Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯ ಬಲ ಸಾಧಿಸಲು ಸ್ವಂತ ಅತ್ತಿಗೆಯನ್ನೇ ಕೊಂದ ಮಾಲ.. ಕೊನೆಗೂ ಕೊಲೆಯ ಅಸಲಿಯತ್ತು ಬಯಲು

ಮಾಜಿ ಕಾರ್ಪೋರೇಟರ್ ರೇಖಾ ಕೊಲೆ ಅನೇಕ ಪ್ರಶ್ನೆಗಳನ್ನ ಹುಟ್ಟು ಹಾಕಿತ್ತು. ಪೀಟರ್ ವೈಯಕ್ತಿಕ ಕಾರಣಕ್ಕೆ ಕೊಂದು ಹಾಕಿದ್ದಾನೆ ಅಂತಲೇ ಊಹಿಸಲಾಗಿತ್ತು. ಆರೋಪಿಗಳು ಬಲೆಗೆ ಬೀಳ್ತಾ ಇದ್ದಂತೆ ಒಂದೊಂದೆ ರೋಚಕ ಸತ್ಯಾಂಶ ಹೊರ ಬೀಳ್ತಾ ಇದೆ. ಸದ್ಯ ಮಾಲ,ಅರುಳ್ ಬಂಧನ ಕೌಟುಂಬಿಕ ಕಲಹದ ಜೊತೆಗೆ ರಾಜಕೀಯ ಜಿದ್ದಿನ ಕಹಾನಿ ಹೇಳ್ತಾ ಇದೆ.

ರಾಜಕೀಯ ಬಲ ಸಾಧಿಸಲು ಸ್ವಂತ ಅತ್ತಿಗೆಯನ್ನೇ ಕೊಂದ ಮಾಲ.. ಕೊನೆಗೂ ಕೊಲೆಯ ಅಸಲಿಯತ್ತು ಬಯಲು
ರೇಖಾ ಕದಿರೇಶ್ ದಂಪತಿ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Jun 28, 2021 | 2:07 PM

ಬೆಂಗಳೂರು: ನಗರದಲ್ಲಿ ರೇಖಾ ಕದಿರೇಶ್ ಕೊಲೆಯಾದ ದಿನ ಮಾಲಾ ಕಣ್ಣೀರು ಹಾಕಿದ್ದಳು. ಈಕೆಯ ಕಣ್ಣೀರು, ಸಂಕಟ ನೋಡ್ದೋರು ಪಾಪ ತನ್ನ ಅತ್ತಿಗೆ ಕೊಲೆ ಕಂಡು ಏನ್ ಮರುಗ್ತಿದ್ದಾಳೆ ಅನ್ಕೋಬೇಕು. ಅಷ್ಟೊಂದು ನೊಂದು ಹೋಗಿದ್ದಳು ಈ ದಢೂತಿ ಮಾಲಾ. ಆದ್ರೆ ಈಕೆಯ ಕಣ್ಣೀರು ಕೇವಲ ಡ್ರಾಮಾ, ಮೊಸಳೆ ಕಣ್ಣೀರು ಅನ್ನೋ ಅನುಮಾನ ಪೊಲೀಸರಿಗೆ ಅವತ್ತೇ ಮೂಡಿತ್ತು. ಅದೇ ಅನುಮಾನದ ಮೇಲೆ ಮಾಲ ಹಾಗೂ ಆಕೆಯ ಮಗ ಅರುಳ್, ಸೊಸೆ ಪೂರ್ಣಿಮಾರನ್ನು ಠಾಣೆಗೆ ಕರೆದೊಯ್ದ ಫುಲ್ ಗ್ರಿಲ್ ಮಾಡಿದ್ರು. ನಿರಂತರ ವಿಚಾರಣೆ ಪರಿಣಾಮ ಇಬ್ಬರ ಪಾತ್ರ ಸಾಬೀತಾಗಿದೆ.

ಮಾಲಾ, ಪುತ್ರ ಅರುಳ್ಗೆ ಮದ್ದು ಅರೆಯುತ್ತಿದೆ ಖಾಕಿ ಟೀಂ ಅವತ್ತು ಕಣ್ಣೀರಿನ ನಾಟಕವಾಡಿದ್ದ ಇದೇ ಮಾಲ ಇವತ್ತು ಕಂಬಿ ಹಿಂದೆ ಸೇರಿದ್ದಾಳೆ. ಆಕೆಯ ಜೊತೆ ಮಗ ಅರುಳ್ ಕೂಡ ಜೈಲಲ್ಲಿ ಮುದ್ದೆ ಮುರಿಯುವಂತೆ ಆಗಿದೆ. ಅಂದುಕೊಂಡಂತೆ ರಾಜಕೀಯ ಹಿಡಿತ ಸಾಧಿಸಲು ರೇಖಾ ಕೊಲೆ ಮಾಡಿಸಿರೋದನ್ನ ಪೊಲೀಸರು ಬಯಲಿಗೆ ಎಳೆದಿದ್ದಾರೆ. ರೇಖಾ ಪತಿ ಕದಿರೇಶ್ ಸಹೋದರಿ ಮಾಲ ಮತ್ತು ಮಾಲ ಪುತ್ರ ಅರುಳ್ ಇವರಿಬ್ಬರು ರಾಜಕೀಯ ಚದುರಂಗದಾಟವಾಡಿ ರೇಖಾ ಅನ್ನೋ ಪಾನ್ ಅನ್ನ ಉರುಳಿಸಿಬಿಟ್ಟಿದ್ದಾರೆ. ಮೂರನೇ ವ್ಯಕ್ತಿ ಪೀಟರ್ ಮೂಲಕ ಕೆಲಸ ಸಾಧಿಸಿ ಅಮಾಯಕರಂತೆ ಪೋಸ್ ಕೊಡಲು ಮುಂದಾಗಿದ್ದ ತಾಯಿ-ಮಗನನ್ನು ಪೊಲೀಸರು ಹಿಡಿದು ಕಂಬಿ ಹಿಂದೆ ನೂಕಿದ್ದಾರೆ.

ಪೀಟರ್ ಹೆಗಲ ಮೇಲೆ ಬಂದೂಕಿಟ್ಟು ಸಿಕ್ಕಿಬಿದ್ದ ಮಾಲಾ ಸದ್ಯ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ರೇಖಾ ಸ್ಪರ್ಧಿಸಲು ತಯಾರಿ ನಡೆಸಿದ್ದಳು. ಆದರೆ ಇದರ ನಡುವೆ ಕದಿರೇಶ್ ಸಹೋದರಿ ಮಾಲ ತನ್ನ ಪುತ್ರ ಅರುಣ್ ಪತ್ನಿ ಅಥವಾ ತನ್ನ ಮಗಳನ್ನು ಚುನಾವಣೆಗೆ ನಿಲ್ಲಿಸಲು ತಂತ್ರ ಹೆಣೆದಿದ್ದಳು. ಆದರೆ ಏರಿಯಾದಲ್ಲಿ ಹೆಚ್ಚು ಸಮಾಜ ಸೇವೆಯಲ್ಲಿ ತೊಡಗಿದ್ದ ರೇಖಾ ಮೀರಿ ಚುನಾವಣೆಗೆ ನಿಲ್ಲೋದು ಕಷ್ಟದ ಮಾತಾಗಿತ್ತು. ಹಾಗಾಗಿ ರೇಖಾ ಜೊತೆಗೇ ಇದ್ದ ಪೀಟರ್ ಬಳಸಿ ರೇಖಾ ಕಥೆಯನ್ನೇ ಮುಗಿಸೋ ಪ್ಲ್ಯಾನ್ ಮಾಡಿಕೊಂಡಿದ್ರು. ಅದರಂತೆ ಕದಿರೇಶ್ ಜೊತೆಗೆ 20 ವರ್ಷದಿಂದ ಬಲಗೈ ಬಂಟನಂತಿದ್ದ ಪೀಟರ್ ಛೂ ಬಿಟ್ಟು ಕಥೆ ಮುಗಿಸಿದ್ದಾಳೆ.

ಮಾಲಾ ಮಸಲತ್ತಿನ ಬಗ್ಗೆ ಮುಂದುವರಿದ ವಿಚಾರಣೆ ಇನ್ನು ಕಳೆದ ಎರಡು ದಿನಗಳಿಂದ ಮಾಲಾ ಹಾಗೂ ಪುತ್ರ ಅರುಳ್ನನ್ನು ವಿಚಾರಣೆ ನಡೆಸ್ತಿದ್ದ ಪೊಲೀಸರು ಪಕ್ಕಾ ಮಾಹಿತಿ ಸಂಗ್ರಹಿಸಿ ಅರೆಸ್ಟ್ ಮಾಡಿದ್ದಾರೆ. ಇದೀಗ ತಮ್ಮ ಕಸ್ಟಡಿಯಲ್ಲಿರೋ ತಾಯಿ ಮಗನಿಗೆ ಪೊಲೀಸರು ಫುಲ್ ಗ್ರಿಲ್ ಮಾಡ್ತಿದ್ದಾರೆ. ರೇಖಾ ಹತ್ಯೆಗೆ ಕೇವಲ ರಾಜಕೀಯ ಕಾರಣನಾ? ಅಥವಾ ಬೇರೇನಾದ್ರೂ ಕಾರಣಗಳಿವೆಯಾ ಅಂತಾ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ರೇಖಾ ಕೊಲೆ ಕೇಸ್ ಸಂಬಂಧ ಮೊದಲು ಪೀಟರ್, ಸೂರ್ಯನನ್ನ ಶೂಟೌಟ್ ಮಾಡಿ ಬಂಧಿಸಿದ್ದ ಪೊಲೀರು, ನಂತರ ಕೊಲೆಗೆ ಸಹಾಯ ಮಾಡಿದ್ದ ಸ್ಟೀಫನ್, ಅಜಯ್, ಪುರುಷೋತ್ತಮ್ ಹೆಡೆಮುರಿ ಕಟ್ಟಿದ್ರು. ನಂತರ ಮಾಲಾ ಅರುಳ್ ನಿರಂತರ ವಿಚಾರಣೆ ಬಳಿಕ ಕೊಲೆಗೆ ಸ್ಕೆಚ್ ಹಾಕಿ ಕಥೆ ಮುಗಿಸಿದ್ದು ಬಯಲಾಗಿದ್ದು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಏನೇ ಆಗಲಿ ಕೇವಲ ರಾಜಕೀಯ ದ್ವೇಷಕ್ಕಾಗಿ ಸಂಬಂಧಿಯನ್ನೇ ಮುಗಿಸಿದ ಈ ಕಿರಾತಕರ ಮಸಲತ್ತನ್ನ ಖಾಕಿ ಬಟಾಬಯಲು ಮಾಡಿದೆ.

ಇದನ್ನೂ ಓದಿ: ಪುಲ್ವಾಮಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ, ಪುತ್ರಿಯನ್ನೂ ಕೊಂದ ಉಗ್ರರು; ಮನೆಗೇ ನುಗ್ಗಿ ಗುಂಡಿನ ದಾಳಿ

Published On - 8:01 am, Mon, 28 June 21