ರಾಮನಗರ: ಗ್ರಾಮ ಪಂಚಾಯತಿಗೆ 7ನೇ ಬಾರಿ ಅವಿರೋಧ ಆಯ್ಕೆಯಾಗಿ ದಾಖಲೆ ಬರೆದ ಮಹಿಳೆ
ಜಯಮ್ಮ 1989ರಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತ ಬಂದಿದ್ದು, ಅಂದಿನಿಂದಲೂ ಅವಿರೋಧವಾಗಿ ಆಯ್ಕೆಯಾಗುತ್ತಲೇ ಇದ್ದಾರೆ. ಈ ಬಾರಿ ಡಣಾಯಕನಪುರದಿಂದ ಯಾವುದೇ ಸ್ಪರ್ಧೆ ಇಲ್ಲದೆಯೇ ಆರಿಸಿ ಬಂದಿದ್ದಾರೆ.

ರಾಮನಗರ: ರಾಜ್ಯದಲ್ಲಿ ಸ್ಥಳೀಯ ಚುನಾವಣೆ ಕಾವು ರಂಗೇರಿದೆ. ರಾಜ್ಯಾದ್ಯಂತ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 22 ಹಾಗೂ 27ರಂದು ಮತದಾನ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೂಡ ನಡೆಸುತ್ತಿದ್ದಾರೆ.
ಡಿಸೆಂಬರ್ 22ರಂದು ರಾಮನಗರ ಹಾಗೂ ಕನಕಪುರ ಮತ್ತು ಡಿಸೆಂಬರ್ 27ರಂದು ಚನ್ನಪಟ್ಟಣ ಹಾಗೂ ಮಾಗಡಿ ತಾಲೂಕುಗಳಲ್ಲಿ ಚುನಾವಣೆ ನಡೆಯಲಿದೆ. ಈ ಮಧ್ಯೆ ಓರ್ವ ಮಹಿಳೆ ಈಗ ಏಳನೇ ಬಾರಿ ಅವಿರೋಧವಾಗಿ ಅಯ್ಕೆ ಆಗಿದ್ದಾರೆ.
ರಾಮನಗರ ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಜಯಮ್ಮ ಮುದ್ದಯ್ಯ ಏಳನೇ ಬಾರಿ ಆಯ್ಕೆಯಾಗಿದ್ದಾರೆ. ಅದೂ ಕೂಡ ಅವಿರೋಧವಾಗಿ ಅನ್ನೋದು ವಿಶೇಷ. ಅಂದಹಾಗೆ, ಶಾನಭೋಗನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಏಕೈಕ ಕುಟುಂಬ ಎನ್ನುವುದು ಇವರ ಹೆಗ್ಗಳಿಕೆ.
ಜಯಮ್ಮ 1989ರಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತ ಬಂದಿದ್ದು, ಅಂದಿನಿಂದಲೂ ಅವಿರೋಧವಾಗಿ ಆಯ್ಕೆಯಾಗುತ್ತಲೇ ಇದ್ದಾರೆ. ಈ ಬಾರಿ ಡಣಾಯಕನಪುರದಿಂದ ಯಾವುದೇ ಸ್ಪರ್ಧೆ ಇಲ್ಲದೆಯೇ ಆರಿಸಿ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಈ ಪಂಚಾಯಿತಿ ವ್ಯಾಪ್ತಿಯ ಮತದಾರರು ಮಾತ್ರ ಸ್ಪರ್ಧಿಸಬೇಕು ಎನ್ನುವ ನಿಯಮ ಅವರಿಗೆ ವರದಾನವಾಗಿದೆ.
ಅಂದಹಾಗೆ ಶ್ಯಾನುಭೋಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ಯಾನುಭೋಗನಹಳ್ಳಿ ಜೊತೆಗೆ ಚೌಡೇಶ್ವರಿಹಳ್ಳಿ, ಡಣಾಯಕನಪುರ, ಕೃಷ್ಣರಾಜಪುರ, ವಡ್ಡರದೊಡ್ಡಿ (ಕೇಶವಪುರ), ಕ್ಯಾಸಾಪುರ, ಚಾಮನಹಳ್ಳಿ, ಕಣ್ವ, ಆನುಮಾನಹಳ್ಳಿ ಗ್ರಾಮಗಳು ಬರುತ್ತವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 16 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ ಒಂದು ಸ್ಥಾನವು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದೆ. ಈ ಮೀಸಲಾತಿ ಇರುವ ಕ್ಷೇತ್ರದಲ್ಲಿ ಜಯಮ್ಮ ಅವಿರೋಧವಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಮೀಸಲಾತಿಯು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಬದಲಾದಂತೆಲ್ಲ ಜಯಮ್ಮ ಅವರೂ ತಾವು ಸ್ಪರ್ಧಿಸುವ ಕ್ಷೇತ್ರವನ್ನು ಬದಲಿಸುತ್ತಾ ಹೋಗಿದ್ದಾರೆ.
ಗ್ರಾಮದಲ್ಲಿ ಜಯಮ್ಮ ಅವರ ಕುಟುಂಬವನ್ನು ಹೊರತುಪಡಿಸಿ ಪರಿಶಿಷ್ಟ ವರ್ಗಕ್ಕೆ ಸೇರಿದ ಮತ್ತೊಂದು ಕುಟುಂಬ ಇಲ್ಲ. ಕಾಂಗ್ರೆಸ್ನ ನಿಷ್ಟಾವಂತ ಕಾರ್ಯಕರ್ತರಾದ ಅವರಿಗೆ ಗ್ರಾ.ಪಂ ಚುನಾವಣೆಯಲ್ಲಿ ಮತ್ತೋರ್ವ ರಾಜಕೀಯ ಎದುರಾಳಿ ಇಲ್ಲ. ಹೀಗಾಗಾ ಏಳು ಬಾರಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಅಂದಹಾಗೆ ಬಳೆ ವ್ಯಾಪಾರ ಮಾಡಿಕೊಂಡು ಬದುಕುಕಟ್ಟಿಕೊಂಡಿರುವ ಜಯಮ್ಮ, ರಾಜಕೀಯದಲ್ಲೂ ಸಕ್ರಿಯರಾಗಿರುತ್ತಾರೆ.
ಪತ್ರಿಕೆ ಓದಲು ಶೆಡ್ ನಿರ್ಮಾಣ, ಹೊಸ ಕಟ್ಟಡಕ್ಕಿಲ್ಲ ಅನುದಾನ: ಇದು ರಾಮನಗರದ ದುಸ್ಥಿತಿ