Akshay Kumar: ಈ ಕಷ್ಟದಲ್ಲೂ ಅಕ್ಷಯ್​ ಕುಮಾರ್​ ಏನೂ ಸಹಾಯ ಮಾಡ್ತಿಲ್ವಾ? ಪತ್ನಿ ಟ್ವಿಂಕಲ್​ ಖನ್ನಾ ಕೊಟ್ರು ಖಡಕ್​ ಉತ್ತರ

ನಿವೃತ್ತ ಐಎಎಸ್​ ಅಧಿಕಾರಿಯೊಬ್ಬರು ಅಕ್ಷಯ್​ ಕುಮಾರ್​ರನ್ನು ಟೀಕಿಸಿದ್ದಾರೆ. ‘ದೇಣಿಗೆ ಸಂಗ್ರಹ ಮಾಡಿ ಜನರಿಗೆ ಸಹಾಯ ಮಾಡಿದಂತೆ ನಟಿಸುವ ಬದಲು ನಿಮ್ಮ ಕುಟುಂಬವು ಜನರ ಬಗ್ಗೆ ಇನ್ನಷ್ಟು ಕರುಣೆ ತೋರಿಸುವುದು ಒಳಿತು’ ಎಂದು ಹೇಳಿದ್ದಾರೆ.

Akshay Kumar: ಈ ಕಷ್ಟದಲ್ಲೂ ಅಕ್ಷಯ್​ ಕುಮಾರ್​ ಏನೂ ಸಹಾಯ ಮಾಡ್ತಿಲ್ವಾ? ಪತ್ನಿ ಟ್ವಿಂಕಲ್​ ಖನ್ನಾ ಕೊಟ್ರು ಖಡಕ್​ ಉತ್ತರ
ಅಕ್ಷಯ್ ಕುಮಾರ್ - ಟ್ವಿಂಕಲ್ ಖನ್ನಾ

Updated on: May 07, 2021 | 2:01 PM

ಕಳೆದ ವರ್ಷ ಲಾಕ್​ಡೌನ್​ ಆದಾಗ ನಟ ಅಕ್ಷಯ್​ ಕುಮಾರ್​ ಅವರು ಪಿಎಂ ಕೇರ್ಸ್​ ಫಂಡ್​ಗೆ ಬರೋಬ್ಬರಿ 25 ಕೋಟಿ ರೂ.ಗಳನ್ನು ನೀಡಿದ್ದರು. ಅದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿತ್ತು. ಅಲ್ಲದೆ, ಬೇರೆ ಸೆಲೆಬ್ರಿಟಿಗಳಿಗೂ ಅಕ್ಷಯ್ ಕುಮಾರ್​ ಮಾದರಿ ಆಗಿದ್ದರು. ಆ ಬಳಿಕವೂ ಕೂಡ ಅವರು ಅನೇಕ ರೀತಿಯಲ್ಲಿ ಜನರಿಗೆ ಸಹಾಯ ಮಾಡಿದ್ದರು. ಈ ವರ್ಷ ಮತ್ತೆ ಲಾಕ್​ಡೌನ್​ ಆಗಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಕೈ ಮೀರುತ್ತಿದೆ. ಚಿಕಿತ್ಸೆ ಸಿಗದೆ ಜನರು ಸಾಯುತ್ತಿದ್ದಾರೆ. ಈ ಸಮಯದಲ್ಲಿ ನಟ ಅಕ್ಷಯ್​ ಕುಮಾರ್​ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

ಸದ್ಯ ದೇಶದಲ್ಲಿ ಆಕ್ಸಿಜನ್​ ಸಿಲಿಂಡರ್​ಗಳ ಕೊರತೆ ಎದುರಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನು ಖರೀದಿಸಲು ಅನುಕೂಲ ಆಗುವಂತೆ ದೇಣಿಗೆ ನೀಡಿ ಎಂದು ಕರೆ ಕೊಟ್ಟು ಅಕ್ಷಯ್​ ಕುಮಾರ್​ ಅವರ ಪತ್ನಿ, ನಟಿ ಟ್ವಿಂಕಲ್​ ಖನ್ನಾ ಟ್ವೀಟ್​ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ನಿವೃತ್ತ ಐಎಎಸ್​ ಅಧಿಕಾರಿಯೊಬ್ಬರು ಅಕ್ಷಯ್​ ಕುಮಾರ್​ರನ್ನು ಟೀಕಿಸಿದ್ದಾರೆ. ‘ಟ್ವಿಂಕಲ್​ ಅವರೇ, ನಿಮ್ಮ ಗಂಡ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ದೇಣಿಗೆ ಸಂಗ್ರಹ ಮಾಡಿ ಜನರಿಗೆ ಸಹಾಯ ಮಾಡಿದಂತೆ ನಟಿಸುವ ಬದಲು ನಿಮ್ಮ ಕುಟುಂಬವು ಜನರ ಬಗ್ಗೆ ಇನ್ನಷ್ಟು ಕರುಣೆ ತೋರಿಸುವುದು ಒಳಿತು’ ಎಂದು ಹೇಳಿದ್ದಾರೆ.

ಈ ಕಮೆಂಟ್​ನಿಂದಾಗಿ ಟ್ವಿಂಟಕ್​ ಖನ್ನಾ ಅವರಿಗೆ ಬೇಸರ ಆಗಿದೆ. ಜನರಿಗೆ ಸಾಕಷ್ಟು ಸಹಾಯ ಮಾಡಿದ ಬಳಿಕವೂ ಇಂಥ ಮಾತುಗಳನ್ನು ಕೇಳಬೇಕಾಗಿ ಬಂದಿರುವುದಕ್ಕೆ ಅವರು ನೊಂದುಕೊಂಡಂತಿದೆ. ಅದರ ನಡುವೆಯೂ ಅವರು ಆ ಟ್ವೀಟ್​ಗೆ ಖಡಕ್​ ಆಗಿ ಉತ್ತರ ನೀಡಿದ್ದಾರೆ.

‘ನಾವು ಈ ಕಾರಣಕ್ಕಾಗಿ 100 ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದೇವೆ. ಇನ್ನೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿದ್ದೇವೆ. ಈಗಾಗಲೇ ನಾನು ಹೇಳಿರುವಂತೆ, ನಾವು-ನೀವು ಅನ್ನೊಂದು ಮುಖ್ಯ ಅಲ್ಲ. ಎಲ್ಲರೂ ಸೇರಿ ಏನು ಮಾಡುತ್ತೇವೆ ಎಂಬುದು ಮುಖ್ಯ. ಇಂಥ ಸಂದರ್ಭದಲ್ಲಿ ಕೈಲಾದಷ್ಟು ದಾನ ಮಾಡುವ ಬದಲು, ಜನರನ್ನು ಕುಗ್ಗಿಸಲು ನಿಮ್ಮ ಶಕ್ತಿ ಖರ್ಚು ಮಾಡುತ್ತಿರುವುದು ವಿಷಾದನೀಯ’ ಎಂದು ಟ್ವಿಂಕಲ್​ ಖನ್ನಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

ಕೊರೊನಾ ಏರಿಕೆ ಮಧ್ಯೆಯೇ ಅಕ್ಷಯ್​ ಕುಮಾರ್​ ಮಾಡಿದ್ರು ಅತಿ ದೊಡ್ಡ ಸಹಾಯ; ಗೌತಮ್​ ಗಂಭೀರ್​ ಮೆಚ್ಚುಗೆ

ಕೊವಿಡ್​ ಸಂಕಷ್ಟಕ್ಕೆ ಅನುಷ್ಕಾ-ವಿರಾಟ್​ 2 ಕೋಟಿ ರೂ. ದೇಣಿಗೆ; ನಿಧಿ ಸಂಗ್ರಹಕ್ಕೆ ಮುಂದಾದ ದಂಪತಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us