ಹೊಸ ವರ್ಷದ​ ಸೆಲೆಬ್ರೇಷನ್​ ವೇಳೆ ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪುಂಡರು

| Updated By: ಆಯೇಷಾ ಬಾನು

Updated on: Jan 01, 2024 | 2:27 PM

ಗಡಿಜಿಲ್ಲೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ರಾಯಣ್ಣ ವೃತ್ತದ ಬಳಿ ಕಿಡಿಗೇಡಿಗಳು ರಾತ್ರೋರಾತ್ರಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ದರ್ಪ ಮೆರೆದಿದ್ದಾರೆ. ಪುಂಡರ ಈ ಕೃತ್ಯಕ್ಕೆ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಹೋರಾಟಗಾರರು ಮನವಿ ಮಾಡಿದ್ದಾರೆ.

ಬೆಳಗಾವಿ, ಜ.01: ಹೊಸ ವರ್ಷದ (New Year) ಸಂದರ್ಭದಲ್ಲೇ ಗಡಿಜಿಲ್ಲೆ ಬೆಳಗಾವಿಯಲ್ಲಿ ಕಿಡಿಗೇಡಿಗಳು ಪುಂಡಾಟ ಮೆರೆದಿದ್ದಾರೆ. ರಾತ್ರೋರಾತ್ರಿ ಕನ್ನಡ ಬಾವುಟಕ್ಕೆ (Kannada Flag) ಬೆಂಕಿ ಹಚ್ಚಿ ದರ್ಪ ಮೆರೆದಿದ್ದಾರೆ. ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ರಾಯಣ್ಣ ವೃತ್ತದ ಬಳಿ ಕಟ್ಟಿದ್ದ ನಾಡಧ್ವಜಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪುಂಡರ ಈ ಕೃತ್ಯಕ್ಕೆ ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಹೋರಾಟಗಾರರು ಮನವಿ ಮಾಡಿದ್ದಾರೆ.

ಸದ್ಯ ಪೊಲೀಸರು ಸುಟ್ಟ ಬಾವುಟ ಬದಲಿಸಿ ಹೊಸದಾದ ಬಾವುಟ ತಂದು ಹಾಕಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕನ್ನಡಪರ ಹೋರಾಟಗಾರರು ಜಮಾಯಿಸಿದ್ದು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾರೆ. ಸ್ಥಳಕ್ಕೆ ಕಾಕತಿ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿ ಕೂಡ ಆಗಮಿಸಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಯಾವುದೇ ಭಾವನೆಗೂ ಧಕ್ಕೆ ಬರದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು

ಈ ಘಟನೆ ಸಂಬಂಧ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಯಾವುದೇ ಭಾವನೆಗೂ ಧಕ್ಕೆ ಬರದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಎಲ್ಲರೂ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ಸರ್ಕಾರ ಹಾಗೂ ಸ್ವಂ‌ಪ್ರೇರಣೆಯಿಂದ ಮಾಲೀಕರು ಕ್ರಮ ಕೈಗೊಳ್ಳಬೇಕು ಎಂದರು.

ಇನ್ನು ಎರಡು ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಲಸಿಯಲ್ಲಿ ಕನ್ನಡ ಬಾವುಟ ಸುಟ್ಟು ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸಗಣಿ ಮೆತ್ತಿದ್ದ ಘಟನೆ ನಡೆದಿತ್ತು.

ನ್ಯೂ ಇಯರ್ ಸೆಲೆಬ್ರೆಷನ್ ವೇಳೆ ಕಿಕ್​ನಲ್ಲಿ ಕಿರಿಕ್

ಬೆಂಗಳೂರಿನಲ್ಲಿ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಕಾಲೇಜ್ ಬಳಿ ಯುವಕರ ಮಧ್ಯೆ ನಡೆದ ಮಾರಾಮಾರಿ ವೇಳೆ ಕೇರಳದ ಹಿರಿಯ ಪೊಲೀಸ್ ಅಧಿಕಾರಿ ಪುತ್ರನ ಮೇಲೆ ಹಲ್ಲೆ ನಡೆಸಲಾಗಿದೆ. ಪಾರ್ಟಿಗೆಂದು ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಕೇರಳದ ಕೊಯಿಕ್ಕೋಡ್ ಎಸ್​ಪಿ ಎ.ಜೆ ಬಾಬು ಪುತ್ರ ಸ್ಟಾಲಿನ್ ಮೇಲೆ ಹಲ್ಲೆ ಮಾಡಲಾಗಿದೆ. ಪಬ್​ನಿಂದ ಹೊರ ಬಂದಾಗ ಯುವತಿಗೆ ಕೈ ಟಚ್ ಆಯ್ತು ಅಂತ ಇಬ್ಬರು ಯುವಕರ ಜತೆಗೆ ಸ್ಟಾಲಿನ್​ ಗೆಳೆಯರು ಜಗಳ ತೆಗೆದಿದ್ದಾರೆ. ಏನಾಯ್ತು ಅಂತ ನೋಡುವಷ್ಟರಲ್ಲಿ ಸ್ಟಾಲಿನ್ ಮೇಲೂ ಅಟ್ಯಾಕ್ ಮಾಡಿ ಹಲ್ಲು ಮುರಿಯುವ ಹಾಗೆ ಹೊಡೆದಿದ್ದಾರೆ. ಪೊಲೀಸರು ಎದುರಿಗೇ ಇದ್ರು ಯುವಕರು ಕಿತ್ತಾಡಿಕೊಂಡಿದ್ದಾರೆ. ಟಿವಿ9 ಕ್ಯಾಮಾರದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ಫೋಟೋಶೂಟ್​​ಗೆ ಹೋಗಬೇಡ ಎಂದಿದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

ಪತಿ ಎದುರೇ ಪತ್ನಿಗೆ ಡ್ರಾಪ್ ಕೊಡ್ಲಾ ಎಂದ ಪುಂಡ

ಬೆಂಗಳೂರಿನ ಹಲವು ಕಡೆ ಕಿರಿಕ್​ಗಳು ನಡೆದಿವೆ. ಪುಂಡನೊಬ್ಬ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ ತಗ್ಲಾಕೊಂಡಿದ್ದ. ಮಹಿಳೆ ಹಿಂಬಾಲಿಸಿಕೊಂಡು ಡ್ರಾಪ್ ಕೊಡ್ಲಾ ಅಂತ ಕಾಡಿಸಿದ್ದಾನೆ. ರೊಚ್ಚಿಗೆದ್ದ ಪತಿ ಯುವಕನನ್ನು ಥಳಿಸಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿ ಜಗಳ ಬಿಡಿಸಿದ್ದಾರೆ.

ಚರ್ಚ್ ಸ್ಟ್ರೀಟ್​​ನಲ್ಲಿ ಯುವತಿಯೊಂದಿಗೆ ಕೆಲವರು ಅಸಭ್ಯವಾಗಿ ವರ್ತಿಸಿದ್ದಾರೆ. ನೊಂದ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಯುವಕನ ಕೆನ್ನೆಗೆ ಬಾರಿಸಿ ಕಳುಹಿಸಿದ್ದಾರೆ. ಚರ್ಚ್​ಸ್ಟ್ರೀಟ್​ನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಿಸಿದ್ರು. ಕೋರಮಂಗಲದ ಪಬ್​ನಲ್ಲಿ ಕನ್ನಡ ಹಾಡು ಹಾಕಿಲ್ಲವೆಂದು ಕೆಲವರು ಗಲಾಟೆ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:17 am, Mon, 1 January 24