AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ-ಉಕ್ರೇನ್ ನಡುವೆ ಮಹಾಯುದ್ಧ! ಉಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕದ 91 ವಿದ್ಯಾರ್ಥಿಗಳು; ಪೋಷಕರು ಕಣ್ಣೀರು

ಟಿವಿ9 ಜೊತೆ ಮಾತನಾಡಿದ ರಚನಾ ತಾಯಿ ಹೇಮಲತಾ, ನನ್ನ ಪುತ್ರಿ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಆತಂಕವಾಗುತ್ತಿದೆ. ರಚನಾ ಉಕ್ರೇನ್​ನ ಕೀವ್ ನಗರದಲ್ಲಿದ್ದಾಳೆ. ಅಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಾಗುತ್ತಿಲ್ಲ.

ರಷ್ಯಾ-ಉಕ್ರೇನ್ ನಡುವೆ ಮಹಾಯುದ್ಧ! ಉಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕದ 91 ವಿದ್ಯಾರ್ಥಿಗಳು; ಪೋಷಕರು ಕಣ್ಣೀರು
ಉಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು
TV9 Web
| Edited By: |

Updated on:Feb 25, 2022 | 10:40 AM

Share

ಬೆಂಗಳೂರು: ರಷ್ಯಾ (Rashya) ಮತ್ತು ಉಕ್ರೇನ್ (Ukraine) ನಡುವೆ ಮಹಾಯುದ್ಧ (War) ನಡೆಯುತ್ತಿರುವ ಹಿನ್ನೆಲೆ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ಉಕ್ರೇನ್​ನಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ಸಿಲುಕಿದ್ದು, ಪೋಷಕರಿಗೆ ಆತಂಕ ಮೂಡಿದೆ. ಎಂಬಿಬಿಎಸ್ ವಿದ್ಯಾರ್ಥಿನಿ ರಚನಾಳ ಮೊಬೈಲ್ ನಿನ್ನೆಯಿಂದ (ಫೆ.24) ಸ್ವಿಚ್ ಆಫ್ ಆಗಿದೆ. ರಚನಾ ಸಂಪರ್ಕ ಸಾಧ್ಯವಾಗದೆ ಪೋಷಕರು ಆತಂಕಗೊಂಡಿದ್ದಾರೆ. ನಿನ್ನೆ ರಚನಾ ತವರಿಗೆ ಆಗಮಿಸಬೇಕಿತ್ತು. ಕೀವ್ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗ ಬಾಂಬ್ ಸ್ಫೋಟಗೊಂಡಿದೆ. ಮಹಾ ಸ್ಫೋಟಕ್ಕೆ ಭಯಗೊಂಡಿರುವ ರಚನಾ ಹೈದಾರಾಬಾದ್ ಮೂಲದ ಪ್ರವೀಣ್ ನಿವಾಸದಲ್ಲಿ ಆಶ್ರಯ ಪಡೆಯುತ್ತಿದ್ದಾಳೆ ಎಂಬ ಮಾಹಿತಿ ಇದೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ರಚನಾ ತಾಯಿ ಹೇಮಲತಾ, ನನ್ನ ಪುತ್ರಿ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಆತಂಕವಾಗುತ್ತಿದೆ. ರಚನಾ ಉಕ್ರೇನ್​ನ ಕೀವ್ ನಗರದಲ್ಲಿದ್ದಾಳೆ. ಅಲ್ಲಿ ಏನಾಗುತ್ತಿದೆ ಎಂದು ನನಗೆ ಗೊತ್ತಾಗುತ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿರುವ ಕೋಲಾರದ ವಿದ್ಯಾರ್ಥಿ: ಉಕ್ರೇನ್​ನಲ್ಲಿ ಕೋಲಾರದ ವಿದ್ಯಾರ್ಥಿ ದೀಕ್ಷಿತ್ ರಾಜ್ ಸಿಲುಕಿಕೊಂಡಿದ್ದಾನೆ. ಮಗನೊಂದಿಗೆ ಕುಟುಂಬಸ್ಥರು ನಿರಂತರ ಸಂಪರ್ಕದಲ್ಲಿದ್ದಾರೆ. ದೀಕ್ಷಿತ್ ರಾಜ್ ವಾಸವಿರುವ ಬಳಿಯಲ್ಲೇ ಬಾಂಬ್ ಸಿಡಿದಿದೆ. ಬಾಂಬ್ ದಾಳಿಯ ವಿಡಿಯೋಗಳನ್ನು ದೀಕ್ಷಿತ್ ತಾಜ್ ಹಾಗೂ ಆತನ ಸ್ನೇಹಿತರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಆದಷ್ಟು ಬೇಗ ತವರಿಗೆ ಕರೆಸಿಕೊಳ್ಳುವಂತೆ ಪೋಷಕರ ಬಳಿ ದೀಕ್ಷಿತ್ ರಾಜ್ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕೋಲಾರದ ಮತ್ತೊಬ್ಬ ವಿದ್ಯಾರ್ಥಿ ಜೀವನ್ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾನೆ. ಕೋಲಾರ ನಗರದ ಕೀಲುಕೋಟೆ ಬಡಾವಣೆಯ ಪಿಡಿಓ‌ ನಾಗರಾಜ್ ಅವರ ಮಗ ಜೀವನ್ ಉಕ್ರೇನ್​ನ ಕೀನ್ ಪ್ರದೇಶದಲ್ಲಿ ಇದ್ದಾನೆ. ಜೀವನ್ ಜೊತೆಗೆ ಕುಟುಂಬಸ್ಥರು ನಿರಂತರ ಸಂಪರ್ಕದಲ್ಲಿದ್ದಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ 91 ವಿದ್ಯಾರ್ಥಿಗಳು: ರಾಜ್ಯದ ಸುಮಾರು 91 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾಹಿತಿ ಮಾಹಿತಿ ನೀಡಿದೆ. ಬೆಂಗಳೂರು 28, ಮೈಸೂರು 10, ಹಾಸನ 6, ಬಳ್ಳಾರಿ 5, ಬಾಗಲಕೋಟೆ 4, ಚಾಮರಾಜನಗರದ 4 ವಿದ್ಯಾರ್ಥಿಗಳು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನ ತಲಾ 3 ಸ್ಟೂಡೆಂಟ್ಸ್ ದಕ್ಷಿಣ ಕನ್ನಡ, ಹಾವೇರಿ, ಕೊಡಗಿನ ತಲಾ 3 ಸ್ಟೂಡೆಂಟ್ಸ್ ರಾಯಚೂರು, ಚಿತ್ರದುರ್ಗ, ದಾವಣಗೆರೆಯ ತಲಾ ಇಬ್ಬರು, ಧಾರವಾಡ, ಮಂಡ್ಯ, ಉಡುಪಿಯ ತಲಾ ಇಬ್ಬರು, ವಿಜಯಪುರದ ಇಬ್ಬರು ವಿದ್ಯಾರ್ಥಿಗಳು, ಕೋಲಾರದ ಒಬ್ಬರು, ಶಿವಮೊಗ್ಗ, ಉತ್ತರ ಕನ್ನಡದ ತಲಾ ಒಬ್ಬ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ.

ಇನ್ನು ಉಕ್ರೇನ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ವಿದ್ಯಾರ್ಥಿನಿ ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾಳೆ. 4 ನೇ ವರ್ಷದ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿ ಸ್ನೇಹಾ ಹೊಸಮನಿ ಉಕ್ರೇನ್‌ನಲ್ಲಿ ಇದ್ದಾಳೆ. ಸದ್ಯ ತಮ್ಮ ರೂಮ್ ಬಿಟ್ಟು ಕಾರ್ಕೀವ್ ಮೆಟ್ರೋ ಸ್ಟೇಷನ್‌ನಲ್ಲಿದ್ದಾಳೆ. ಸುರಕ್ಷಿತವಾಗಿದ್ದೇನೆ ಅಂತ ಸ್ನೇಹಾ ತಿಳಿಸಿದ್ದಾಳೆ.

ಕೀವ್ ಮೆಟ್ರೋ ನಿಲ್ದಾಣದಲ್ಲಿರುವ ನವ್ಯಾ: ಉಕ್ರೇನ್‌ನ ಕೀವ್ ಮೆಟ್ರೋ ನಿಲ್ದಾಣದಲ್ಲಿ ನೆಲಮಂಗಲದ ವಿದ್ಯಾರ್ಥಿನಿ ಇದ್ದಾಳೆ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕವಿದೆ ಇದೆ. ಆದಷ್ಟು ಬೇಗ ನಮ್ಮನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಅಂತ ಮನವಿ ಮಾಡುತ್ತಿದ್ದಾಳೆ.

ರಷ್ಯಾ ಗಡಿಯಿಂದ ದೂರದಲ್ಲಿರುವ ತನ್ಮಯ್: ರಷ್ಯಾ ಗಡಿಯಿಂದ ಕರ್ನಾಟಕ ವಿದ್ಯಾರ್ಥಿ ತನ್ಮಯ್ 20 ಕಿ.ಮೀ. ದೂರದಲ್ಲಿದ್ದಾನೆ. ಈ ಬಗ್ಗೆ ಟಿವಿ9ಗೆ ಮಾಹಿತಿ ನೀಡಿರುವ ತನ್ಮಯ್, ಅಪಾಯ ಇದ್ದರೆ ಸೈರನ್ ಹಾಕುವುದಾಗಿ ಸೂಚಿಸಿದ್ದಾರೆ. ಈ ವೇಳೆ ಬಂಕರ್‌ಗೆ ಸೇರಿಕೊಳ್ಳಬೇಕೆಂದು ಸೂಚಿಸಿದ್ದಾರೆ. ವಾಯುಮಾರ್ಗ ಬಂದ್ ಹಿನ್ನೆಲೆ ಭಾರತಕ್ಕೆ ಬರಲು ಆಗ್ತಿಲ್ಲ. ಮುಂದೇನಾಗುತ್ತೆಂಬ ಭಯ ಇದೆ ಎಂದು ತಿಳಿಸಿದ್ದಾನೆ. ಭಾರತೀಯ ವಿದೇಶಾಂಗ ಇಲಾಖೆಗೆ ಸಹಾಯ ಮಾಡುವಂತೆ ಮನವಿ ಮಾಡಿದ ತನ್ಮಯ್, ತಂದೆ, ತಾಯಿಗೆ ಧೈರ್ಯವಾಗಿ ಇರುವಂತೆ ಟಿವಿ9 ಮೂಲಕ ಮನವಿ ಮಾಡಿದ್ದಾನೆ.

ಅಪಾಯದಲ್ಲಿ ಸಿಲುಕಿರುವ ಕೊಡಗಿನ ವಿದ್ಯಾರ್ಥಿ: ಉಕ್ರೇನ್‌ನಲ್ಲಿ ಕೊಡಗಿನ ವಿದ್ಯಾರ್ಥಿ ಶಾರುಖ್ ಅಪಾಯದಲ್ಲಿ ಸಿಲುಕಿದ್ದಾನೆ. ಉಕ್ರೇನ್‌ನ ಖಾರ್ಕಿವ್‌ನ ಮೆಟ್ರೋ ನಿಲ್ದಾಣದಲ್ಲಿದ್ದಾನೆ. ಇನ್ನು ಚಿಕ್ಕಮಗಳೂರು ಮೂಲದ ಪ್ರದ್ವಿನ್ ಉಕ್ರೇನ್ ಖಾರ್ಕಿವ್​ನಲ್ಲಿ 3ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾನೆ. ಮಗನಿಗೆ ಕರೆ ಮಾಡಿ ಪೋಷಕರು ಯೋಗಕ್ಷೇಮ ವಿಚಾರಿಸಿದ್ದಾರೆ. ವಿಡಿಯೋ ಕರೆ ಮಾಡಿ ಪ್ರದ್ವಿನ್ ಪೋಷಕರು ಧೈರ್ಯ ಹೇಳಿದ್ದಾರೆ.

ಕೀವ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿ ಸುನೇಹಾ: ಉಕ್ರೇನ್‌ನ ಕೀವ್‌ನಲ್ಲಿ ವಿದ್ಯಾರ್ಥಿ ಸುನೇಹಾ ಸಿಲುಕಿದ್ದಾಳೆ. ಭಾರತಕ್ಕೆ ವಾಪಸಾಗಲು ಏರ್‌ಪೋರ್ಟ್‌ಗೆ ಆಗಮಿಸಿದ್ದಾಳೆ. ಈ ವೇಳೆ ಏರ್‌ಪೋರ್ಟ್‌ನಲ್ಲಿ ಬಾಂಬ್ ಸ್ಫೋಟ ಹಿನ್ನೆಲೆ ಪ್ರವೀಣ್ ಎಂಬುವವರ ಮನೆಯಲ್ಲಿ ಸುನೇಹಾ ಇದ್ದಾಳೆ. ಈ ಕುರಿತು ಟಿವಿ9ಗೆ ಚಿತ್ರದುರ್ಗದ ಸುನೇಹಾ ತಂದೆ ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.

ಕಲಬುರಗಿಯ 4 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಇದ್ದಾರೆ. ಪೋಷಕರ ಜತೆ ಚರ್ಚಿಸಿರುವ ಪ್ರಜ್ವಲ್ ಗುಡ್ಡೇವಾಡ್, ಸದ್ಯಕ್ಕೆ ತಾವಿರುವ ಪ್ರದೇಶದಲ್ಲಿ ಯಾವುದೇ ಆತಂಕ ಇಲ್ಲ ಅಂತ ತಿಳಿಸಿದ್ದಾನೆ. ಇನ್ನು ಹುಬ್ಬಳ್ಳಿಯ ಚೈತ್ರಾ ಸಂಶಿ ಉಕ್ರೇನ್‌ನಲ್ಲಿ ಇದ್ದಾಳೆ. ಚೈತ್ರಾ ಮನೆಗೆ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.

ರಾಜ್ಯ ಸರ್ಕಾರಕ್ಕೆ ಪೋಷಕರ ಮನವಿ: ಉಕ್ರೇನ್‌ನಲ್ಲಿ ರಾಯಚೂರಿನ 6 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ವಿದ್ಯಾರ್ಥಿ ಚನ್ನವೀರೇಶ್ ಜತೆ ಪೋಷಕರು ಚರ್ಚಿಸಿದ್ದಾರೆ. ಚನ್ನವೀರೇಶ್ ಭಾರತಕ್ಕೆ ವಾಪಸಾಗುವುದಕ್ಕೆ ಟಿಕೆಟ್ ಬುಕ್ ಮಾಡಿದ್ದ. ಮೊದಲು ನಾರ್ಮಲ್ ಆಗಿ ನಮ್ಮ ಜತೆ ಮಾತಾಡುತ್ತಿದ್ದ. ನಿನ್ನೆ ಮಧ್ಯಾಹ್ನದಿಂದ ಆತಂಕದಲ್ಲೇ ಮಾತನಾಡುತ್ತಿದ್ದಾನೆ. ದಯವಿಟ್ಟು ನನ್ನ ಪುತ್ರನನ್ನು ಸುರಕ್ಷಿತವಾಗಿ ಕರೆತನ್ನಿ ಅಂತ ರಾಜ್ಯ ಸರ್ಕಾರಕ್ಕೆ ಚನ್ನವೀರೇಶ್ ತಂದೆ ಮನವಿ ಮಾಡಿದ್ದಾರೆ.

ತುಮಕೂರಿನ ರೂಪಶ್ರೀ, ರುದ್ರೇಶ್, ಜಯ್, ಉದಿತ್, ಪ್ರಿಯಾಂಕಾ, ಶೀತಲ್, ತಿಮ್ಮೇಗೌಡ, ನಂದಿನಿ, ಮೇಘಾ, ಪ್ರತಿಭಾ ಉಕ್ರೇನ್​ನಲ್ಲಿದ್ದಾರೆ. ಆದರೆ ತುಮಕೂರು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ಇದೆ.

ಖಾರ್ಕಿವ್ ನ್ಯಾಷನಲ್ ಮೆಡಿಕಲ್ ವಿವಿಯ ವಿದ್ಯಾರ್ಥಿಗಳು ಹಾಸ್ಟೆಲ್ ಬಿಲ್ಡಿಂಗ್‌ ಕೆಳಗೆ ಬಂಕರ್ಸ್‌ಗೆ ಶಿಫ್ಟ್ ಆಗಿದ್ದಾರೆ. ಬೆಳಗಾವಿಯ ಪ್ರಿಯಾ ಚಬ್ಬಿ, ಪ್ರೀತಿ ಚಬ್ಬಿ, ಶ್ರೇಯಾ ಹೆರಕಲ್ ಅಮೋಘ ಚೌಗಲಾ, ಪ್ರಿಯಾ ನಿಡಗುಂದಿ, ರಕ್ಷಿತ್ ಗಣಿ ಬಂಕರ್ಸ್‌ಗೆ ಸ್ಥಳಾಂತರಗೊಂಡಿದ್ದಾರೆ.

ಊಟ, ನೀರು ಇಲ್ಲದೆ ಅರುಣ್ ಕುಮಾರ್ ಪರದಾಟ: ಉಕ್ರೇನ್‌ನಲ್ಲಿ ಸಿಲುಕಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಅರುಣ್ ಕುಮಾರ್ ಊಟ, ನೀರು ಇಲ್ಲದೆ ಪರದಾಟ ಪಡುತ್ತಿದ್ದಾನೆ. ಟಿವಿ9ಗೆ ಹೇಳಿಕೆ ನಿಡಿದ ತಂದೆ ಶಿವಣ್ಣ, ಅರುಣ್ ಕುಮಾರ್ ಭಯದಲ್ಲೇ ಕಾಲ ಕಳೆಯುತ್ತಿದ್ದಾನೆ ಅಂತ ಹೇಳಿದರು.

ಉಕ್ರೇನ್ ವಾಸ್ತವತೆ ತಿಳಿಸಿದ ಮೈಸೂರಿನ ಭೂಮಿಕಾ: ಸದ್ಯಕ್ಕೆ ನಾವಿಲ್ಲಿ ಸೇಫಾಗಿದ್ದೀವಿ ಅಂತ ಉಕ್ರೇನ್​ನಲ್ಲಿ ಇರುವ ಮೈಸೂರಿನ ಭೂಮಿಕಾ ತಿಳಿಸಿದ್ದಾಳೆ. ಕೀವ್​ನಲ್ಲಿರುವ ತಾರಾಸ್ ಯೂನಿವರ್ಸಿಟಿಯ ಎಂಬಿಬಿಎಸ್ ವಿದ್ಯಾರ್ಥಿನಿ ಭೂಮಿಕಾ ಟಿವಿ9ಗಾಗಿ ಗ್ರೌಂಡ್ ರಿಪೋರ್ಟ್ ಕೊಟ್ಟಿದ್ದಾರೆ. ಕೀವ್​ನಲ್ಲಿ ಹಾಸ್ಟೆಲ್ ಬಿಲ್ಡಿಂಗ್​ನಲ್ಲಿ ತನ್ನ ಸಹಪಾಠಿಗಳೊಂದಿಗೆ ವಾಸವಿರುವ ಮೈಸೂರಿನ ಭೂಮಿಕಾ ಟಿವಿ9ಗಾಗಿ ಅಲ್ಲಿನ ವಾಸ್ತವತೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಅಹಿತಕರ ಘಟನೆ ನಡೆದರೆ ಆಶ್ರಯ ಪಡೆದುಕೊಳ್ಳಲು ಬಂಕರ್ ಇದೆ. ಯುದ್ಧದ ಈ ಸನ್ನಿವೇಶದಲ್ಲಿ ಅಪಾಯ ಇದೆ ಅಂತಾದ್ರೆ ಸೇನಾ ಸಿಬ್ಬಂದಿ ಸೈರನ್ ಸೌಂಡ್ ಮಾಡ್ತಾರೆ. ಆ ಕೂಡಲೇ ಹಾಸ್ಟೆಲ್ ನಲ್ಲಿರೋರೆಲ್ಲಾ ಬಿಲ್ಡಿಂಗ್ ನೆಲಮಹಡಿಯ ಬಂಕರ್ಸ್ ಸೇರಿಕೊಳ್ಳಬೇಕು. ಈ ಪ್ರೋಸೆಸ್ ನಡುವೆಯೂ ಸದ್ಯಕ್ಕೆ ಅಪಾಯ ಏನಿಲ್ಲ. ನಮ್ಮವರು ಯಾರೂ ಆತಂಕಕ್ಕೆ ಒಳಗಾಗಬೇಡಿ ಆಗಬೇಡಿ ಅಂತ. ಹೇಳಿದ್ದಾಳೆ.

ಮೂರನೇ ವರ್ಷದ ಎಂಬಿಬಿಎ ಓದುತ್ತಿದ್ದ ವಿಜಯನಗರ ಜಿಲ್ಲೆಯ ವಿದ್ಯಾರ್ಥಿ ವಿಕಾಸ್ ಪಾಟೀಲ್ ಉಕ್ರೇನ್​ನಲ್ಲಿ ಸಿಲುಕೊಂಡಿದ್ದಾನೆ. ವಿಕಾಸ್ ಪಾಟೀಲ್ ಶಿಕ್ಷಕಿಯೊಬ್ಬರ ಮಗನಾಗಿದ್ದು, ನಿನ್ನೆ ರಾತ್ರಿ ಪುತ್ರನೊಂದಿಗೆ ಮಾತನಾಡಿದ್ದಾರೆ.

ವಿಜಯನಗರ ಜಿಲ್ಲೆಯ ಹಡಗಲಿ ಮೂಲದ ನಂದಿನಿ ರಷ್ಯಾದ ಜಪೋರಿಜಹಿಯಾದಲ್ಲಿ ಸಿಲುಕಿದ್ದಾಳೆ. ಭಾರತಕ್ಕೆ ಬರಲು ವಿದ್ಯಾರ್ಥಿನಿ ಹರಸಾಹಸ ಪಡುತ್ತಿದ್ದಾಳೆ.

ಪೋಷಕರ ಸಂಪರ್ಕಕ್ಕೆ ಸಿಗದ ಮಗಳು: ಉಕ್ರೇನ್​ನಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ಸ್ಫೂರ್ತಿ ಪೋಷಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿ ಪೋಷಕರಿಗೆ ಆತಂಕ ಮನೆ ಮಾಡಿದೆ. ಬೆಳಿಗ್ಗೆಯಿಂದ ವಿದ್ಯಾರ್ಥಿನಿ ಪೋಷಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುವ ಬಗ್ಗೆ ಉಕ್ರೇನ್ ಅಧಿಕಾರಿಗಳು ಮಾಹಿತಿ ನೀಡಿದ್ದರು. ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಮೆಸೇಜ್ ಬಂದಿದೆ. ಬಾಂಬ್ ಬ್ಲಾಸ್ಟ್ ಆಗುವ ಹಿನ್ನೆಲೆ ಅಂಡರ್ ಗ್ರೌಂಡ್​ನಲ್ಲಿ ವಿದ್ಯಾರ್ಥಿಗಳು ಕೂತಿದ್ದಾರೆ. ಅಂಡರ್ ಗ್ರೌಂಡ್​ನಲ್ಲಿರುವ ವಿಡಿಯೋವನ್ನು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಸದ್ಯ ನಾವಿರುವ ಜಾಗದಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತಿವೆ. ಸುರಕ್ಷತೆ ಹಿನ್ನೆಲೆ ನಮ್ಮನ್ನು ಅಂಡರ್ ಗ್ರೌಂಡ್​ಗೆ ಕಳಿಸಿದ್ದಾರೆ. ಸೌಂಡ್ ಕಡಿಮೆ ಆದಾಗ ಒಬ್ಬೊಬ್ಬರಾಗಿ ಮೇಲೆ ಬಂದು ಮನೆಯವರ ಜೊತೆ ಮಾತನಾಡುತ್ತಿದ್ದೇವೆ ಅಂತ ವಿದ್ಯಾರ್ಥಿನಿ ತಿಳಿಸಿದ್ದರು.

ಇದನ್ನೂ ಓದಿ

ಶ್ಲೋಕ, ಮಂತ್ರ ಹೇಳುವವರ ಮೇಲೆ ಅದರ ಪರಿಣಾಮ ಅಪಾರ, ಅನುಚಿತವಾಗಿ ಪಠಿಸುವವರಿಗೆ ಅಪಾಯಕಾರಿಯೂ ಹೌದು!

ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ವಾಪಸ್ಸಾತಿಗಾಗಿ ಎಂಬೇಸಿಯೊಂದಿಗೆ ಸಂಪರ್ಕದಲ್ಲಿದ್ದೇವೆ: ಬೊಮ್ಮಾಯಿ

Published On - 8:56 am, Fri, 25 February 22

Follow Us
Web contact
Web contact

TV9 Kannada

Read More