India Russia Friendship Astrology: ಜಗತ್ತಿನ ದಿಕ್ಕು ಬದಲಿಸಲು ತಕ್ಕಡಿ ಹಿಡಿದು ನಿಂತ ಶನೈಶ್ಚರ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸ್ವಾಗತ ಕೋರಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶಿಷ್ಟಾಚಾರವನ್ನು ಬದಿಗೆ ಸರಿಸಿ, ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೇ ತೆರಳಿದ್ದಾರೆ. ಈ ರೀತಿಯ ನಡವಳಿಕೆ ಹಲವು ಸಂದೇಶಗಳನ್ನು ರವಾನಿಸುತ್ತದೆ. ದೇಶಕ್ಕೆ ಭೇಟಿ ನೀಡುತ್ತಿರುವ ನಾಯಕನ ಬಗ್ಗೆ ಮೋದಿ ಅವರಿಗೆ ಇರುವ ಸ್ನೇಹ, ಸೌಹಾರ್ದಯುತ ಸಂಬಂಧ, ದೂರಗಾಮಿ ಪರಸ್ಪರ ಸಹಕಾರ ಹೀಗೆ ನೂರು ಅರ್ಥಗಳನ್ನು ಧ್ವನಿಸುತ್ತವೆ. ಆ ಎಲ್ಲವನ್ನೂ ಜ್ಯೋತಿಷ್ಯದ ಗ್ರಹಗತಿಗಳು ಸಹ ಸೂಚಿಸುತ್ತಿವೆಯಾ ಎಂಬುದನ್ನು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ವಿಶ್ಲೇಷಣೆ ಮಾಡಿರುವ ಲೇಖನ ಇಲ್ಲಿದೆ.

India Russia Friendship Astrology: ಜಗತ್ತಿನ ದಿಕ್ಕು ಬದಲಿಸಲು ತಕ್ಕಡಿ ಹಿಡಿದು ನಿಂತ ಶನೈಶ್ಚರ
ವ್ಲಾಡಿಮಿರ್ ಪುಟಿನ್ ಹಾಗೂ ನರೇಂದ್ರ ಮೋದಿ
Updated By: Ganapathi Sharma

Updated on: Dec 05, 2025 | 7:05 AM

ಗ್ರಹ ಸ್ಥಿತಿಯ ಆಧಾರದಲ್ಲಿ ಹೇಳಬೇಕು ಅಂತಾದರೆ, ರಷ್ಯಾ(Russia) ಹಾಗೂ ಭಾರತದ (India) ಈ ಪ್ರೀತಿಯ ಅಪ್ಪುಗೆಯನ್ನು ಎರಡು ಪ್ರದ್ಯಮ್ನ ಶಕ್ತಿಗಳ ಮಿಲನ ಎನ್ನಬೇಕು. ಇದು ಖಂಡಿತಾ ದೈವನಿರ್ಣಯ. ಸಣ್ಣ ಕದಲಿಕೆಗೂ ಗ್ರಹ ಸ್ಥಿತಿಗಳ ಪ್ರೇರಣೆ ಇರುತ್ತದೆ ಎಂದು ಜ್ಯೋತಿಷ್ಯ (Astrology) ರೀತಿಯಲ್ಲೇ ನೋಡುವಂಥ ದೃಷ್ಟಿ ನನ್ನದು. ಹಾಗಿದ್ದರೆ ಈ ಭೇಟಿಯ ಹಿಂದಿನ ಗ್ರಹ ಪರಿಣಾಮಗಳು ಏನು ಎಂಬುದನ್ನೇ ನಿಮ್ಮೆದುರು ತೆರೆದಿಡುವ ವಿನಯಪೂರ್ವಕ ಪ್ರಯತ್ನ ಇಲ್ಲಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಜನ್ಮ ಜಾತಕದಲ್ಲಿ ಬಲಿಷ್ಠ ಶನಿ:

ನರೇಂದ್ರ ಮೋದಿ ಅವರ ಜನ್ಮ ಜಾತಕದಲ್ಲಿ ಬಲಿಷ್ಠ ಶನಿ ಇಪ್ಪತ್ತೊಂಬತ್ತು ಡಿಗ್ರಿಯಲ್ಲಿ ಸ್ಥಿತವಾಗಿದೆ. ಈ ಗ್ರಹ ಸ್ಥಿತಿಯು ಅವರಲ್ಲಿನ ಶಿಖರಪ್ರಾಯವಾದ ಮುತ್ಸದಿತನವನ್ನು ತೋರಿಸುತ್ತದೆ. ಇದೇ ಸಮಯದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜನ್ಮ ಜಾತಕ ಗಮನಿಸುವುದಾದರೆ ಅವರಿಗೂ ಸಹ ಜನ್ಮ ಜಾತಕದಲ್ಲಿ ಕನ್ಯಾ ರಾಶಿಯಲ್ಲಿ ಇಪ್ಪತ್ನಾಲ್ಕು ಡಿಗ್ರಿಯ ಬಲಿಷ್ಠ ಶನಿಯು ಪ್ರಬುದ್ಧ ಮುತ್ಸದ್ದಿತನವನ್ನು ನೀಡಿದ್ದಾನೆ. ಹೀಗೆ ಇಬ್ಬರು ಸಮಾನ ಶಕ್ತಿ ಹಾಗೂ ಆಲೋಚನಾ ಸಾಮರ್ಥ್ಯ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಭಾವದ ನಾಯಕರು ಭೇಟಿ ಆಗುತ್ತಿರುವುದು ಭವಿಷ್ಯದ ಮುನ್ಸೂಚನೆ ಆಗಿದೆ. ಸದ್ಯಕ್ಕೆ ಮೀನ ರಾಶಿಯಲ್ಲಿ ಇರುವ ಶನೈಶ್ಚರನು ವೃಷಭದ ತನಕ ಸಾಗಲು ಏಳು ವರ್ಷ ಸಮಯ ಹಿಡಿಸುತ್ತದೆ. ಇದು ಇಡೀ ಜಗತ್ತಿಗೇ ಕಂಟಕವಾದ ಕಾಲ.

ಇದನ್ನೂ ನೋಡಿ: ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ

ಕಠಿಣ ನಿಲುವು ತೆಗೆದುಕೊಳ್ಳಬೇಕು:
ಇಂಥದ್ದೊಂದು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕೆ ಉತ್ತಮವಾದ ನಾಯಕರು ಒಗ್ಗೂಡಬೇಕು. ತನ್ನ ದೇಶ ರಕ್ಷಣೆ ಹಾಗೂ ಜನರ ಜೀವ ರಕ್ಷಣೆ ಮಾಡುವುದಕ್ಕೆ ಎಂಥ ಕಠಿಣ ನಿಲುವು ತೆಗೆದುಕೊಳ್ಳಲು ಸಹ ಹಿಂಜರಿಯದ ನಾಯಕರು ಅವರಾಗಿರಬೇಕು. ಸವಾಲು- ಆತಂಕದಿಂದ ಹೊರಗೆಬರುವುದಕ್ಕೆ ಅವುಗಳನ್ನು ತಂದೊಡ್ಡುತ್ತಿರುವವರನ್ನು ನಿರ್ದಾಕ್ಷಿಣ್ಯವಾಗಿ ಬಲಿ ಹಾಕುವುದು ಬಹಳ ಮುಖ್ಯ. ಶನೈಶ್ಚರ ಈ ಇಬ್ಬರೂ ನಾಯಕರ ಭೇಟಿಯನ್ನು ಸುಮ್ಮನೆ ಮಾಡಿಸುತ್ತಿರುವುದಲ್ಲ. ಒಬ್ಬರ ಕೈ ಸ್ವಲ್ಪ ಸೋತಂತೆ ಕಂಡಾಗ ಮತ್ತೊಬ್ಬರು ಬಲಪಡಿಸಲು ಪರಸ್ಪರ ವಿಶ್ವಾಸ- ನಂಬಿಕೆಯನ್ನು ಜಗತ್ತಿನ ಎದುರು ತೋರಿಸಬೇಕಾಗುತ್ತದೆ. ಈಗ ಆಗುತ್ತಿರುವುದು ಅದೇ.

ಅಮೆರಿಕ ದೇಶಕ್ಕೇ ಪೆಟ್ಟು ಬಿದ್ದಿದೆ:
ಇಲ್ಲಿಯ ತನಕದ ಬೆಳವಣಿಗೆಗಳು ಗಮನಿಸಿದವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲುಗೈ ಸಾಧಿಸಿದಂತೆಯೂ ಬಲಿಷ್ಠವಾಗಿ ಇರುವಂತೆಯೂ ಕಂಡಿದೆ. ಆದರೆ ಜಗತ್ತಿಗೇ ಅಪಾಯಕಾರಿಯಾದ ಶಕ್ತಿಗಳ ಜೊತೆಗೆ ಇದೇ ವ್ಯಕ್ತಿಯು ಕೈಜೋಡಿಸಿದಂತೆಯೂ ತನ್ನ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಟ್ಟಂತೆಯೂ ಕಾಣಲು ಆರಂಭಿಸಿದೆ. ಅದಕ್ಕೆ ಕಾರಣ ಏನೆಂದರೆ ಡೊನಾಲ್ಡ್ ಟ್ರಂಪ್ ಜನ್ಮ ಜಾತಕದಲ್ಲಿ ಕರ್ಕಾಟಕ ರಾಶಿಯಲ್ಲಿ ಒಂದು ಡಿಗ್ರಿಯಲ್ಲಿ ದುರ್ಬಲ ಶನಿ ಇದ್ದಾನೆ. ಆರಂಭದಲ್ಲಿ ಹೇಳಿದಂತೆ ಒಬ್ಬ ಮಹಾನ್ ನಾಯಕನ ಎತ್ತರಕ್ಕೆ ಏರುವುದಕ್ಕೆ ಶನೈಶ್ಚರನ ಅನುಗ್ರಹ ಬೇಕೇಬೇಕು. ಅದರಲ್ಲಿಯೂ ಮೀನ ರಾಶಿಯಲ್ಲಿಯೇ ಕಳೆದ ಜುಲೈ ತಿಂಗಳಿಂದ ಶನಿ ಗ್ರಹದ ವಕ್ರ ಸಂಚಾರ ಆರಂಭವಾದ ಮೇಲಂತೂ ಟ್ರಂಪ್ ಗೆ ಬಹಳ ಹಿನ್ನಡೆ ಆಗುತ್ತಾ ಬಂತು. ಅದರಲ್ಲೂ ರಾಜತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಮೇಲಿಂದ ಮೇಲೆ ಅಮೆರಿಕಗೆ ಟ್ರಂಪ್ ದೆಸೆಯಿಂದ ಪೆಟ್ಟು ಬಿದ್ದಿದೆ.

ಮುಲಾಜಿಗೆ ಸಿಲುಕದ ನಾಯಕರು:
ಭಾರತವನ್ನು ತನ್ನ ಕೈ ಅಳತೆಯಲ್ಲೇ ಇರಿಸಿಕೊಳ್ಳುವ ಪ್ರಯತ್ನ ಟ್ರಂಪ್ ದಾದರೆ, ತನ್ನ ಸ್ವಭಾವ- ಗುಣ ಹಾಗೂ ತನ್ನ ಜನರು- ದೇಶಕ್ಕೆ ಒಳ್ಳೆದಾಗುವ ವಿಚಾರದಲ್ಲಿ ರಾಜೀ ಮಾಡಿಕೊಳ್ಳದ ವ್ಯಕ್ತಿತ್ವ ನರೇಂದ್ರ ಮೋದಿ ಅವರದು. ಈ ಗುಣವನ್ನು ಒಬ್ಬ ವ್ಯಕ್ತಿಯ ಜನ್ಮಜಾತಕ ತೆರೆದಿಡುತ್ತದೆ. ಆಪರೇಷನ್ ಸಿಂದೂರದ ವಿಚಾರದಲ್ಲಿ ಪದೇಪದೇ ಹೇಳಿದ್ದನ್ನೇ ಹೇಳುತ್ತಾ ಟ್ರಂಪ್ ಮಾಡುವುದಕ್ಕೆ ಹೊರಟಿರುವುದು ನರೇಂದ್ರ ಮೋದಿಯವರ ವರ್ಚಸ್ಸಿಗೆ ಹಾನಿ ಮಾಡುವ ಪ್ರಯತ್ನ. ಹಾಗೆ ನೋಡಿದರೆ ಭಾರತವು ರಷ್ಯಾಗೆ ಹತ್ತಿರ ಆದಂತೆಲ್ಲ ಮನಸ್ಸಿನ ಸ್ಥಿಮಿತವೇ ಕಳೆದುಕೊಂಡಂತಾಗಿ ಏನೇನೋ ಬಡಬಡಿಸಲು ಆರಂಭಿಸುವುದು ಇದೇ ಟ್ರಂಪ್. ಅದಕ್ಕೆ ಕಾರಣ ಏನೆಂದರೆ ರಷ್ಯಾ- ಭಾರತ ಈ ಎರಡೂ ದೇಶಗಳ ನಾಯಕತ್ವದ ಸ್ಥಾನದಲ್ಲಿ ಇರುವವರ ಸಾಮರ್ಥ್ಯ ಹಾಗೂ ಪ್ರಾದೇಶಿಕವಾಗಿ ಬಲಿಷ್ಠ ಶಕ್ತಿಗಳ ಸಂಗಮ ಸುತರಾಂ ಟ್ರಂಪ್ ಗೆ ಇಷ್ಟವಾಗುವುದಿಲ್ಲ. ಶನೈಶ್ಚರನ ಬಲಿಷ್ಠ ಅನುಗ್ರಹ ಮೋದಿ- ಪುಟಿನ್ ಇಬ್ಬರಿಗೂ ಇದೆ. ನಿರ್ಧಾರ ಕೈಗೊಳ್ಳುವಾಗ ಯಾವ ಮುಲಾಜಿಗೂ ಇಬ್ಬರೂ ಒಳಪಡಲ್ಲ.

ರಷ್ಯಾ-ಇಸ್ರೇಲ್- ಭಾರತದ ಗಟ್ಟಿ ಸ್ನೇಹ:
ಮುಂದಿನ ಏಳು ವರ್ಷದೊಳಗೆ ರಷ್ಯಾ-ಇಸ್ರೇಲ್ ಹಾಗೂ ಭಾರತ ಈ ಮೂರೂ ದೇಶಗಳ ಸ್ನೇಹ ಜಾಗತಿಕ ಮಟ್ಟದಲ್ಲಿನ ಭಯ- ಆತಂಕಗಳನ್ನು ದೂರ ಮಾಡಿಯೇ ಮಾಡುತ್ತದೆ. ಇನ್ನು ಗ್ರಹಗತಿಗಳ ಪರಿಸ್ಥಿತಿಯಿಂದ ಹೇಳುವುದಾದರೆ 2027ನೇ ಇಸವಿಯ ಜೂನ್ ತಿಂಗಳ ತನಕ ನರೇಂದ್ರ ಮೋದಿಯವರು ನಾನಾ ಸವಾಲುಗಳನ್ನು ಎದುರಿಸಲಿದ್ದಾರೆ, ಸುದೈವವಶಾತ್ ಅವುಗಳನ್ನು ಮೆಟ್ಟಿಯೂ ನಿಲ್ಲಲಿದ್ದಾರೆ. ನರೇಂದ್ರ ಮೋದಿಯವರ ವರ್ಚಸ್ಸು, ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಲು ಶತ್ರು ದೇಶಗಳಿಂದ ಇನ್ನಿಲ್ಲದ ಪ್ರಯತ್ನಗಳು ನಡೆಯಲಿವೆ. ಇಂಥ ಸನ್ನಿವೇಶಕ್ಕೆ ಬಲ ತುಂಬಲು ಗ್ರಹಗಳ ಪ್ರತಿನಿಧಿಯಂತೆ ಭಾರತಕ್ಕೆ ಹತ್ತಿರವಾಗಿರುವುದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ಮುಂದಿನ ದಿನಗಳಲ್ಲಿ ಇಸ್ರೇಲ್ ನ ಬೆಂಜಮಿನ್ ನೆತನ್ಯಾಹು ಕೂಡ ಭಾರತದ ಬೆಂಬಲಕ್ಕೆ ನಿಲ್ಲಲಿದ್ದಾರೆ. ಹಾಗೆ ನೋಡಿದರೂ ಮುಂದಿನ ಎರಡು ವರ್ಷಗಳು ಅವರಿಗೂ ಸವಾಲಿನ ಸಮಯವೇ.

ಈಗ ಅವರು ಬಂದಿದ್ದಾರೆ:
ರಷ್ಯಾದಲ್ಲಿ ಪರಿಸ್ಥಿತಿ ಬಿಗಡಾಯಿಸಿ, ವ್ಲಾಡಿಮಿರ್ ಪುಟಿನ್ ಗೆ 2027ರ ಜೂನ್ ನಂತರ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಏನೆಂದರೆ, ಪುಟಿನ್ ಅವರು ಜಾತಕದಲ್ಲಿನ ಗ್ರಹಗತಿ. ಆಗ ಅವರಿಗೆ ಭಾರತದ ಸಹಾಯ ಹಸ್ತ ಬೇಕಾಗುತ್ತದೆ. ಇಸ್ರೇಲ್ ನ ನೆತನ್ಯಾಹುವಿಗೂ ಈಗ ತೊಂದರೆ. 2027ರ ಜೂನ್ ವರೆಗೆ ಇದೆ. ಅವರ ಜನ್ಮ ಜಾತಕದಲ್ಲಿನ ಸಿಂಹಸ್ಥ ಶನಿಗೆ ( ಇಪ್ಪತ್ತೆರಡು ಡಿಗ್ರಿ) ಸದ್ಯಕ್ಕೆ ಮೀನ ರಾಶಿಯಲ್ಲಿನ ಶನಿಯು ಆತಂಕದಾಯಕ. ಒಂದು ವೇಳೆ ಪುಟ್ಟ ರಾಷ್ಟ್ರವಾದ ಇಸ್ರೇಲ್ ಮೇಲೆ ಹತ್ತಾರು ಮುಸ್ಲಿಂ ರಾಷ್ಟ್ರಗಳು ಏಕಕಾಲಕ್ಕೆ ಮುಗಿಬಿದ್ದರೆ? ಆ ಕಡೆ ರಷ್ಯಾ ಸಹ ಒಂದೇ ಉಳಿದುಕೊಂಡು ಬಿಟ್ಟಲ್ಲಿ ಸುಮ್ಮನೆ ಕುಳಿತು ನೋಡಬೇಕಷ್ಟೆ. ಆಗ ಮೋದಿಯವರು ತಮಗಿರುವ ಸವಾಲುಗಳ ಜೊತೆಗೆ ನೆತನ್ಯಾಹುವಿಗೂ ಸಹಕಾರ ನೀಡಬೇಕಾಗುತ್ತದೆ. ಆದರೆ ಇವರಿಬ್ಬರಿಗೂ ಗ್ರಹಗತಿಯ ಸಮಯ ಸರಿ ಇಲ್ಲದಿದ್ದರೆ? ಆಗಲೇ ಶಕ್ತಿಶಾಲಿಯೊಬ್ಬರ ಸಹಕಾರ ಬೇಕಾಗುತ್ತದೆ. ಆ ರೂಪದಲ್ಲಿ ಪುಟಿನ್ ಬಂದಿದ್ದಾರೆ.

ಇದನ್ನೂ ಓದಿ: ಪುಟಿನ್ ಭೇಟಿಯಿಂದ ಭಾರತಕ್ಕೇನು ಲಾಭ? ರಷ್ಯಾದೊಂದಿಗೆ ಅಗಾಧ ವ್ಯಾಪಾರ ಅಂತರ ತಗ್ಗಿಸಲು ಭಾರತಕ್ಕೆ ಸಾಧ್ಯವಾ?

ನಮಗೆ ನೀವಾದರೆ, ನಿಮಗೆ ನಾವು:
2027ರ ಜೂನ್ ನಂತರ ದ್ವೇಷದ ಕಿಡಿ ರಷ್ಯಾದ ಮೇಲೆ ಬೀಳಬಹುದು. ಯಾಕೆಂದರೆ ಆಗ ಪುಟಿನ್ ಗೆ ಆಗ (2027ರ ಜೂನ್ ನಂತರ) ಸಮಯ ಸರಿ ಇಲ್ಲ. ಆ ಹೊತ್ತಿಗೆ ಬಹಳ ಬಲಿಷ್ಠರಾಗಿ- ಗ್ರಹಬಲದಿಂದ ಬೆಳಗುವಂಥ ನರೇಂದ್ರ ಮೋದಿ ಹಾಗೂ ಬೆಂಜಮಿನ್ ನೆತನ್ಯಾಹು ಸೇರಿ ಪುಟಿನ್ ಗೆ ಸಹಾಯ ನೀಡಬೇಕಾಗುತ್ತದೆ.

ಇನ್ನು ಎರಡ್ಮೂರು ವರ್ಷ ಕಾದು ನೋಡಿ:

ಈ ಎಲ್ಲ ಘಟನೆಗಳು ಒಂದಕ್ಕೆ ಒಂದು ತಳುಕು ಹಾಕಿಕೊಂಡಂಥ ಸಂಗತಿಗಳು. ದೈವ ನಿರ್ಣಯವೂ ಹೌದು. ಶತ್ರುಗಳ ಸಂಖ್ಯೆ ದೊಡ್ಡದಾದಾಗ, ಅವರು ಸಹ ಬಲಿಷ್ಠರಾದಾಗ ಎದುರು ನಿಂತು ಬಡಿದಾಡಲು, ಹೇಳಹೆಸರಿಲ್ಲದಂತೆ ಬಡಿದು ಹಾಕುವುದಕ್ಕೆ ಸಮರ್ಥರ ಒಂದು ಗುಂಪು ಬೇಕು. ಅದರ ಮುನ್ನುಡಿಯೇ ಈಗಿನ ಬೆಳವಣಿಗೆ. ಇವೆಲ್ಲ ಹೀಗೇ ಆಗುತ್ತದೆಯಾ ಎಂಬುದನ್ನು ನಾವು- ನೀವೆಲ್ಲ ನೋಡಿ, ಸಾಕ್ಷಿಯಾಗೋಣ; ಸಮಯ ಎಷ್ಟು ಮಹಾ ದೂರವಿದೆ, ಇನ್ನು ಕೇವಲ ಎರಡ್ಮೂರು ವರ್ಷಗಳು ಮಾತ್ರ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಕಾಪು, ಉಡುಪಿ (ವಿವಿಧ ರಾಜ್ಯಗಳು- ದೇಶಗಳ ಚುನಾವಣೆ ಸಮಯದ ವಿಶ್ಲೇಷಣೆ, ಪ್ರಮುಖ ನಾಯಕರ ಜಾತಕ ವಿಮರ್ಶೆಗೆ ಪ್ರಕಾಶ್ ಅಮ್ಮಣ್ಣಾಯ ಅವರು ಬಹಳ ದೊಡ್ಡ ಹೆಸರು ಪಡೆದವರು. ಕಳೆದ ಮೂವತ್ತಕ್ಕೂ ಹೆಚ್ಚು ವರ್ಷದಿಂದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಅಮ್ಮಣ್ಣಾಯ ಅವರು ತಮ್ಮ ಅನುಭವದ ಆಧಾರದಲ್ಲಿ ಈ ಲೇಖನವನ್ನು ನೀಡಿದ್ದಾರೆ. ಇಲ್ಲಿ ವ್ಯಕ್ತವಾಗಿರುವುದು ಲೇಖಕರ ಅಭಿಪ್ರಾಯ.)

Published On - 7:03 am, Fri, 5 December 25