
ಇತ್ತೀಚಿನ ದಿನಗಳಲ್ಲಿ ಕಾಡುವ ಆರೋಗ್ಯ (Health) ಸಮಸ್ಯೆಗಳಲ್ಲಿ ಅಸಿಡಿಟಿ ಮತ್ತು ಎದೆಯುರಿ ಕೂಡ ಸೇರಿದೆ. ನಮ್ಮ ಆಹಾರಕ್ರಮ ಸರಿಯಿಲ್ಲದಿದ್ದಾಗ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಅಸಿಡಿಟಿ (Acidity) ಮತ್ತು ಎದೆಯುರಿ ಸಾಮಾನ್ಯವಾಗಿ ಒಟ್ಟಿಗೆ ಬರುವ ಸಮಸ್ಯೆಗಳು. ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾದಾಗ ಎದೆಯುರಿ ಉಂಟಾಗುತ್ತದೆ. ಅದರಲ್ಲಿಯೂ ಎದೆಯುರಿ ರಾತ್ರಿ ಸಮಯದಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ. ಹೊಟ್ಟೆಯಲ್ಲಿರುವ ಆಮ್ಲ ನಿಮ್ಮ ಅನ್ನನಾಳಕ್ಕೆ, ಅಂದರೆ ಆಹಾರ ನಾಳಕ್ಕೆ ಮತ್ತೆ ಹರಿಯುತ್ತದೆ. ಈ ಸಮಸ್ಯೆ ಆಗಾಗ ಸಂಭವಿಸಿದರೆ, ಅದನ್ನು ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ, ಎದೆಯುರಿಯಂತಹ ಲಕ್ಷಣಗಳು ಹೆಚ್ಚಾಗಿ ಅನುಭಕ್ಕೆ ಬರುತ್ತದೆ. ಈ ರೀತಿ ನಿಮಗೂ ಆಗುತ್ತಿದ್ದರೆ ಸರಳವಾಗಿ ಈ ಆರೋಗ್ಯ ಸಮಸ್ಯೆಗೆ ಯಾವ ರೀತಿ ಪರಿಹಾರ (Natural remedies) ನೀಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಸಾಮಾನ್ಯವಾಗಿ ಅಸಿಡಿಟಿ ಮತ್ತು ಎದೆಯುರಿ ಸಮಸ್ಯೆ ಉಂಟಾದಾಗ, ಆಹಾರ ಸೇವಿಸಿದ ನಂತರ ಅಥವಾ ರಾತ್ರಿ ಸಮಯದಲ್ಲಿ ಬಾಯಲ್ಲಿ ಹುಳಿ ರುಚಿ, ಎದೆ ನೋವು, ಆಹಾರ ಅಥವಾ ದ್ರವ ರೂಪದಲ್ಲಿ ಜೊಲ್ಲು ಸುರಿಸುವಿಕೆ ಕಂಡು ಬರುತ್ತದೆ. ಇನ್ನು ಕೆಲವರಲ್ಲಿ ನಿರಂತರ ಕೆಮ್ಮು, ಧ್ವನಿಯಲ್ಲಿ ಒರಟುತನ ಅಥವಾ ಗಂಟಲಿನಲ್ಲಿ ಏನಾದರೂ ಸಿಲುಕಿಕೊಂಡಂತೆ ಭಾಸವಾಗುತ್ತದೆ. ಈ ರೀತಿಯಾದಾಗ ಅದನ್ನು ಅಲಕ್ಷ್ಯ ಮಾಡಬೇಡಿ. ಏಕೆಂದರೆ ಇದು ಪದೇ ಪದೇ ಆಗುವುದು ಒಳ್ಳೆಯದಲ್ಲ.
ಈ ಎರಡು ಪದಾರ್ಥಗಳು ಫೈಬರ್ ನಿಂದ ಸಮೃದ್ಧವಾಗಿದೆ, ಇದು ಹೊಟ್ಟೆಯ ಆಮ್ಲವನ್ನು ಹೀರಿಕೊಳ್ಳುತ್ತದೆ. ಜೊತೆಗೆ ಬೇಗನೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನುವ ಅಭ್ಯಾಸ ತಡೆಯಲು ಸಹಾಯವಾಗುತ್ತದೆ. ಅಲ್ಲದೆ ಆಮ್ಲೀಯತೆ ಹೆಚ್ಚಾಗುವುದನ್ನು ತಡೆಯುತ್ತದೆ. ಹಾಗಾಗಿ ನಿಮ್ಮ ಉಪಾಹಾರದಲ್ಲಿ ಓಟ್ಸ್ ತಿನ್ನಿರಿ, ಅದರ ಜೊತೆಗೆ ಬಾಳೆಹಣ್ಣನ್ನು ಸೇರಿಸಿಕೊಳ್ಳಿ. ಇದು ಎದೆಯುರಿ ಮತ್ತು ರಿಫ್ಲಕ್ಸ್ ಅನ್ನು ತಡೆಯುತ್ತದೆ.
ಶುಂಠಿ ನೈಸರ್ಗಿಕವಾಗಿ ಉರಿಯೂತವನ್ನು ತಡೆಯುತ್ತದೆ. ಇದು ಹೊಟ್ಟೆಯನ್ನು ಶಾಂತಗೊಳಿಸುತ್ತದೆ ಮತ್ತು ಗ್ಯಾಸ್ ಮತ್ತು ಎದೆಯುರಿಯಿಂದ ಪರಿಹಾರ ನೀಡುತ್ತದೆ. ಪ್ರತಿನಿತ್ಯ ಶುಂಠಿ ಚಹಾ ಕುಡಿಯಿರಿ ಅಥವಾ ಸೂಪ್ಗೆ ಶುಂಠಿಯನ್ನು ಸೇರಿಸಿ. ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುವ ಪ್ರೋಬಯಾಟಿಕ್ಗಳನ್ನು ಹೊಂದಿರುತ್ತದೆ. ಹಾಗಾಗಿ ಇವೆರಡು ಆಹಾರಗಳನ್ನು ಸೇವನೆ ಮಾಡಿ.
ನಿಮ್ಮ ಆಹಾರದಲ್ಲಿ ಪಾಲಕ್, ಬ್ರೊಕೊಲಿ, ಸೌತೆಕಾಯಿ, ದ್ವಿದಳ ಧಾನ್ಯ ಮುಂತಾದ ಹಸಿರು ತರಕಾರಿಗಳ ಪ್ರಮಾಣವನ್ನು ಹೆಚ್ಚಿಸಬೇಕು. ಅವುಗಳಲ್ಲಿ ಆಮ್ಲ ಮತ್ತು ಕೊಬ್ಬು ತುಂಬಾ ಕಡಿಮೆಯಿರುತ್ತದೆ. ಜೊತೆಗೆ ಬೇಯಿಸಿದ ಅಥವಾ ಲಘುವಾಗಿ ಹುರಿದ ತರಕಾರಿಗಳನ್ನು ಸೇವಿಸಿ. ಧಾನ್ಯಗಳು ಕಂದು ಅಕ್ಕಿ, ಕ್ವಿನೋವಾ ಮತ್ತು ಗೋಧಿ ಬ್ರೆಡ್ನಂತಹ ಧಾನ್ಯಗಳನ್ನು ಸೇವಿಸಿ. ಅವು ಫೈಬರ್ನಲ್ಲಿ ಅಧಿಕವಾಗಿದ್ದು ಹೊಟ್ಟೆಯಲ್ಲಿ ಆಮ್ಲವನ್ನು ಕಡಿಮೆ ಮಾಡುತ್ತದೆ. ಬಿಳಿ ಅಕ್ಕಿ ಅಥವಾ ಸಂಸ್ಕರಿಸಿದ ಹಿಟ್ಟಿನ ಬದಲಿಗೆ ಧಾನ್ಯಗಳನ್ನು ಬಳಸುವುದು ಬಹಳ ಒಳ್ಳೆಯದು.
ಇದನ್ನೂ ಓದಿ: ಕೇವಲ 5 ಸೆಕೆಂಡುಗಳ ಕಾಲ ಹೀಗೆ ಮಾಡಿದ್ರೆ ಗ್ಯಾಸ್ ಸಮಸ್ಯೆಯಿಂದ ಮುಕ್ತಿ
ಸಾಮಾನ್ಯವಾಗಿ ಅಲೋವೆರಾ ಜ್ಯೂಸ್ ನೈಸರ್ಗಿಕ ಆಮ್ಲಗಳನ್ನು ತಟಸ್ಥಗೊಳಿಸುತ್ತದೆ. ಊಟಕ್ಕೆ ಮೊದಲು ಸ್ವಲ್ಪ ಈ ರಸವನ್ನು ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇದರ ಸೇವನೆ ಮಾಡುವ ಮೊದಲು ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳಿ. ಇದರ ಬದಲು ಊಟದ ನಂತರ ಬೆಚ್ಚಗಿನ ಗಿಡಮೂಲಿಕೆ ಚಹಾ ಕುಡಿಯಬಹುದು. ಆದರೆ ಪುದೀನಾ ಚಹಾವನ್ನು ತಪ್ಪಿಸಿ ಏಕೆಂದರೆ ಇದು ಆಮ್ಲವನ್ನು ಹೆಚ್ಚಿಸಬಹುದು. ಆದಷ್ಟು ಮಸಾಲೆಯುಕ್ತ, ಕೊಬ್ಬಿನ ಮತ್ತು ಹುಳಿ ಆಹಾರಗಳ ಸೇವನೆ ಮಾಡುವುದನ್ನು ತಪ್ಪಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಬಿಟ್ಟುಬಿಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ