ಯುವಕರ ಹಠಾತ್ ಹೃದಯಾಘಾತ: ಸರ್ಕಾರ ನೇಮಿಸಿದ ಸಮಿತಿ ವರದಿಯಲ್ಲಿ ಆತಂಕಕಾರಿ ಅಂಶ ಬಯಲು
ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಮೋಸ್ಟ್ ಕಾಮನ್ ರೀತಿ ಆಗಿದೆ. ವಯಸ್ಸು 20 ದಾಟ್ಟಿರಲ್ಲ ಅದಾಗಲೇ ಹಾರ್ಟ್ ನೊಳಗೆ ಸ್ಟಂಟ್ ಕೂತ್ತಿರುತ್ತೆ. ಕಳೆದ 10 ವರ್ಷಗಳ ಪೈಕಿ ಕಳೆದ ಎರಡು ವರ್ಷಗಳಲ್ಲಿ ಹೃದಯಾಘಾತದ ಪ್ರಕರಣಗಳು ಸರಾಸರಿ 40% ಹೆಚ್ಚಳವಾಗಿದೆ. ಅದರಲ್ಲೂ ಹೆಚ್ಚಾಗಿ ಯುವಕರಲ್ಲಿ ಹೃದಯಾಘಾತ ಏರಿಕೆ ಆಗುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಕಾರಣ ಹುಡುಕಲು ಸಮಿತಿಗೆ ತಿಳಿಸಿತ್ತು.ಇದೀಗ ಸಮಿತಿಯ ವರದಿ ಸಹ ಸಿದ್ಧವಾಗಿದ್ದು, ವರದಿಯಲ್ಲಿ ಆತಂಕಕಾರಿ ಅಂಶ ಬಯಲಾಗಿದೆ.

ಬೆಂಗಳೂರು, (ಜೂನ್ 24): ಈ ಹಿಂದೆ 40 ವರ್ಷ ಮೇಲ್ಪಟ್ಟವರಲ್ಲಿ ಹೃದಯಾಘಾತ (Heart attack) ಸಂಭವಿಸುತ್ತಿತ್ತು. ಆದ್ರೆ, ಇದೀಗ ಯುವ ಸಮೂಹವನ್ನ ಈ ಹಾರ್ಟ್ ಅಟ್ಯಾಕ್ ಎನ್ನುವುದು ಕಾಡತೊಡಗಿದೆ. ಯುವಕರಲ್ಲಿ (Y0uths) ಹೆಚ್ಚು ಹೃದಯಾಘಾತವಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ಕಾರಣ ಹುಡುಕಲು ಸಮಿತಿಗೆ ಹೇಳಿತ್ತು. ಇದೀಗ ಜಯದೇವ ಹೃದ್ರೋಗ (Jayadeva Institute of Cardiovascular Sciences and Research)ಸಂಸ್ಥೆಯ ನಿರ್ದೇಶಕ ರವೀಂದ್ರ ಅಧ್ಯಕ್ಷತೆಯ ಸಮಿತಿ ವರದಿ ಸಿದ್ಧವಾಗಿದ್ದು, ಇನ್ನೆರಡು ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಕೈಸೇರಲಿದೆ. ಆದ್ರೆ, ವರದಿಯಲ್ಲಿ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಹಾಗಾದ್ರೆ, ವರದಿಯಲ್ಲೇನಿದೆ? ಹಠಾತ್ ಹೃದಯಘಾತಕ್ಕೆ ಕಾರಣವೇನು ಎನ್ನುವ ಅಂಶ ಈ ಕೆಳಗಿನಂತಿದೆ ನೋಡಿ.
ಇತ್ತಿಚೆಗೆ 19 ವರ್ಷ, 21 ವರ್ಷ ಹೀಗೆ ಸಣ್ಣ ವಯಸ್ಸಿನಲ್ಲೇ ಅನೇಕರಿಗೆ ಹಠಾತ್ ಹೃದಯಾಘಾತ ಸಂಭವಿಸ್ತಿದೆ. ಅನೇಕರು ಇದರಿಂದಲೇ ಪ್ರಾಣ ಕೈ ಚೆಲ್ಲಿದ್ದಾರೆ. ಇದು ವೈದ್ಯರಿಗೂ ಕೂಡಾ ಆತಂಕವನ್ನ ಮೂಡಿಸಿತ್ತು. ಎಲ್ಲೋ ಒಂದು ಎರಡು ಪ್ರಕರಣ ಆಗಿದ್ರೆ ಇದು ರೇರ್ ಕೇಸ್ ಅಂತ ಹೇಳಬಹುದಿತ್ತು. ಆದ್ರೆ ಅನೇಕ ಯುವಕರಲ್ಲಿ ಈ ಹೃದಯಾಘಾತ ಸಂಭವಿಸುತ್ತಿದೆ.
ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮತ್ತಿಬ್ಬರು ಸಾವು: ಒಂದೇ ತಿಂಗಳಲ್ಲಿ 12 ಜನ ಬಲಿ
ರಾಜ್ಯದಲ್ಲಿ ಹೃದಯಾಘಾತ ಏರಿಕೆ ಹಿನ್ನಲೆ ಸಿಎಂ ಸಿದ್ಧರಾಮಯ್ಯ ಕಾರಣ ಹುಡುಕುವಂತೆ ತಜ್ಞರ ಸಮಿತಿ ರಚಿಸಿ ವರದಿಗೆ ಹೇಳಿದ್ದರು. ಈ ಹಿನ್ನೆಲೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ರವೀಂದ್ರ ಅಧ್ಯಕ್ಷತೆ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆ ಮಾಡಿದ್ದರು. ಅನೇಕರಿಗೆ ಕೋವಿಡ್ ವ್ಯಾಕ್ಸಿನ್ನಿಂದ ಈ ಸಾವುಗಳಾಗಿರಬಹುದು ಎನ್ನುವ ಅನುಮಾನ ಕೂಡಾ ಕಾಡಿತ್ತು. ಈ ಬೆನ್ನಲ್ಲೇ ಕೊವಿಡ್ ಬಳಿಕ ಹೃದಯಘಾತವಾದ ಕೊವಿಡ್ ಲಸಿಕೆ ಪಡೆದ 18 ರಿಂದ 45 ವರ್ಷದ ಒಳಗಿನ ಸುಮಾರು 250 ಯುವಕರ ಮೇಲೆ ಸಂಶೋಧನೆ ಮಾಡಲಾಗಿದೆ.
ಇದೀಗ ಈ ಸಂಶೋಧನೆಯ ವರದಿಯನ್ನ ಸಮಿತಿ ಸಿದ್ಧ ಪಡಿಸಿದ್ದು, ಆತಂಕಾರಿ ಅಂಶ ಬಯಲಾಗಿದೆ. ಕೊವಿಡ್ ಅಷ್ಟೇ ಅಲ್ಲದೆ ಯುವಕರು ಕೆಲ ಚಟಗಳಿಂದಲೂ ಅತಿ ಹೆಚ್ಚು ಹೃದಯಾಘಾತವಾಗಿರುವ ಪ್ರಕರಣಗಳು ಕಂಡು ಬಂದಿದೆ ಅನ್ನೋ ಅಂಶ ಬಯಲಾಗಿದೆಯಂತೆ.
ಕೊವಿಡ್ ಬಳಿಕ ಜಯದೇವ ಆಸ್ಪತ್ರೆಗಳಲ್ಲಿ ಕಂಡು ಬಂದ ಹೃದಯಘಾತ ಪ್ರಕರಣಗಳ ಮೇಲೆ ಜಯದೇವ ನಿರ್ದೇಶಕ ಡಾ ರವೀಂದ್ರ ನೇತೃತ್ವದಲ್ಲಿ ಈ ಅಧ್ಯಯನ ಮಾಡಿಲಾಗಿದೆ. ಈ ಅಧ್ಯಯನದಲ್ಲಿ ಕೊವಿಡ್ ಲಸಿಕೆ ಪಡೆದವರನ್ನು ಒಳಪಡಿಸಲಾಗಿದ್ದು, ಹೃದಯಘಾತಕ್ಕೆ ಏನೆಲ್ಲ ಅಂಶಗಳು ಕಾರಣವಾಗಿರಬಹುದು ಎಂದು ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದಲ್ಲಿ ಒಳಗಾದವರ ಕೇಸ್ ಹಿಸ್ಟರಿ ಪಡೆಯಲಾಗಿದ್ದು, ಧೂಮಾಪಾನಿ, ಮಧ್ಯಪಾನಿಗಳ, ಕುಟುಂಬದಲ್ಲಿ ಯಾರಿಗಾದ್ರೂ ಹೃದಯಘಾತದ ಹಿಸ್ಟರಿ, ಜೀವನ ಶೈಲಿ ಎಲ್ಲ ಮಾಹಿತಿಗಳನ್ನು ಪಡೆದು ಹೃದಯಘಾತಕ್ಕೆ ಏನೆಲ್ಲ ಅಂಶ ಕಾರಣ ಎನ್ನುವ ವರದಿ ಸಿದ್ಧಪಡಿಸಿದ್ದು, ಇನ್ನೇರಡು ದಿನಗಳಲ್ಲಿ ಈ ವರದಿಯನ್ನ ಸಿಎಂ ಮುಂದಿಡಲು ಸಮಿತಿ ಮುಂದಾಗಿದೆ
ಹಠಾತ್ ಹೃದಯಾಘಾತಕ್ಕೆ ಕಾರಣಗಳೇನು? ವರದಿಯಲ್ಲೇನಿದೆ..?
- ಗುಟ್ಕಾ ಸೇವನೆ
- ಧೂಮಪಾನ
- ಮದ್ಯಪಾನ
- ಕುಟುಂಬದ ವಂಶಾವಳಿ ಖಾಯಿಲೆಗಳು
- ಬೇರೆ ಖಾಯಿಲೆಗಳಿಂದ ಬಳಲುವವರಿಗೂ ಹಾರ್ಟ್ ಅಟ್ಯಾಕ್
ಒಟ್ಟಿನಲ್ಲಿ ಕೊವಿಡ್ ಹಾಗೂ ಲಸಿಕೆ ಮೇಲೆ ಸಾಕಷ್ಟು ಅನುಮಾನಗಳ ಹುತ್ತ ಕೇಳಿ ಬಂದಿತ್ತು ಆದ್ರೆ, ಇದೀಗ ಯುವಕರು ಹೃದಯಾಘಾತಕ್ಕೆ ತಮ್ಮ ಚಟಗಳಿಂದ ಬಲಿಯಾಗುತ್ತಿದ್ದಾರೆ ಎನ್ನಲಾಗಿದ್ದು, ಇದು ಗಂಭೀರ ವಿಚಾರವಾಗಿದೆ. ಇನ್ನು ಎರಡು ದಿನಗಳಲ್ಲಿ ಸಂಪೂರ್ಣವಾದ ವರದಿಯನ್ನು ಸಮಿತಿ, ಸಿಎಂ ಸಿದ್ದರಾಮಯ್ಯರಿಗೆ ಸಲ್ಲಿಸಲಿದ್ದು, ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.
Published On - 10:30 pm, Tue, 24 June 25







