ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ; ತಾಂಡಾದೊಳಗೆ ಬಿಜೆಪಿ ಮುಖಂಡರಿಗೆ ಪ್ರವೇಶ ನಿಷೇಧ

ತಾಂಡಾದಲ್ಲಿ ಯಾವ ಬಿಜೆಪಿ ಎಮ್​ಎಲ್​ಎ ಹಾಗೂ ಬಿಜೆಪಿ ನಾಯಕರನ್ನು ಒಳಗೆ ಬಿಡುವುದಿಲ್ಲ. ಬಿಜೆಪಿ ಸರಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ; ತಾಂಡಾದೊಳಗೆ ಬಿಜೆಪಿ ಮುಖಂಡರಿಗೆ ಪ್ರವೇಶ ನಿಷೇಧ
ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ
ಆಯೇಷಾ ಬಾನು

Updated on: Mar 28, 2023 | 11:10 AM

ಬಾಗಲಕೋಟೆ: ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಲಂಬಾಣಿ ತಾಂಡಾದೊಳಗೆ ಬಿಜೆಪಿ ರಾಜಕೀಯ ಮುಖಂಡರಿಗೆ ಪ್ರವೇಶ ನಿಷೇಧ ಹೇರಿದ್ದಾರೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದಲ್ಲಿ ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಕಟ್ಟಿದ್ದ ಬಿಜೆಪಿ ಧ್ವಜ ತೆರವುಗೊಳಿಸಿ ಲಂಬಾಣಿ ಸಮುದಾಯಕ್ಕೆ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ತಾಂಡಾದಲ್ಲಿ ಯಾವ ಬಿಜೆಪಿ ಎಮ್​ಎಲ್​ಎ ಹಾಗೂ ಬಿಜೆಪಿ ನಾಯಕರನ್ನು ಒಳಗೆ ಬಿಡುವುದಿಲ್ಲ. ಬಿಜೆಪಿ ಸರಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಹಾಗೂ ನಮ್ಮ ತಾಂಡಕ್ಕೆ ಬಿಜೆಪಿ ರಾಜಕೀಯ ಮುಖಂಡರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಹುನಗುಂದ ತಾಲೂಕಿನ ಅಮೀನಗಢ ತಾಂಡಾದಲ್ಲಿ ಕರ್ನಾಟಕ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಒಳಮೀಸಲಾತಿ ಹಿಂಪಡೆಯಬೇಕು ಎಂದು ಲಂಬಾಣಿ ಜನರು ಬ್ಯಾನರ್ ಅಂಟಿಸಿದ್ದಾರೆ.

ಅಚನೂರು, ನೀಲಾನಗರ, ಜಡ್ರಾಮನಕುಂಟೆ, ಲವಳೇಶ್ವರ, ಗುಲಬಾಳ, ಶಿರಗುಪ್ಪಿ ತಾಂಡಾ, ಬೀಳಗಿ ತಾಲೂಕಿನ ಸುನಗ ತಾಂಡಾ ಸೇರಿದಂತೆ ವಿವಿಧ ತಾಂಡಾಗಳಲ್ಲಿ ಬ್ಯಾನರ್ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಸರಕಾರದ ವಿರುದ್ಧ ಬಂಜಾರಾ ಸಮುದಾಯದಿಂದ ಬ್ಯಾನರ್ ಪ್ರತಿಭಟನೆ ನಡೆಯುತ್ತಿದೆ.

ಇದನ್ನೂ ಓದಿ: Davanagere: ಆಧಾರ್ ಕಾರ್ಡ್​ಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ರೂ. 1000 ಶುಲ್ಕ ವಿರೋಧಿಸಿ ಪ್ರತಿಭಟನೆಗಿಳಿದ ಕಾಂಗ್ರೆಸ್ ಕಾರ್ಯಕರ್ತರು

ಶಿವಮೊಗ್ಗದಲ್ಲೂ ಪ್ರತಿಭಟನೆ

ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ ಹಿನ್ನೆಲೆ ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಗ್ರಾಮದಲ್ಲಿ ರಸ್ತೆ ತಡೆದು, ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ ಹೊರ ಹಾಕಿದ್ದಾರೆ. ಒಳ ಮೀಸಲಾತಿ ಜಾರಿ ಮಾಡದಂತೆ ಆಗ್ರಹಿಸಿದ್ದಾರೆ.

ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ವಿರೋಧ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ

ಶಿವಮೊಗ್ಗ: ಒಳಮೀಸಲಾತಿ ಜಾರಿಗೆ ಬಂಜಾರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತ ಹಿನ್ನೆಲೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ (bs Yediyurappa) ಅವರ ಮೈತ್ರಿ ನಿವಾಸದ ಮೇಲೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಪ್ರತಿಭಟನಾಕಾರರು ಯಡಿಯೂರಪ್ಪ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದಾರೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ಉಂಟಾಗಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ, ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್​ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಶಿಕಾರಿಪುರ ತಾಲೂಕು ಕಚೇರಿ ಎದುರು ಪ್ರತಿಭಟನೆ ಮುಂದುವರೆದಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ರವಾನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ತಹಶೀಲ್ದಾರ್​ ವಿಶ್ವನಾಥ್​ರಿಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us