
ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಈಗ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಭರ್ಜರಿ ಜಯ ಸಾಧಿಸಿ ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ತಮ್ಮ ಮಗನ ಬಾಲ್ಯದ ಒಂದು ಭಾವುಕ ಕಥೆಯನ್ನು ಹಂಚಿಕೊಂಡಿದ್ದಾರೆ. ತಂಗಿಯ ಸಾವು ವಿಜಯ್ ಅವರನ್ನು ಹೇಗೆ ಬದಲಿಸಿತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.
ವಿಜಯ್ ಅವರ ತಂಗಿ ವಿದ್ಯಾ 1984ರಲ್ಲಿ ತಮ್ಮ 2ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ ಲ್ಯುಕೇಮಿಯಾ ಎಂಬ ಕಾಯಿಲೆ ಇತ್ತು. ಇದು ಒಂದು ರೀತಿಯ ರಕ್ತದ ಕ್ಯಾನ್ಸರ್. ವಿದ್ಯಾ ಸಾವು ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿತ್ತು. ತಂಗಿಯ ಸಾವಿಗಿಂತ ಮುನ್ನ ವಿಜಯ್ ತುಂಬಾ ಗಲಾಟೆ ಮಾಡುವ, ಸದಾ ನಗುವ ಮಗುವಾಗಿದ್ದರು. ಆದರೆ ತಂಗಿ ದೂರವಾದ ನಂತರ ವಿಜಯ್ ಸಂಪೂರ್ಣವಾಗಿ ಬದಲಾದರು. ಅವರು ಮೌನ ಸ್ವಭಾವದ ಹುಡುಗನಾಗಿ ಬಿಟ್ಟರು. ಗಲಾಟೆಯೂ ಕಡಿಮೆ ಆಯಿತು. ಶಾಲೆಯಲ್ಲಿ ತಂಗಿಯರ ಕುರಿತು ಯಾವುದೇ ವಿಷಯ ಬಂದರೂ ವಿಜಯ್ ಭಾವುಕರಾಗುತ್ತಿದ್ದರು. ಇದನ್ನು ಅವರ ಶಾಲೆಯ ಶಿಕ್ಷಕರು ಕೂಡ ಗಮನಿಸಿದ್ದರು. ಅಂದಿನಿಂದ ವಿಜಯ್ ಇಂದಿಗೂ ಹಾಗೆಯೇ ಇದ್ದಾರೆ ಎಂದು ಅವರ ತಾಯಿ ವಿವರಿಸಿದ್ದಾರೆ.
ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಅವರು ಸರ್ಕಾರಿ ಕೆಲಸ ಬಿಟ್ಟು ಪೂರ್ಣಾವಧಿ ಸಿನಿಮಾ ನಿರ್ದೇಶಕರಾಗುವ ಮುನ್ನ ಆ ಕುಟುಂಬ ಮಧ್ಯಮ ವರ್ಗದ ಜೀವನ ನಡೆಸುತ್ತಿತ್ತು. ಆ ಸಮಯದಲ್ಲಿ ತಾಯಿ ಶೋಭಾ ಅವರ ಹಾಡುಗಾರಿಕೆಯ ಆದಾಯದಿಂದಲೇ ಇಡೀ ಕುಟುಂಬ ಸಾಗುತ್ತಿತ್ತು. ಇಂತಹ ಕಷ್ಟದ ದಿನಗಳನ್ನು ನೋಡಿ ಬೆಳೆದ ವಿಜಯ್ ಅವರು ಮುಂದೆ ವೈದ್ಯರಾಗಬೇಕು ಎಂಬುದು ಪೋಷಕರ ಆಸೆಯಾಗಿತ್ತು.
ಇದನ್ನೂ ಓದಿ: ಸಿಎಂ ವಿಜಯ್ 52ನೇ ಜನ್ಮದಿನಕ್ಕೆ ತ್ರಿಶಾ ಕೃಷ್ಣನ್ ಮೌನ: ಶುಭಾಶಯದ ಸುಳಿವೇ ಇಲ್ಲ
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಸಿಎಂ ಆದ ತಕ್ಷಣ ವಿಜಯ್ ನೇರವಾಗಿ ಚೆನ್ನೈನಲ್ಲಿರುವ ಪೋಷಕರ ಮನೆಗೆ ಹೋಗಿ ಆಶೀರ್ವಾದ ಪಡೆದಿದ್ದರು. ಮಗನ ಈ ಸಾಧನೆಗೆ ತಂದೆ-ತಾಯಿ ಇಬ್ಬರೂ ಹೆಮ್ಮೆ ಪಟ್ಟಿದ್ದಾರೆ. ‘ವಿಜಯ್ ಕಳೆದ 30 ವರ್ಷಗಳಿಂದ ತಮಿಳುನಾಡಿಗೆ ಏನಾದರೂ ಮಾಡಬೇಕು ಎಂಬ ಕನಸು ಕಂಡಿದ್ದನು. ಇಂದು ತಮಿಳು ಜನರೇ ಅವನನ್ನು ತಮ್ಮ ಸ್ವಂತ ಮಗ, ಸಹೋದರನಂತೆ ಕಂಡು ಗೆಲ್ಲಿಸಿದ್ದಾರೆ’ ಎಂದು ತಂದೆ ಎಸ್.ಎ. ಚಂದ್ರಶೇಖರ್ ಸಂತಸ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.