ ಸಮಾಜಸೇವೆ ಕಾರಣದಿಂದಲೇ ಹೆಚ್ಚು ಫೇಮಸ್​ ಆಗಿದ್ದಾರೆ. ಒಂದು ಕಾಲದಲ್ಲಿ ಎಲ್ಲ ಸಿನಿಮಾಗಳಲ್ಲಿ ವಿಲನ್​ ಆಗಿರುತ್ತಿದ್ದ ಅವರು ಈಗ ಜನರ ಪಾಲಿನ ರಿಯಲ್​ ಹೀರೋ. ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಶುರುವಾದ ಅವರ ಸಮಾಜಮುಖಿ ಕಾರ್ಯಗಳು ಈಗಲೂ ಮುಂದುವರಿದಿವೆ. ದೇಶಾದ್ಯಂತ ಕೊವಿಡ್​ನಿಂದ ಸಂಕಷ್ಟ ಉಂಟಾಗಿದ್ದು, ಕಷ್ಟದಲ್ಲಿರುವ ಜನರಿಗೆ ಸೋನು ಸೂದ್​ ಸಹಾಯ ಮಾಡುತ್ತಿದ್ದಾರೆ. ಬೆಂಗಳೂರಿನ ಸ್ಲಂ ನಿವಾಸಿಗಳಿಗೆ ಪ್ರತಿ ದಿನ ಉಚಿತವಾಗಿ ಆಹಾರ ವಿತರಿಸಲು ಅವರ ಟ್ರಸ್ಟ್​ ಮುಂದಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಮಿತಿಮೀರಿರುವುದರಿಂದ ಆಕ್ಸಿಜನ್​ ಸಿಲಿಂಡರ್​ಗಳ ಕೊರತೆ ಉಂಟಾಗಿದೆ. ಇದನ್ನು ಮನಗಂಡಿರುವ ಸೋನು ಸೂದ್​ ಅವರು ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನು ಉಚಿತವಾಗಿ ಒದಗಿಸುವ ಕಾರ್ಯಕ್ಕೆ ಜಾಲನೆ ನೀಡಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ದಿನ ಐದು ಸಾವಿರ ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಿಸುತ್ತಿದ್ದಾರೆ.

ಸೂದ್​ ಚಾರಿಟಿ ಫೌಂಡೇಷನ್​ ವತಿಯಿಂದ ಈ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ‘ಫುಡ್​ ಫ್ರಮ್​ ಸೂದ್​’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ಕೆ ಬೀಜಿಂಗ್​ ಬೈಟ್ಸ್​ ರೆಸ್ಟೊರೆಂಟ್​ ಹಾಗೂ ಕರ್ನಾಟಕ ರಾಜ್ಯ, ರೈಲ್ವೇ ಪೊಲೀಸರು ಸಾಥ್ ನೀಡಿದ್ದಾರೆ. ಸೂದ್​ ಚಾರಿಟಿ ಫೌಂಡೇಷನ್ ಸ್ವಯಂ ಸೇವಕರ ಈ ಕೆಲಸಕ್ಕೆ ಬೀಜಿಂಗ್​ ಬೈಟ್ಸ್​ ರೆಸ್ಟೊರೆಂಟ್​ ಮಾಲೀಕ ಇಬ್ರಾಹಿಂ ಕೈ ಜೋಡಿಸಿದ್ದಾರೆ. ಪ್ರತಿ ದಿನ 5 ಸಾವಿರ ಜನರಿಗೆ ಉಡುಗೆ ಮಾಡಲು ಇಬ್ರಾಹಿಂ ಅವರು ಉಚಿತವಾಗಿ ತಮ್ಮ ರೆಸ್ಟೊರೆಂಟ್​ ಬಿಟ್ಟುಕೊಟ್ಟಿದ್ದಾರೆ.

ಮುಂಬೈನಲ್ಲಿ ಸಹಾಯಕ್ಕಾಗಿ ಪ್ರತಿ ದಿನ ಸೋನು ಸೂದ್​ ಅವರ ಮನೆ ಮುಂದೆ ಜನರು ಜಮಾಯಿಸುತ್ತಿದ್ದಾರೆ. ಇತ್ತೀಚೆಗೆ ಕೆಲವರು ಬಂದು ಸೋನು ಕಾಲಿಗೆ ಬೀಳಲು ಕೂಡ ಮುಂದಾಗಿದ್ದರು. ಆಪತ್ತಿನ ಕಾಲದಲ್ಲಿ ರಿಯಲ್​ ಹೀರೋ ಕಡೆಯಿಂದ ಸಿಕ್ಕ ಸೂಕ್ತ ನೆರವಿನಿಂದಾಗಿ ಅನೇಕರ ಜೀವ ಉಳಿದಿದೆ. ಕೆಲವರು ಸೋನು ಸೂದ್​ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹಿಸುವ ಕಳ್ಳ ದಂದೆ ಕೂಡ ನಡೆಸುತ್ತಿದ್ದಾರೆ. ಆ ಬಗ್ಗೆ ಹುಷಾರಾಗಿ ಇರಬೇಕು ಎಂದು ಜನರಿಗೆ ಸೋನು ಸೂದ್​ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ:

Sonu Sood: ಸೋನು ಸೂದ್​ ಕಾಲಿಗೆ ಬೀಳಲು ಮುಂದಾದ ಜನ; ಕೈ ಮುಗಿದು ದೊಡ್ಡವರಾದ ರಿಯಲ್​ ಹೀರೋ

ರೋಗಿಗಳಿಗೆ ಚಿಕಿತ್ಸೆ ನೀಡೋದನ್ನು ನಿಮ್ಮಿಂದ ಕಲಿಯಬೇಕಿಲ್ಲ; ಸೋನು ಸೂದ್​ ವಿರುದ್ಧ ತಿರುಗಿಬಿದ್ದ ವೈದ್ಯರು

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us