BBK 11 Elimination: ಎಲಿಮಿನೇಷನ್ ವಿಷಯ ತಿಳಿದ ಕೂಡಲೇ ಅಳುತ್ತಾ ಕುಸಿದು ಕುಳಿತ ಐಶ್ವರ್ಯಾ

ಪ್ರತಿ ಭಾನುವಾರ ಬಂದರೆ ಬಿಗ್ ಬಾಸ್ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರು ಆಗುತ್ತದೆ. ಈ ವಾರ ಐಶ್ವರ್ಯಾ ಸಿಂಧೋಗಿ ಮತ್ತು ಚೈತ್ರಾ ಕುಂದಾಪುರ ಅವರು ಡೇಂಜರ್​ ಝೋನ್ ತಲುಪಿದ್ದರು. ಎಲಿಮಿನೇಷನ್​ ಪ್ರಕ್ರಿಯೆ ಬಗ್ಗೆ ಐಶ್ವರ್ಯಾ ಸಿಂಧೋಗಿ ಅವರಿಗೆ ಅಸಲಿ ವಿಚಾರ ತಿಳಿದಾಗ ಅವರು ಕಣ್ಣೀರು ಹಾಕುತ್ತಾ ಅಲ್ಲಿಯೇ ಕುಸಿದು ಕುಳಿತುಕೊಂಡರು.

BBK 11 Elimination: ಎಲಿಮಿನೇಷನ್ ವಿಷಯ ತಿಳಿದ ಕೂಡಲೇ ಅಳುತ್ತಾ ಕುಸಿದು ಕುಳಿತ ಐಶ್ವರ್ಯಾ
ಐಶ್ವರ್ಯಾ ಸಿಂಧೋಗಿ

Updated on: Dec 08, 2024 | 11:19 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ 70 ದಿನಗಳು ಕಳೆದಿವೆ. ದಿನದಿಂದ ದಿನಕ್ಕೆ ಆಟದ ರೋಚಕತೆ ಹೆಚ್ಚಾಗುತ್ತಿದೆ. ಪ್ರತಿ ಸಂಡೇ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಆದರೆ ಕೆಲವು ವಾರ ವಿನಾಯಿತಿ ಇರುತ್ತದೆ. ಈ ವಾರ (ಡಿಸೆಂಬರ್​ 8) ಕೂಡ ಯಾರೂ ಎಲಿಮಿನೇಟ್ ಆಗಿಲ್ಲ. ಆದರೆ ಈ ವಿಚಾರವನ್ನು ಬಿಗ್ ಬಾಸ್​ ಮನೆಯೊಳಗಿನ ಸದಸ್ಯರಿಗೆ ಇನ್ನೂ ತಿಳಿಸಿಲ್ಲ. ನಾಮಿನೇಷನ್ ಆಗಿದ್ದವರ ಪೈಕಿ ಈ ವಾರ ಚೈತ್ರಾ ಕುಂದಾಪುರ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಡೇಂಜರ್​ ಜೋನ್ ತಲುಪಿದ್ದರು. ಆದರೆ ಕೊನೇ ಕ್ಷಣದಲ್ಲಿ ಐಶ್ವರ್ಯಾ ಅವರಿಗೆ ಒಂದು ಟ್ವಿಸ್ಟ್​ ನೀಡಲಾಯಿತು.

ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಸ್ವಲ್ಪ ಬೇರೆ ರೀತಿ ಇರಲಿದೆ ಎಂದು ಕಿಚ್ಚ ಸುದೀಪ್ ಅವರು ತಿಳಿಸಿದರು. ಡೇಂಜರ್​ ಜೋನ್​ನಲ್ಲಿ ಇರುವ ಚೈತ್ರಾ ಕುಂದಾಪುರ ಅವರು ಕನ್ಫೆಷನ್​ ರೂಮ್​ಗೆ ಬರಬೇಕು. ಐಶ್ವರ್ಯಾ ಸಿಂಧೋಗಿ ಅವರು ಆ್ಯಕ್ಟಿವಿಟಿ ಏರಿಯಾಗೆ ಬರಬೇಕು ಎಂದು ಆದೇಶಿಸಲಾಯಿತು. ಟೆನ್ಷನ್​ ಮಾಡಿಕೊಂಡ ಐಶ್ವರ್ಯಾ ಅವರು ಆ್ಯಕ್ಟಿವಿಟಿ ಏರಿಯಾದಲ್ಲಿ ಬಂದು ನಿಂತುಕೊಂಡರು.

ಇನ್ನೇನು ತಾವು ಎಲಿಮಿನೇಟ್​ ಆಗಬಹುದು ಎಂದುಕೊಂಡಿದ್ದ ಐಶ್ವರ್ಯಾ ಅವರಿಗೆ ಕೊನೇ ಹಂತದಲ್ಲಿ ಸರ್ಪ್ರೈಸ್​ ಸಿಕ್ಕಿತು. ‘ವಾಪಸ್ ಹೋಗಿ ಆಟ ಆಡಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಆ ಮಾತು ಕೇಳಿ ಐಶ್ವರ್ಯಾ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಕೂಡಲೇ ಅವರು ಅಳಲು ಆರಂಭಿಸಿದರು. ನಿಂತಲ್ಲೇ ಅವರು ಕುಸಿದರು. ಬಳಿಕ ಕುಳಿತುಕೊಂಡು ಕಣ್ಣೀರು ಹಾಕಿದರು. ವಾಪಸ್ ಅವರು ಬಿಗ್ ಬಾಸ್​ ಮನೆಯ ಒಳಗೆ ಬಂದಾಗ ಎಲ್ಲರಿಗೂ ಅಚ್ಚರಿ ಆಯಿತು.

ಚೈತ್ರಾ ಕುಂದಾಪುರ ಎಲಿಮಿನೇಟ್​ ಆಗಿದ್ದಾರೆ ಎಂದೇ ಬಹುತೇಕರು ಭಾವಿಸಿದ್ದಾರೆ. ಸದ್ಯಕ್ಕೆ ಅವರನ್ನು ಕನ್ಫೆಷನ್​ ರೂಮ್​ನಲ್ಲಿ ಇರಿಸಲಾಗಿದೆ. ಅಸಲಿ ವಿಷಯ ಏನೆಂದರೆ, ಈ ವಾರ ಎಲಿಮಿನೇಷನ್ ಇಲ್ಲ. ಓಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಜನರ ವೋಟಿಂಗ್ ಬಂದಿದ್ದು ಟಾಸ್ಕ್​ಗೆ ಮಾತ್ರ. ಹಾಗಾಗಿ ಚೈತ್ರಾ ಕೂಡ ವಾಪಸ್ ಮನೆಯ ಒಳಗೆ ಹೋಗಲಿದ್ದಾರೆ. ಆದರೆ ಆ ವಿಷಯನ್ನು ಸೋಮವಾರದ (ಡಿ.9) ಸಂಚಿಕೆಯಲ್ಲಿ ತೋರಿಸಲಾಗುವುದು.

ಇದನ್ನೂ ಓದಿ: ದಿನದಿನಕ್ಕೂ ಚೈತ್ರಾಗೆ ಹುಚ್ಚು ಜಾಸ್ತಿ ಆಗುತ್ತಿದೆ: ಮುಲಾಜಿಲ್ಲದೇ ಹೇಳಿದ ರಜತ್​

ಸದ್ಯಕ್ಕೆ ಚೈತ್ರಾ ಕುಂದಾಪುರ ಅವರು ಕನ್ಫೆಷನ್​ ರೂಮ್​ನಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದಾರೆ. ಕೆಲವರು ಒಂದು ನಿಮಿಷ ಕೂಡ ಚೈತ್ರಾ ಅವರನ್ನು ನೆನಪಿಸಿಕೊಳ್ಳತ್ತಿಲ್ಲ. ಆ ವಿಚಾರ ತಿಳಿದ ಚೈತ್ರಾ ಅವರಿಗೆ ಬೇಸರ ಆಗಿದೆ. ಕೆಲವರು ಮಾತ್ರ ಚೈತ್ರಾ ಬಗ್ಗೆ ಮಾತನಾಡುತ್ತಿದರು. ‘ಕನಿಷ್ಠ ಇಷ್ಟು ಜನರಾದರೂ ಮಿಸ್ ಮಾಡಿಕೊಳ್ಳುವ ಹಾಗೆ ನಾನು ಬದುಕಿದ್ದೇನಲ್ಲ’ ಎಂದು ಚೈತ್ರಾ ಅವರು ಎಮೋಷನಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us