
ಚಿಕ್ಕಬಳ್ಳಾಪುರ, (ಡಿಸೆಂಬರ್ 27): ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ. ಬಾಲಾಜಿ ಸಿಂಗ್ ಗೆ ಮದುವೆಯಾಗಿ 8 ವರ್ಷ ಆಗಿದ್ದು, ಆರು ವರ್ಷದ ಮಗಳು ಇದ್ದಾಳೆ. ಆರ್ಥಿಕವಾಗಿ ಚನ್ನಾಗಿದ್ದ ಬಾಲಾಜಿ ಸಿಂಗ್, ತನ್ನದೆ ಕಾರುಗಳನ್ನು ಬಾಡಿಗೆಗೆ ಬಿಟ್ಟು ಅದರಿಂದ ಬರುವ ಹಣದಲ್ಲಿ ಪತ್ನಿ ಮಕ್ಕಳ ಜೊತೆ ಚನ್ನಾಗಿದ್ದ, ಆದ್ರೆ ಓರ್ವ ಮಹಿಳೆಯ ಸಹವಾಸ ಮಾಡಿ ಇದೀಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ಇಂದು (ಡಿಸೆಂಬರ್ 27) ಬೆಳ್ಳಂಬೆಳಗ್ಗೆ ಬಾಲಾಜಿ ಸಿಂಗ್ ಎನ್ನುವ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಬಾಲಾಜಿಗೆ ಈಗಾಗಲೇ ಮದುವೆಯಾಗಿ, ಮಗು ಸಹ ಇದೆ. ಹೀಗಿದ್ದೂ ಶಿಡ್ಲಘಟ್ಟ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು. ಈ ವಿಷಯ ಬಾಲಾಜಿ ಸಿಂಗ್ ಪತ್ನಿಗೆ ಗೊತ್ತಾಗಿ ಗಲಾಟೆಗಳು ಆಗಿವೆ. ಇದರಿಂದ ಬಾಲಾಜಿ ಮಹಿಳೆಯಿಂದ ದೂರವಾಗಿ ಪತ್ನಿ ಮಕ್ಕಳ ಜತೆ ಅರಾಮ್ ಇರಲು ಮುಂದಾಗಿದ್ದ. ಆದ್ರೆ, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮಾತ್ರ ಬಾಲಾಜಿಯನ್ನು ಬಿಡಲು ತಯಾರಿಲ್ಲ.ಬಾಲಾಜಿ ಸಿಂಗ್ಗನ ಹನಿಟ್ರಾಪ್ ಮಾಡಿ ಬ್ಲಾಕ್ ಮೇಲ್ ಮಾಡ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಬಾಲಾಕಿ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಬಾಲಾಜಿ ಸಿಂಗ್ ಜೊತೆ ಕೆಲವು ವರ್ಷಗಳಿಂದ ಆಕೆ ಪ್ರೀತಿ ಪ್ರೇಮ ಅಂತ ಇಬ್ಬರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಷಯ ಬಾಲಜಿ ಸಿಂಗ್ ಪತ್ನಿ, ತಾಯಿಗೆ ಗೊತ್ತಾಗಿದೆ. ಬಳಿಕ ಬಾಲಾಜಿ ಸಿಂಗ್ಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಪತ್ನಿ ಮಕ್ಕಳು ಬೇಕಾ? ಇಲ್ಲಾ ಇಟ್ಟುಕೊಂಡವಳು ಬೇಕಾ? ಎಂದು ಪತ್ನಿ ಗಲಾಟೆ ಮಾಡಿದ್ದಳು. ಇದರಿಂದ ಬಾಲಾಜಿ ಸಿಂಗ್ ಪತ್ನಿ ಮಕ್ಕಳ ಜೊತೆ ಇರುತ್ತೇನೆಂದು ಹೇಳಿದ್ದ. ಆದ್ರೆ, ಕಡೆ ಪ್ರಿಯತಮೆ ಮಾತ್ರ ಬಾಲಾಜಿಯನ್ನು ಬಿಡಲು ಸಿದ್ಧಳಿಲ್ಲ. ಪದೇ ಪದೇ ಫೋನ್ ಮಾಡಿ ಕಿರುಕುಳ, ಬ್ಲ್ಯಾಕ್ ಮೇಲ್ ಮಾಡುವುದನ್ನು ಶುರುಮಾಡಿದ್ದಳು. ಇದರಿಂದ ಬೇಸತ್ತು ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಆದ್ರೆ, ಸ್ವಲ್ಪ ಹೊತ್ತಿನ ಬಳಿಕ ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ ಎಂದು ಉಲ್ಟಾ ಹೇಳಿಕೆ ನೀಡಿದ್ದಾರೆ. ಇದರಿಂದ ಬಾಲಾಜಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.