ಕರ್ನಾಟಕಕ್ಕೆ 1,020 ಹೊಸ ಬಸ್​ಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ

|

Updated on: Sep 08, 2023 | 8:05 AM

ರಾಜ್ಯದ ವಿವಿಧ ಸಾರಿಗೆ ನಿಗಮಗಳಿಗೆ 1,020 ಹೊಸ ಬಸ್ ಗಳನ್ನು ಖರೀದಿಸಲು ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ಪೈಕಿ 320 ಎಲೆಕ್ಟ್ರಿಕ್ ಬಸ್​ಗಳನ್ನು ಬೆಂಗಳೂರಿಗೆ ಖರೀದಿಸಲು ಅನುಮೋದನೆ ದೊರಕಿದೆ. ಅದೇ ರೀತಿ ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್​​ಗೆ ಅನುಮೋದನೆ ನೀಡಿದೆ.

ಕರ್ನಾಟಕಕ್ಕೆ 1,020 ಹೊಸ ಬಸ್​ಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ
ಕರ್ನಾಟಕಕ್ಕೆ 1,020 ಹೊಸ ಬಸ್​ಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ
Image Credit source: PTI
Follow us on

ಬೆಂಗಳೂರು, ಸೆ.8: ರಾಜ್ಯದ ವಿವಿಧ ಸಾರಿಗೆ ನಿಗಮಗಳಿಗೆ 1,020 ಹೊಸ ಎಲೆಕ್ಟ್ರಿಕ್ ಬಸ್​​ಗಳನ್ನು (Electric Buses) ಖರೀದಿಸಲು ರಾಜ್ಯ ಸಚಿವ ಸಂಪುಟ (Karnataka Cabinet) ಗುರುವಾರ ಅನುಮೋದನೆ ನೀಡಿದೆ. ಈ ಪೈಕಿ 320 ಎಲೆಕ್ಟ್ರಿಕ್ ಬಸ್​ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 150 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲಿದೆ.

ಮುಂದಿನ ದಿನಗಳಲ್ಲಿ ಬಿಎಂಟಿಸಿಗೆ 320 ಬಸ್​ಗಳನ್ನು ಒಟ್ಟು ವೆಚ್ಚ ಗುತ್ತಿಗೆ (ಜಿಸಿಸಿ) ಹಣಕಾಸು ಮಾದರಿಯಲ್ಲಿ ಖರೀದಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 100 ಕೋಟಿ ರೂ.ಗಳ ವೆಚ್ಚದಲ್ಲಿ 250 ಬಸ್ಸುಗಳು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 150 ಕೋಟಿ ರೂ.ಗಳ ವೆಚ್ಚದಲ್ಲಿ 350 ಬಸ್ಸುಗಳು ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 100 ಕೋಟಿ ರೂ.ಗಳ ವೆಚ್ಚದಲ್ಲಿ 250 ಬಸ್ಸುಗಳನ್ನು ಖರೀದಿಸಲಾಗುವುದು ಎಂದರು.

ಇದನ್ನೂ ಓದಿ: ಬೆಂಗಳೂರು: ಪ್ರಯಾಣಿಕನ ಬ್ಯಾಗ್​ನಲ್ಲಿ ಜೀವಂತ 55 ಹೆಬ್ಬಾವು, 17 ಕಾಳಿಂಗ ಸರ್ಪದ ಮರಿಗಳು ಪತ್ತೆ: ಓರ್ವ ವ್ಯಕ್ತಿ ವಶಕ್ಕೆ

ಕೋರಮಂಗಲ ಒಳ ವರ್ತುಲ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಎಲಿವೇಟೆಡ್ ಕಾರಿಡಾರ್ ಪೂರ್ಣಗೊಳಿಸಲು ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. 2013 ರಲ್ಲಿ ಅನುಮೋದನೆ ಪಡೆದ ಮತ್ತು 2017 ರಲ್ಲಿ ಕೈಗೆತ್ತಿಕೊಂಡ ಯೋಜನೆಯ ಕೇವಲ 40 ಪ್ರತಿಶತದಷ್ಟು ಮಾತ್ರ ಪೂರ್ಣಗೊಂಡಿದೆ.

307.96 ಕೋಟಿ ರೂ.ಗಳ ಎಲಿವೇಟೆಡ್ ಕಾರಿಡಾರ್​ನ ಪರಿಷ್ಕೃತ ಅಂದಾಜಿಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಷ್ಠಾನಗೊಳಿಸಲಿದೆ ಎಂದು ಪಾಟೀಲ್ ಹೇಳಿದರು.

ಕೇಂದ್ರೀಯ ಸದನದಿಂದ ಈಜಿಪುರವರೆಗಿನ 2.5 ಕಿ.ಮೀ ಉದ್ದದ ಯೋಜನೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಷರತ್ತಿನೊಂದಿಗೆ ಈ ಯೋಜನೆಯನ್ನು ಮೊದಲು 2017 ರಲ್ಲಿ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಗೆ ನೀಡಲಾಗಿತ್ತು. ದಿವಾಳಿಯಾಗುವ ಮೊದಲು ಕಂಪನಿಯು ಯೋಜನೆಯ ಕೇವಲ 40 ಪ್ರತಿಶತವನ್ನು ಮಾತ್ರ ಪೂರ್ಣಗೊಳಿಸಿತ್ತು.

ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮೂರು ಟೆಂಡರ್​ಗಳನ್ನು ಕರೆದ ನಂತರವೇ ಅಧಿಕಾರಿಗಳು ಗುತ್ತಿಗೆದಾರರನ್ನು ಅಂತಿಮಗೊಳಿಸಲು ಸಾಧ್ಯವಾಯಿತು. ಹೈದರಾಬಾದ್ ಮೂಲದ ಬಿಎಸ್ಸಿಪಿಎಲ್ ಇತ್ತೀಚಿನ ಟೆಂಡರ್ ಗೆದ್ದಿದೆ.

ರಾಜ್ಯದ ಬರಪೀಡಿತ ತಾಲೂಕುಗಳನ್ನು ಘೋಷಿಸುವ ನಿರ್ಧಾರವನ್ನು ಮುಂದಿನ ಸಚಿವ ಸಂಪುಟ ಸಭೆಗೆ ಮುಂದೂಡಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:04 am, Fri, 8 September 23