IPL​ ರದ್ದಾದ ಬಳಿಕ ಆಸೀಸ್​ ಆಟಗಾರರನ್ನು ಮನೆಗೆ ಕಳಿಸಲು ಸೋನು ಸೂದ್​ಗೆ ಮನವಿ; ನಟನ ಉತ್ತರ ಏನು?

Sonu Sood: ‘ಈಗಲೇ ನಿಮ್ಮ ಬ್ಯಾಗ್​ಗಳನ್ನು ಪ್ಯಾಕ್​ ಮಾಡಿಕೊಳ್ಳಿ’ ಎಂದು ಟ್ವೀಟ್​ ಮಾಡುವ ಮೂಲಕ ತಾವು ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸಲು ಸಿದ್ಧ ಎಂದು ಸೋನು ಸೂದ್​ ತಿಳಿಸಿದ್ದಾರೆ.

IPL​ ರದ್ದಾದ ಬಳಿಕ ಆಸೀಸ್​ ಆಟಗಾರರನ್ನು ಮನೆಗೆ ಕಳಿಸಲು ಸೋನು ಸೂದ್​ಗೆ ಮನವಿ; ನಟನ ಉತ್ತರ ಏನು?
ಸೋನು ಸೂದ್​

Updated on: May 07, 2021 | 11:36 AM

ನಟ ಸೋನು ಸೂದ್​ ಮಾಡುತ್ತಿರುವ ಸಾಮಾಜಿಕ ಕೆಲಸಗಳು ಒಂದೆರಡಲ್ಲ. ಕಳೆದ ವರ್ಷ ಲಾಕ್​ಡೌನ್​ ವೇಳೆ ಶುರುವಾದ ಅವರ ಸಮಾಜಸೇವೆ ಇಂದಿಗೂ ಮುಂದುವರಿದಿದೆ. ಲಾಕ್​ಡೌನ್​ನಿಂದಾಗಿ ತಮ್ಮ ತಮ್ಮ ಊರುಗಳಿಗೆ ಮರಳಲು ಸಾಧ್ಯವಾಗದೇ ಇರುವ ಎಷ್ಟೋ ಜನರಿಗೆ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್​ ರಿಯಲ್​ ಹೀರೋ ಎನಿಸಿಕೊಂಡಿದ್ದರು. ಕೊರೊನಾ ಹಾವಳಿಯಿಂದ ತತ್ತರಿಸಿರುವ ಅನೇಕರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಐಪಿಎಲ್​ ರದ್ದಾದ ಬಳಿಕ ತಮ್ಮ ದೇಶಕ್ಕೆ ಮರಳಲು ಕಷ್ಟಪಡುತ್ತಿರುವ ಆಸ್ಟ್ರೇಲಿಯಾ ಆಟಗಾರರಿಗೂ ಕೂಡ ಸಹಾಯ ಮಾಡಿ ಎಂದು ಈಗ ಸೋನು ಸೂದ್​ಗೆ ಬೇಡಿಕೆ ಇಡಲಾಗಿದೆ!

ನೆಟ್ಟಿಗರೊಬ್ಬರು ಸೋನು ಸೂದ್​ಗೆ ಈ ಬಗ್ಗೆ ಟ್ವಿಟರ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ‘ಆಸ್ಟ್ರೇಲಿಯಾ ಆಟಗಾರರರನ್ನು ಮನೆಗೆ ಕಳಿಸಲು ಸಹಾಯ ಮಾಡುತ್ತೀರಾ ಸೋನು ಭಾಯ್​?’ ಎಂದು ಕೇಳಲಾಗಿದೆ. ಅದರ ಜೊತೆ ಅವರು ಹಂಚಿಕೊಂಡಿರುವ ಕಾರ್ಟೂನ್​ ಗಮನ ಸೆಳೆಯುತ್ತಿದೆ. ‘ನಮ್ಮನ್ನು ಮನೆಗೆ ಕಳಿಸಲು ನೀವು ಮಧ್ಯೆ ಪ್ರವೇಶಿಸಬೇಕು’ ಎಂದು ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್​ ವಾರ್ನರ್​, ಗ್ಲೆನ್​ ಮ್ಯಾಕ್ಸ್​ವೆಲ್​ ಹಾಗೂ ಸ್ಟೀವ್​ ಸ್ಮಿತ್​ ಅವರು ಸೋನುಗೆ ಮೆಸೇಜ್​ ಮೂಲಕ ವಿನಂತಿ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಕಾರ್ಟೂನ್​ ರಚಿಸಲಾಗಿದೆ.

ಈ ಟ್ವೀಟ್​ಗೆ ಸೋನು ಸೂದ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಈಗಲೇ ನಿಮ್ಮ ಬ್ಯಾಗ್​ಗಳನ್ನು ಪ್ಯಾಕ್​ ಮಾಡಿಕೊಳ್ಳಿ’ ಎಂದು ಟ್ವೀಟ್​ ಮಾಡುವ ಮೂಲಕ ತಾವು ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಆದರೆ ಇದೆಲ್ಲವೂ ಒಂದು ತಮಾಷೆಯ ಸಂಭಾಷಣೆ. ಆ ಕಾರಣಕ್ಕಾಗಿಯೇ ಅವರು ಈ ಟ್ವೀಟ್​ನಲ್ಲಿ ಜೋರಾಗಿ ನಗುವ ಎಮೋಜಿಗಳನ್ನು ಬಳಸಿದ್ದಾರೆ. ಸದ್ಯ ಆಸ್ಟ್ರೇಲಿಯಾ ಆಟಗಾರರನ್ನು ಮನೆಗೆ ಕಳಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ.

ಭಾರತದಲ್ಲಿ ಕೊರೊನಾ ವೈರಸ್​ ಹಾವಳಿ ಹೆಚ್ಚಿರುವ ಕಾರಣ ಭಾರತದಿಂದ ಆಸ್ಟ್ರೇಲಿಯಾಗೆ ಬರುವವರ ಮೇಲೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಐಪಿಎಲ್​ ರದ್ದಾದ ಬಳಿಕ ತಮ್ಮ ತವರಿಗೆ ಮರಳಲು ಆಸ್ಟ್ರೇಲಿಯಾ ಆಟಗಾರರಿಗೆ ಕಷ್ಟ ಆಗುತ್ತಿದೆ. ಸದ್ಯ ಅವರನ್ನು ಬೇರೆ ದೇಶಗಳಿಗೆ ಕಳಿಸಿ, ಅಲ್ಲಿ ನಿಗದಿತ ದಿನಗಳವರೆಗೆ ಕ್ವಾರಂಟೈನ್​ನಲ್ಲಿ ಇರಿಸಿದ ನಂತರ ಆಸ್ಟ್ರೇಲಿಯಾಗೆ ಕಳಿಸುವ ಬಗ್ಗೆ ಪ್ರಯತ್ನಗಳು ಜಾರಿಯಲ್ಲಿವೆ.

ಇದನ್ನೂ ಓದಿ:

ಸೋನು ಸೂದ್​ಗೆ ಫ್ರಾಡ್​ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್​ ಹೀರೋ?

ವಿವರ ಕಳುಹಿಸು ಸಹೋದರ.. 10 ನಿಮಿಷದಲ್ಲಿ ಸಿಲಿಂಡರ್ ತಲುಪಿಸುತ್ತೇನೆ! ಸುರೇಶ ರೈನಾ ಕಷ್ಟಕ್ಕೆ ನೆರವಾದ ಸೋನು ಸೂದ್

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us