
ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes), ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರಲ್ಲಿಯೇ ಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವೈದ್ಯರ ಪ್ರಕಾರ, ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬಗ್ಗೆ ವೈದ್ಯ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಅವರು ನೀಡಿದ ಮಾಹಿತಿಯ ಅನುಸಾರ, ದೇಹದಲ್ಲಿ ಉಂಟಾಗುವ ‘ಇನ್ಫ್ಲಮೇಶನ್’ ಅಥವಾ ಒಳಗಿನ ಉರಿ ಅನೇಕ ದೀರ್ಘಕಾಲಿಕ ಕಾಯಿಲೆಗಳ ಮೂಲ ಕಾರಣವಾಗಿದೆ. ಪ್ರತಿದಿನ ಬಳಸುವ ರಿಫೈನ್ ಎಣ್ಣೆಗಳು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅದರ ಬದಲು ಸಾಂಪ್ರದಾಯಿಕ ಗಾಣದ ಎಣ್ಣೆ ಬಳಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ಜೊತೆಗೆ ಡಯಾಬಿಟಿಸ್ ನಿಯಂತ್ರಣಕ್ಕೆ ತರಲು ಪ್ರತಿನಿತ್ಯ ಯಾವ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದಾರೆ.
ಇಂದಿನ ಜೀವನಶೈಲಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಬಿಳಿ ಅಕ್ಕಿಯನ್ನು ಹೆಚ್ಚಾಗಿ ಬಳಸುವುದು, ದಿನಕ್ಕೆ ಹಲವು ಬಾರಿ ಸಕ್ಕರೆ ಹಾಕಿದ ಚಹಾ ಅಥವಾ ಕಾಫಿ ಕುಡಿಯುವುದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಏಕಾಏಕಿ ಹೆಚ್ಚಿಸುತ್ತದೆ. ಇದರಿಂದ ‘ಇನ್ಸುಲಿನ್ ರೆಸಿಸ್ಟೆನ್ಸ್’ ಉಂಟಾಗಿ, ನಂತರ ಡಯಾಬಿಟಿಸ್, ಹೊಟ್ಟೆಯ ಸುತ್ತ ಕೊಬ್ಬು ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.
ಇದನ್ನೂ ಓದಿ: ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು?
ಡಾ. ವಿಕ್ರಾಂತ್ ಅವರ ಪ್ರಕಾರ, ವೈಟ್ ರೈಸ್ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಬಿಡಬೇಕಾಗಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಿ, ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ಗ್ಲೂಕೋಸ್ ಮಟ್ಟ ತಕ್ಷಣ ಏರಿಕೆಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಶುಗರ್ ನಿಯಂತ್ರಣಕ್ಕೆ ನೆರವಾಗಬಹುದು.
ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಡಯಾಬಿಟಿಸ್ ನಿಯಂತ್ರಣದಲ್ಲಿ ಇಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ