‘ಜನರ ತೀರ್ಪಿಗೆ ಗೌರವ ಸಿಗಲೇಬೇಕು’; ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ನಟ-ರಾಜಕಾರಣಿ ಕಮಲ್ ಹಾಸನ್ ಆಗ್ರಹಿಸಿದ್ದಾರೆ. ಜನರ ತೀರ್ಪಿಗೆ ಗೌರವ ನೀಡುವಂತೆ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

‘ಜನರ ತೀರ್ಪಿಗೆ ಗೌರವ ಸಿಗಲೇಬೇಕು’; ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್
ವಿಜಯ್​-ಕಮಲ್ ಹಾಸನ್

Updated on: May 07, 2026 | 1:16 PM

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಮೂರು ದಿನ ಕಳೆದರೂ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಗಿದಿಲ್ಲ. ಈ ಬಾರಿಯ ತಮಿಳುನಾಡು ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಆಗ್ರಹಿಸಿದ್ದಾರೆ.

1.ತಮಿಳುನಾಡಿನಲ್ಲಿ ಯಾವುದೇ ಪಕ್ಷಕ್ಕೆ ಸಿಗದ ಸ್ಪಷ್ಟ ಬಹುಮತ

2. ವಿಜಯ್ ಪಕ್ಷಕ್ಕೆ ಚುನಾವಣೆಯಲ್ಲಿ ಸಿಕ್ಕಿದೆ 108 ಸ್ಥಾನ

3. ವಿಜಯ್‌ರನ್ನು ಸರ್ಕಾರ ರಚನೆಗೆ ಕರೆಯುವಂತೆ ಕಮಲ್ ಹಾಸನ್ ಒತ್ತಾಯ

ತಮಿಳುನಾಡು ರಾಜಕೀಯದ ಈ ಬಿಕ್ಕಟ್ಟಿನ ಕುರಿತು ಟ್ವಿಟರ್​ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಕಮಲ್ ಹಾಸನ್, ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ‘ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅತಿ ದೊಡ್ಡ ಪಕ್ಷವಾಗಿರುವ ವಿಜಯ್ ಅವರನ್ನು ಸರ್ಕಾರ ರಚಿಸಲು ಕರೆಯದಿರುವುದು ತಮಿಳುನಾಡು ಜನತೆ ನೀಡಿದ ತೀರ್ಪಿಗೆ ಮಾಡುವ ಅವಮಾನ’ ಎಂದು ಅವರು ಕಿಡಿಕಾರಿದ್ದಾರೆ.

‘ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಆಡಳಿತ ನಡೆಸುವ ಅಧಿಕಾರವನ್ನು ಜನತೆ ನೀಡಿಲ್ಲ. ತಮಿಳುನಾಡಿನ ಇತಿಹಾಸದಲ್ಲೇ ಇಂತಹ ತೀರ್ಪು ಹಿಂದೆಂದೂ ಬಂದಿರಲಿಲ್ಲ. ನನ್ನ ಸಹೋದರ ಎಂ.ಕೆ. ಸ್ಟಾಲಿನ್ ಅವರು, ನಾವು ಜನರ ತೀರ್ಪನ್ನು ಗೌರವಿಸುತ್ತೇವೆ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಘೋಷಿಸಿದ್ದಾರೆ. ಅವರ ಈ ರಾಜಕೀಯ ಮುತ್ಸದ್ದಿತನವನ್ನು ನಾನು ಗೌರವಿಸುತ್ತೇನೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

‘ಈಗ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಸಹ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕಿದೆ. ಈಗಾಗಲೇ ಆಯ್ಕೆಯಾಗಿರುವ 233 ಸದಸ್ಯರು ಇನ್ನೂ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗದಿರುವುದು ರಾಜ್ಯಕ್ಕೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗುತ್ತಿರುವ ದೊಡ್ಡ ಹಾನಿ’ ಎಂದು ಅವರು ಕಳವಳ ಹೊರಹಾಕಿದರು.

‘ಬಹುಮತ ಎಂಬುದು ವಿಧಾನಸಭೆಯ ಒಳಗೆ ಸಾಬೀತಾಗಬೇಕೇ ಹೊರತು, ರಾಜ್ ಭವನದ ಒಳಗಲ್ಲ ಎಂದು ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ನಾನು ಮಾತನಾಡುತ್ತಿರುವುದು ಕೇವಲ ಪಕ್ಷದ ಪರವಾಗಿ ಅಲ್ಲ, ಬದಲಿಗೆ ಒಬ್ಬ ಭಾರತೀಯ ಪ್ರಜೆಯಾಗಿ ಸಾಂವಿಧಾನಿಕ ಆಶಯದ ಧ್ವನಿಯಾಗಿ. ತಮಿಳುನಾಡು ಜನರ ತೀರ್ಪಿಗೆ ಸರಿಯಾದ ಗೌರವ ಸಿಗಲೇಬೇಕು’ ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ

ಪಕ್ಷ ಸ್ಥಾಪಿಸಿದ ಎರಡೇ ವರ್ಷಗಳಲ್ಲಿ 107 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯ್ ದೊಡ್ಡ ಸಾಧನೆ ಮಾಡಿದ್ದಾರೆ. ಕಾಂಗ್ರೆಸ್ ಇವರಿಗೆ ಬೆಂಬಲ ನೀಡಿದ್ದು, 112 ಆಗಿದೆ. ಆದರೆ, ಮ್ಯಾಜಿಕ್ ನಂಬರ್ (118) ತಲುಪಲು ಇನ್ನೂ 6 ಸ್ಥಾನಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆ ಏನು ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us