ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಹಣ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್​​

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಪ್ರವಾಸೋದ್ಯಮ ಇಲಾಖೆಯ ಹಣ ಅಕ್ರಮ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿದ್ದು, ಹಗರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಹಣ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್​​
ಪ್ರವಾಸೋದ್ಯಮ ಇಲಾಖೆ
Edited By: ವಿವೇಕ ಬಿರಾದಾರ

Updated on: Jul 18, 2024 | 1:44 PM

ಬಾಗಲೋಟೆ, ಜುಲೈ 18: ಪ್ರವಾಸೋದ್ಯಮ ಇಲಾಖೆಯ (Bagalkot Tourism Department Scam) ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಐಡಿಬಿಐ ಬ್ಯಾಂಕ್ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಾಗರ್ ಬಂಧಿತ ಆರೋಪಿ. ಸೂರಜ್ ಸಾಗರ್ ಪ್ರವಾಸೋದ್ಯಮ ಇಲಾಖೆ ಮೂರು ಖಾತೆಗಳಿಂದ 2,47,73,999 ರೂ. ಅನ್ನು ಸ್ನೇಹಿತರು, ಸಂಬಂಧಿಕರ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದಲ್ಲಿ ಭಾಗಿಯಾದ ಇತರೆ ಆರೋಪಿಗಳಿಗಾಗಿ ಬಾಗಲಕೋಟೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಹಗರಣದಲ್ಲಿ ಬ್ಯಾಂಕ್​ನ ಕೆಲ ಸಿಬ್ಬಂದಿ, ಇಲಾಖೆ ಅಧಿಕಾರಿಗಳು ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 2021ರಿಂದ 2024ರವರೆಗೆ ಒಟ್ಟು 54 ಬಾರಿ ಹಣ ವರ್ಗಾವಣೆಯಾಗಿದೆ. ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರ್ಮಿಕ ಇಲಾಖೆ ಗುತ್ತಿಗೆ ನೌಕರನ ವಿರುದ್ಧ 2 ಕೋಟಿ ಹಣ ದುರ್ಬಳಕೆ ಆರೋಪ

ಏನಿದು ಹಗರಣ

ಹಗರಣ ಸಂಬಂಧ ಜುಲೈ 11 ರಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಎಂಬುವವರು ಬಾಗಲಕೋಟೆ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದರು.
ದೂರಿನಲ್ಲಿ, 2021ರ ಅಕ್ಟೋರ್​​ 28 ರಿಂದ ಈ ವರ್ಷ ಫೆಬ್ರವರಿ 22 ವರೆಗೆ ಡಿಸಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರ ಹೆಸರಲ್ಲಿ ಐಡಿಬಿಐ ಬ್ಯಾಂಕ್​ ಖಾತೆ ಮೂಲಕ ವಂಚನೆ ನಡೆದಿದೆ. ಮೊದಲಿಗೆ ಬ್ಯಾಂಕ್​ನಲ್ಲಿ ಖಾತೆ ತೆರೆದು ಮೂರು ಅಕೌಂಟ್ ನಿಂದ ವಿವಿಧ ಅಕೌಂಟ್ ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಇನ್ನು ಐಡಿಬಿಐ ಬ್ಯಾಂಕ್ ಖಾತೆ ನಂಬರ್ 1071104000160063 ಮೂಲಕ 28.10.2021 ರಿಂದ 22/2024ರ ವರೆಗೆ ಒಟ್ಟು 1,35,96,500 ರೂ, ಖಾತೆ ನಂ 1071104000165228 ಮೂಲಕ 4-5-2022 ರಿಂದ 7-11-2022 ವರೆಗೆ 1,01,33,750 ರೂ, ಖಾತೆ ನಂ 1071104000165501 ಮೂಲಕ 11.10.2022 ರಂದು 10,43,749 ರೂ. ಸೇರಿ ಒಟ್ಟು 2,47,73,999 ರೂ. ಹಣವನ್ನು ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಅನುಮತಿಯಿಲ್ಲದೆ, ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ, ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಹಣವನ್ನು ಆರೋಪಿತರು ತಮಗೆ ಬೇಕಾದ ರೀತಿಯಲ್ಲಿ ವರ್ಗಾವಣೆ ಮಾಡಿದ್ದಾರೆ. ಇಲಾಖೆ ಹಣ ತೆಗೆದುಕೊಂಡು ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಐಪಿಸಿ 1860(us 403,406,409,420) ಸೆಕ್ಷನ್ ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Web contact

TV9 Kannada

Read More
Follow Us