
ಸಂಪೂರ್ಣ ವಿಷಯ ತಿಳಿಯದೆಯೇ ಅಥವಾ ಗೊತ್ತಿದ್ದೂ ಹಿರಿಯರಿಗೆ ಬೈದಂಥ ಘಟನೆಗಳ ವಿಚಾರವಾಗಿ ನಿಮ್ಮ ಮನಸ್ಸಿನಲ್ಲಿ ಚಿಂತೆ- ಪಾಪ ಪ್ರಜ್ಞೆ ಕಾಡುತ್ತಾ ಇದ್ದಲ್ಲಿ ಅದರ ನಿವಾರಣೆಗೆ ಹಸುವಿಗೆ ಯಥಾ ಶಕ್ತಿ ಬಾಳೇಹಣ್ಣು ನೀಡುವುದು ಒಳ್ಳೆಯದು.
ಸಂತೋಷವೋ ಸಂಭ್ರಮವೋ ಅಥವಾ ಭಾವನಾತ್ಮಕ ಕ್ಷಣಗಳೋ ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಭಾವನಾತ್ಮಕ ಕ್ಷಣಗಳಲ್ಲಿ ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ಕಡಿಮೆ ಖರ್ಚಿನಲ್ಲಿ ಉಡುಗೊರೆ ನೀಡಬೇಕು ಎಂದು ನೀವು ಅಂದುಕೊಂಡಿರುತ್ತೀರಿ, ನಾನಾ ಕಾರಣಗಳಿಂದ ಅದು ಬಜೆಟ್ ಮೀರಿ ಹೋಗುವಂತೆ ಆಗಲಿದೆ. ಇತರರ ಜೊತೆಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಬೇಡಿ.
ಹಣವನ್ನು ಮಾನದಂಡವಾಗಿ ಇರಿಸಿಕೊಂಡು ಕೆಲವರು ನಿಮ್ಮನ್ನು ನಿರ್ಲಕ್ಷ್ಯ- ತಿರಸ್ಕಾರ ಭಾವನೆಯಿಂದ ನೋಡುತ್ತಾರೆ ಎಂಬ ಭಾವನೆ ಮನದಲ್ಲಿ ಗಟ್ಟಿಯಾಗಿ ಕೂರಲಿದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಡುವ ಮುನ್ನ ಹನುಮಾನ್ ಚಾಲೀಸಾ ಕೇಳಿಸಿಕೊಳ್ಳುವುದು ಅಥವಾ ಪಠಿಸುವುದರಿಂದ ಹಲವು ನಕಾರಾತ್ಮಕ ಬೆಳವಣಿಗೆಗಳು ದೂರವಾಗುತ್ತವೆ. ನಿಮ್ಮ ಜೊತೆಯಲ್ಲಿ ಉದ್ಯೋಗ ಮಾಡುವವರು ಸಹಾಯ ಕೇಳಿಕೊಂಡು ಬಂದಲ್ಲಿ ಅವರಿಗೆ ಸ್ಪಂದಿಸಿ.
ನಿಮ್ಮಲ್ಲಿ ಯಾರು ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂಥವರು ಸೋಷಿಯಲ್ ಮೀಡಿಯಾದಲ್ಲಿ ಹಾಕುವಂಥ ಪೋಸ್ಟ್ ನಿಂದಲೋ ಅಥವಾ ಮಾಧ್ಯಮಗಳ ಎದುರಿಗೆ ನೀವು ಆಡಿದ ಮಾತಿನಿಂದ ಕೆಲವು ವಿವಾದಕ್ಕೆ ಸಿಲುಕಿಕೊಳ್ಳುವಂತೆ ಆಗಲಿದೆ. ಆಕಸ್ಮಿಕವಾಗಿ ನಿಮಗೆ ಪರಿಚಯ ಆದಂಥ ವ್ಯಕ್ತಿಯೊಬ್ಬರ ಒಡನಾಟದಿಂದ ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಮುಖ್ಯವಾದ ರೆಫರೆನ್ಸ್ ಗಳು ದೊರೆಯುವ ಯೋಗ ಇದೆ.
ಲೇಖನ- ಸ್ವಾತಿ ಎನ್.ಕೆ.