
ಸಾಮಾನ್ಯವಾಗಿ ಕೆಲವರಿಗೆ ಹಲ್ಲುಜ್ಜುವಾಗ ಅಥವಾ ಗಟ್ಟಿಯಾದ ಆಹಾರ ಸೇವನೆ ಮಾಡಿದಾಗ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದು ಕೆಲವರ ಅನುಭವಕ್ಕೆ ಬಂದಿರಬಹುದು. ಅಪರೂಪಕ್ಕೆ ಈ ರೀತಿಯಾಗುವುದು ಬಹಳ ಸಾಮಾನ್ಯ. ಆದರೆ ಪದೇ ಪದೇ ಈ ರೀತಿಯಾಗುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಕೆಲವರು ಒಸಡುಗಳಿಂದ ರಕ್ತಸ್ರಾವವಾಗುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಬಹುದು, ಆದರೆ ಈ ರೀತಿ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬಾರದು. ಏಕೆಂದರೆ ಇದು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹಾಗಾದರೆ ಒಸಡುಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಕಾರಣವೇನು, ಈ ರೀತಿಯಾಗುವುದಕ್ಕೂ ಡಯಾಬಿಟಿಸ್ (Diabetes) ಗೂ ಸಂಬಂಧವಿದೆಯೇ, ಇದು ಹೃದಯ ಸಂಬಂಧಿ ಕಾಯಿಲೆಯ ಸಂಕೆತವೇ ತಿಳಿದುಕೊಳ್ಳಿ.
ಹೆಚ್ಚಿನ ಸಂದರ್ಭಗಳಲ್ಲಿ, ಇದು ಒಸಡು ಕಾಯಿಲೆಯಿಂದ ಉಂಟಾಗುತ್ತದೆ (ಪೆರಿಯೊಡಾಂಟಲ್ ಸೋಂಕು). ಒಸಡಿನಲ್ಲಿ ಊತ ಅಥವಾ ಸೋಂಕು ಇದ್ದಾಗ ರಕ್ತಸ್ರಾವವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ರಕ್ತಸ್ರಾವವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ, ಸೋಂಕುಗಳು ಬೇಗನೆ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಒಸಡಿಗೆ ಸಂಬಂಧಪಟ್ಟ ರೋಗಗಳು ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲಿಯೂ ಮಧುಮೇಹ ಇರುವವರಿಗೆ ಒಸಡಿಗೆ ಸಂಬಂಧಪಟ್ಟ ಕಾಯಿಲೆ ಕಂಡುಬರುವ ಅಪಾಯ 3- 4 ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ. ಆದ್ದರಿಂದ, ಒಸಡುಗಳಲ್ಲಿ ರಕ್ತಸ್ರಾವವಾಗಿದ್ದರೆ, ಸಕ್ಕರೆ ಪರೀಕ್ಷೆ ಅಂದರೆ ಡಯಾಬಿಟಿಸ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.
ಹಲವಾರು ಅಧ್ಯಯನಗಳ ಪ್ರಕಾರ, ಒಸಡಿನಲ್ಲಿ ರಕ್ತಸ್ರಾವವಾಗುವುದು ಅಥವಾ ಒಸಡಿಗೆ ಸಂಬಂಧಪಟ್ಟ ಕಾಯಿಲೆ ಇರುವವರಿಗೆ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ. ಆದರೆ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ.
ಇದನ್ನೂ ಓದಿ: ಮಧುಮೇಹ ರೋಗಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು
ಒಸಡುಗಳಲ್ಲಿ ರಕ್ತಸ್ರಾವವಾದರೆ ಮಧುಮೇಹ ಅಥವಾ ಹೃದ್ರೋಗವಿದೆ ಎಂದು ಅರ್ಥವಲ್ಲ. ಆದರೆ ಈ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಇದು ಎಚ್ಚರಿಕೆಯ ಸಂಕೇತವಾಗಿರಬಹುದು. ಹಾಗಾಗಿ ಇದನ್ನು ನಿರ್ಲಕ್ಷಿಸುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಒಸಡುಗಳಲ್ಲಿ ಆಗಾಗ ರಕ್ತಸ್ರಾವವಾಗಿದ್ದರೆ, ಅಥವಾ ಒಸಡುಗಳಲ್ಲಿ ಊತ, ನೋವು ಅಥವಾ ಬಾಯಿಯ ದುರ್ವಾಸನೆ ಇದ್ದರೆ, ನೀವು ಅದನ್ನು ನಿರ್ಲಕ್ಷಿಸಬಾರದು. ಮಧುಮೇಹ ಅಥವಾ ಹೃದ್ರೋಗದ ಕುಟುಂಬದ ಇತಿಹಾಸವಿದ್ದರೂ ಸಹ, ನೀವು ತಜ್ಞರ ಸಲಹೆ ಪಡೆದುಕೊಳ್ಳಿ. ಒಸಡುಗಳಲ್ಲಿ ರಕ್ತಸ್ರಾವವಾಗುವ ಲಕ್ಷಣಗಳು ಕಂಡುಬಂದರೆ, ದಿನಕ್ಕೆ ಎರಡು ಬಾರಿ ಮೃದುವಾದ ಬ್ರಷ್ನಿಂದ ಬ್ರಷ್ ಮಾಡುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ