ಇಂದಿರಾ ಕಾಲದಲ್ಲಿ ಲೈಟ್ ಕಂಬ ನಿಲ್ಲಿಸಿದ್ರೂ ಗೆಲ್ಲುತ್ತೆ ಅಂತಿದ್ದರು, ಇವತ್ತು ರಾಹುಲ್, ಸೋನಿಯಾ ನಿಂತರೂ ಸೋಲ್ತಾರೆ -ಕಟೀಲ್

ರಾಹುಲ್ ಗಾಂಧಿ ಇಮ್ಮೆಚ್ಯೂರ್ಡ್ ಪರ್ಸನ್. ಸಿದ್ದರಾಮಯ್ಯ -ಡಿಕೆ ಶಿವಕುಮಾರ್​ ಮಧ್ಯೆ ಹೊಂದಾಣಿಕೆ ಇಲ್ಲ, ಇವರು ಜಗಳದ ಮೂಲಕವೇ ಕಾಂಗ್ರೆಸ್ ಗೆ ಇತಿಶ್ರೀ ಹೇಳುತ್ತಾರೆ‌. ಬಳ್ಳಾರಿಯಲ್ಲಿ ಈ ಹಿಂದೆ ಕಾಂಗ್ರೆಸ್ ನ ಗೂಂಡಾಗಿರಿ ಇತ್ತು. ಅದರ ನಡುವೆ ಬಿಜೆಪಿ ಜಯ ಗಳಿಸಿ ಈ ಮಟ್ಟಕ್ಕೆ ತಲುಪಿದೆ. ಬಳ್ಳಾರಿಗೆ ಕಾಂಗ್ರೆಸ್ ಗಿಂತ ಬಿಜೆಪಿಯ ಕೊಡುಗೆ ಅಪಾರವಾಗಿದೆ- ಜಗದೀಶ್ ಶಟ್ಟರ್

ಇಂದಿರಾ ಕಾಲದಲ್ಲಿ ಲೈಟ್ ಕಂಬ ನಿಲ್ಲಿಸಿದ್ರೂ ಗೆಲ್ಲುತ್ತೆ ಅಂತಿದ್ದರು, ಇವತ್ತು ರಾಹುಲ್, ಸೋನಿಯಾ ನಿಂತರೂ ಸೋಲ್ತಾರೆ -ಕಟೀಲ್
ಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
Edited By: ಸಾಧು ಶ್ರೀನಾಥ್​

Updated on: Apr 19, 2022 | 7:59 PM

ಬಳ್ಳಾರಿ: ನೆರೆಯ ವಿಜಯನಗರದಲ್ಲಿ ಮೊನ್ನೆಯಷ್ಟೇ ರಾಜ್ಯ ಕಾರ್ಯಕಾರಿಣಿ ಕಂಡಿದ್ದ ಬಿಜೆಪಿ ಇಂದು ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ತೆಗಳಿ, ಪ್ರಧಾನಿ ಮೋದಿಯನ್ನ ಕೊಂಡಾಡಿದರು. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ನಿಂದ ಲೈಟ್ ಕಂಬ ನಿಲ್ಲಿಸಿದ್ರೂ ಗೆಲ್ಲುತ್ತೆ ಎನ್ನಲಾಗ್ತಿತ್ತು. ಇವತ್ತು ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಿಂತರೂ ಸೋಲ್ತಾರೆ! ದೇಶಾದ್ಯಂತ ಪರಿವರ್ತನೆಯಾಗಿದ್ದು, ಕಾಂಗ್ರೆಸ್ ಮುಕ್ತವಾಗ್ತಿದೆ‌ ಎಂದು ಹೇಳಿದರು.

ಇವತ್ತು ಇಡೀ ಜಗತ್ತು ಭಾರತದ ಕಡೆ ನೋಡ್ತಿದೆ. ಪಾಕಿಸ್ತಾನದ ಲೋಕಸಭೆಯಲ್ಲೂ ಪ್ರಧಾನಿ ಮೋದಿಗೆ ಜಯಘೋಷ ಹಾಕಿದರು. ಅಪಘಾನಿಸ್ತಾನದ ಮಾಜಿ ಪ್ರಧಾನಿ ಇಡೀ ಜಗತ್ತನ್ನ ಒಂದು ಮಾಡುವ ಶಕ್ತಿ ಮೋದಿಗೆ ಇದೆ ಎಂದಿದ್ದಾರೆ‌. ಅಮೆರಿಕಾ ದೇಶವೂ ಭಾರತವನ್ನ ನನ್ನ ಆತ್ಮೀಯ ದೇಶ, ಮೋದಿ ನಮ್ಮ ಮಿತ್ರ ಆನ್ನುತ್ತೆ. ಅದೇ ಕಾಂಗ್ರೆಸ್ ನ ಆಡಳಿತದಲ್ಲಿ ಭಾರತವನ್ನ ಹಾವಾಡಿಗ ದೇಶ ಅಂತಾ ಕರೆದರು. ಉಕ್ರೇನ್ ಯುದ್ದ ನಿಲ್ಲಿಸುವಂತೆ ನಾನಾ ದೇಶದ ಅಧ್ಯಕ್ಷರು ಭಾರತಕ್ಕೆ ಮನವಿ ಮಾಡುತ್ತಿವೆ. ಅರಬ್ ದೇಶದಲ್ಲಿ 24 ಎಕರೆ ಜಮೀನಿನಲ್ಲಿ ವೈಭವದ ಗಣಪತಿ ದೇಗುಲ ನಿರ್ಮಿಸಿದ್ದು ಪ್ರಧಾನಿ ನರೇಂದ್ರ ಮೋದಿ.

ಹಿಂದೆ ಭಾರತ ದೇಶದ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿತ್ತು. ಆದರೆ ಈಗ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲೆ ಎಲ್ಲರೂ ತಣ್ಣಗಾಗಿದ್ದಾರೆ. ಇಡೀ ಜಗತ್ತಿನಲ್ಲಿ ಉಚಿತ ಕೋವಿಡ್ ಲಸಿಕೆ ಕೊಟ್ಟಿದ್ದು ಮೋದಿ ಸರ್ಕಾರ ಮಾತ್ರ. ಕಾಂಗ್ರೆಸ್ ನಾಯಕರು ಮೊದಲು ಟೀಕೆ ಮಾಡಿ, ರಾತ್ರಿ ಹೊತ್ತಲ್ಲಿ ಕದ್ದು ಮುಚ್ಚಿ ಲಸಿಕೆ ಹಾಕಿಸಿಕೊಂಡರು! ಇಡೀ ಜಗತ್ತು ಭಾರತದತ್ತ ನೋಡ್ತಿದೆ, ಭಾರತ ಭಾರತೀಯ ಜನತಾ ಪಕ್ಷದತ್ತ ನೋಡ್ತಿದೆ. ಕಾಂಗ್ರೆಸ್ ವಿರೋಧ ಪಕ್ಷ ಅಲ್ಲ, ನಾಲಾಯಕ್ ಪಕ್ಷ ಎಂದು ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ಗೆ ಹೊಂದಾಣಿಕೆ ಇಲ್ಲ; ಕಾಂಗ್ರೆಸ್ ಮುಗಿಸೋಕೆ ಈ ಇಬ್ಬರೇ ಸಾಕು: ಜಗದೀಶ್ ಶೆಟ್ಟರ್
ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮಾವೇಶದಲ್ಲಿ ಮಾತನಾಡಿ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಮೋದಿಯವರು ಹೇಳಿದಂತೆ ಕಾಂಗ್ರೆಸ್ ಮುಕ್ತ ಭಾರತವಾಗಿದೆ ಎಂದು ಹೇಳದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಟಾರ್ಗೆಟ್ ಹೊಂದಿದ್ದೇವೆ. ನಮ್ಮ ಅಧ್ಯಕ್ಷ ಜೆ.ಪಿ. ನಡ್ಡಾ ನಮಗೆ ಟಾರ್ಗೆಟ್​ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ವಿಶ್ವ ನಾಯಕರಾಗಿದ್ದಾರೆ. ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸುವಂತೆ ಮೋದಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕರೆ ಮಾಡಿ ಮನವಿ ಮಾಡಿದ್ದಾರೆ. ಮೋದಿಯವರಿಗೆ ಪರ್ಯಾಯ ನಾಯಕರು ಯಾರೂ ಇಲ್ಲ ಎಂದು ಬಳ್ಳಾರಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಶೆಟ್ಟರ್ ನುಡಿದರು.

ಮೋದಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 6 ಸಾವಿರ ರೂಪಾಯಿ ಹಾಗೂ ರಾಜ್ಯ ಸರ್ಕಾರದ ಮೂಲಕ 4 ಸಾವಿರ ರೂ ಸೇರಿ ಹತ್ತು ಸಾವಿರ ರೂಪಾಯಿ ಕೊಡ್ತಿದ್ದಾರೆ. ರಾಹುಲ್ ಗಾಂಧಿ ಇಮ್ಮೆಚ್ಯೂರ್ಡ್ ಪರ್ಸನ್. ರಾಹುಲ್ ಗಾಂಧಿಯಂತವರು ಎಲ್ಲಿಯವರೆಗೆ ಇರ್ತಾರೋ ಅಲ್ಲಿವರೆಗೂ ಕಾಂಗ್ರೆಸ್ ಗೆ ಮುಕ್ತಿ ಇಲ್ಲ. ಪಂಜಾಬ್ ನಲ್ಲಿ ಸಿದ್ದು, ಕರ್ನಾಟಕದಲ್ಲಿ ಸಿದ್ದು – ಕಾಂಗ್ರೆಸ್ ಮುಗಿಸೋಕೆ ಈ ಇಬ್ಬರೇ ಸಾಕು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ಗೆ ಹೊಂದಾಣಿಕೆ ಇಲ್ಲ, ಇವರು ಜಗಳದ ಮೂಲಕವೇ ಕಾಂಗ್ರೆಸ್ ಗೆ ಇತಿಶ್ರೀ ಹೇಳುತ್ತಾರೆ‌. ಬಳ್ಳಾರಿಯಲ್ಲಿ ಈ ಹಿಂದೆ ಕಾಂಗ್ರೆಸ್ ನ ಗೂಂಡಾಗಿರಿ ಇತ್ತು. ಅದರ ನಡುವೆ ಬಿಜೆಪಿ ಜಯ ಗಳಿಸಿ ಈ ಮಟ್ಟಕ್ಕೆ ತಲುಪಿದೆ. ಬಳ್ಳಾರಿಗೆ ಕಾಂಗ್ರೆಸ್ ಗಿಂತ ಬಿಜೆಪಿಯ ಕೊಡುಗೆ ಅಪಾರವಾಗಿದೆ. ಕಲ್ಯಾಣ ಕರ್ನಾಟಕಾದ್ಯಂತ ಬಿಜೆಪಿ ಪ್ರಬಲವಾಗಿದೆ. 2023 ರಲ್ಲಿ ಬಿಜೆಪಿ 150 ಸೀಟು ಗೆದ್ದು, ಅಧಿಕಾರ ಹಿಡಿಯೋದು ಪಕ್ಕಾ ಎಂದು ಜಗದೀಶ್ ಶಟ್ಟರ್ ಹೇಳಿದರು.

Web contact

TV9 Kannada

Read More
Follow Us