
ದೇವನಹಳ್ಳಿ, ಜೂನ್ 17: ಆಸ್ತಿಗಾಗಿ ಅಣ್ಣ ತಮ್ಮಂದಿರು, ತಂದೆ ಮಕ್ಕಳು ಜಗಳವಾಡಿದ ಉದಾಹರಣೆಗಳಿವೆ. ಆದರೆ, ಜೀವಂತ ಇರುವ ವ್ಯಕ್ತಿ ಮರಣ ಹೊಂದಿದ್ದಾನೆಂದು ನಕಲಿ ಮರಣ ಪ್ರಮಾಣಪತ್ರ (Fake Death Certificate) ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಜಮೀನನ್ನು ಕಬಳಿಸಿರುವ ಘಟನೆ ಬೆಂಗಳೂರು (Bengaluru) ಪೂರ್ವ ತಾಲೂಕಿನ ಚೀಮಸಂದ್ರ ಗ್ರಾಮದಲ್ಲಿ ನಡೆದಿದೆ. ಚೀಮಸಂದ್ರ ಗ್ರಾಮದ ರೈತ ಮುನಿಯಪ್ಪ (Farmer Muniyappa) ಎಂಬುವರು 50 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆಂದು ಆರೋಪಿಗಳು ನಕಲಿ ಮರಣ ಪತ್ರ ಸೃಷ್ಟಿಸಿ ಭೂಮಿಯನ್ನು ಕಬಳಿಸಿದ್ದಾರೆ. ಪ್ರಕರಣ ಸಂಬಂಧ ನಾಗೇಶ್, ಎಂ.ಸಿ ನರೇಂದ್ರ ಸೇರಿದಂತೆ 21 ಜನರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಬೆಂಗಳೂರು ಪೂರ್ವ ತಾಲೂಕಿನ ಚೀಮಸಂದ್ರ ಗ್ರಾಮದ ಸರ್ವೇ ನಂಬರ್ 93 ರಲ್ಲಿ, ಮುನಿಯಪ್ಪ ಅವರು 2 ಎಕರೆ 38 ಗುಂಟೆ ಜಮೀನು ಹೊಂದಿದ್ದಾರೆ. ಮುನಿಯಪ್ಪ ಅವರು ಈ ಜಮೀನನ್ನು 1977ರಲ್ಲಿ ಹೆಚ್.ಜಿ ರಂಜಿತ್ ಕುಮಾರ್ ಎಂಬುವರಿಂದ ಖರೀದಿಸಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಮುನಿಯಪ್ಪ ಮತ್ತು ಇವರ ಕುಟುಂಬದವರು ಭೂಮಿಯನ್ನು ಅನುಭವಿಸಿಕೊಂಡು ಬಂದಿದ್ದಾರೆ” ಎಂದು ಎಫ್ಐಆರ್ನಲ್ಲಿದೆ.
“ಈ ಜಮೀನನ್ನು ಜಮೀನನ್ನು ಲಪಟಾಯಿಸುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಂ.ಸಿ. ನರೇಂದ್ರ ಎಂಬುವರ ಹೆಸರಿಗೆ ಖಾತೆ ಮಾಡಲಾಗಿದೆ. ನಂತರ, ಜೂನ್ 5 ರಂದು ಎಂ.ಸಿ. ನರೇಂದ್ರರವರ ಸಹಪಾಟಿಗಳು ಜಮೀನಿಗೆ ಅತಿಕ್ರಮವಾಗಿ ಪ್ರವೇಶ ಮಾಡಿ ಜಮೀನಿನ ಸರ್ವೇ ಕಾರ್ಯ ಮಾಡಲು ಮುಂದಾಗಿದ್ದಾರೆ. ಈ ವಿಚಾರ ತಿಳಿದು ಮುನಿಯಪ್ಪ ಮತ್ತು ಇವರ ಮಗ ನಾರಾಯಣಸ್ವಾಮಿ ಇಬ್ಬರೂ ಜಮೀನಿನ ಬಳಿಗೆ ಹೋದಾಗ, ಆರೋಪಿಗಳು ಈ ಜಮೀನು ನಿಮ್ಮ ಹೆಸರಿನಲ್ಲಿ ಇಲ್ಲವೆಂದು ಹೇಳಿ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ” ಎಂದು ಮುನಿಯಪ್ಪ ದೂರು ನೀಡಿದ್ದಾರೆ.
ಅಲ್ಲದೆ, ಆರೋಪಿಗಳು “ಈ ಜಮೀನು ನಿಮ್ಮ ಹೆಸರಿನಲ್ಲಿ, ಇಲ್ಲವೆಂದು ಹೇಳಿದ್ದಾರೆ. ಇದರಿಂದ, ಆಘಾತಗೊಂಡ ಮುನಿಯಪ್ಪ ಅವರು ಪಹಣಿ ನೋಡಿದಾಗ, ಜಮೀನು ತಮ್ಮ ಹೆಸರಿನಲ್ಲಿ ಇಲ್ಲದೆ ಬೇರೊಬ್ಬರ ಹೆಸರಿನಲ್ಲಿ ಅಕ್ರಮವಾಗಿ ಖಾತೆಯಾಗಿರುವುದು ಗೊತ್ತಾಗಿದೆ” ಎಂದು ಎಫ್ಐಆರ್ನಲ್ಲಿ ಬರೆಯಲಾಗಿದೆ.
ಇನ್ನು, “ಮುನಿಯಪ್ಪ ಅವರು ಈ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಅಲ್ಲದೆ, 1989 ಇಸವಿಯಲ್ಲಿ ವ್ಯವಸಾಯ ಮಾಡುವ ಉದ್ದೇಶದಿಂದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಕೊಳವೆ ಬಾವಿಗೆ ಮೋಟಾರ್ ಪಂಪ್ ಸೆಟ್ ಖರೀದಿಸಲು ಜಮೀನಿನ ದಾಖಲೆಗಳ ಮೇಲೆ 1990 ನೇ ಇಸವಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆದಿದಿದ್ದಾರೆ” ಎಂದು ಎಫ್ಐಆರ್ನಲ್ಲಿದೆ.
“ಅಂದಿನಿಂದ ಇಲ್ಲಿಯವರೆಗೂ ಮುನಿಯಪ್ಪ ಮತ್ತು ಇವರ ಕುಟುಂಬದವರು ಜಮೀನಿಗೆ ಕಂದಾಯ ಪಾವತ್ತಿಸಿಕೊಂಡು ಬಂದಿದ್ದಾರೆ. ಇಷ್ಟೇ ಅಲ್ಲದೆ, 2010 ನೇ ಇಸವಿಯಲ್ಲಿ ನಡೆದ ಆವಲಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೀಮಸಂದ್ರ ಗ್ರಾಮದ ಸದಸ್ಯನಾಗಿ ಮುನಿಯಪ್ಪ ಆಯ್ಕೆಯಾಗಿದ್ದರು. ಈ ಚುನಾವಣಾ ಪ್ರಮಾಣ ಪತ್ರದಲ್ಲಿ ಜಮೀನು ಆಸ್ತಿ ವಿವರವನ್ನು ಲಗತ್ತಿಸಿದ್ದಾರೆ. ಹಾಗೂ ಮುನಿಯಪ್ಪ ಅವರ ಪತ್ನಿಯ ಅಂತ್ಯ ಕ್ರಿಯೆ ಕೂಡ ಇದೇ ಜಮೀನಿನಲ್ಲಿ ನಡೆದಿದೆ” ಎಂದು ಎಫ್ಐಆರ್ನಲ್ಲಿದೆ.
ಇದೀಗ, “ಈ ಜಮೀನನ್ನು ಎಂ.ಸಿ. ನರೇಂದ್ರ ಕಬಳಿಸುವ ದುರುದ್ದೇಶದಿಂದ ಮುನಿಯಪ್ಪ ಅವರು ಬದುಕಿರುವಾಗಲೇ ಇವರ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಿ ನಾಗೇಶ್ ಎಂಬುವವರ ಹೆಸರಿಗೆ ಖಾತೆ ಮಾಡಲು ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಕಬಳಿಸಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ” ಮುನಿಯಪ್ಪ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಣ್ಣನ ಕೊಂದು ನಾಟಕವಾಡಿದ್ದ ತಮ್ಮ: ಮಾಲೀಕನ ಕೊಲೆ ಸುಳಿವು ಕೊಟ್ಟ ನಾಯಿ, ಕುರಿಗಳು
“ಬದುಕಿರುವವನನ್ನ ಸಾಯಿಸಿ ಜಮೀನು ಲಪಟಾಯಿಸಿದ್ದಾರೆ ಎಂದು ವೃದ್ಧ ಮುನಿಯಪ್ಪ ಜಮೀನಿನಲ್ಲಿರುವ ತನ್ನ ಪತ್ನಿ ಸಮಾಧಿ ಮುಂದೆ ನಿಂತು ಕಣ್ಣೀರು ಹಾಗಿದ್ದಾರೆ. ಅಧಿಕಾರಿಗಳು ಪರಿಶೀಲನೆ ಮಾಡದೆ ಜಮೀನು ಪರಾಬಾರೆ ಮಾಡಿದ್ದಾರೆ. ಹೆಚ್ಎಎಲ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಮೀನು ಖರೀದಿ ಮಾಡಿದ್ದೇನೆ” ಎಂದು ಹೇಳಿದರು.