
ಬೆಳಗಾವಿ, ಏ.6: ಬಡತನ ಎಂಬುದನ್ನು ಸಾಧನೆಗೆ ತೊಂದರೆಯನ್ನು ಉಂಟು ಮಾಡುವುದಿಲ್ಲ. ಇದೀಗ ಇಲ್ಲೊಂದು ಶಿಕ್ಷಕರ ಸಾಧನೆಗೆ ದೊಡ್ಡ ಮಟ್ಟದ ಪ್ರಶಸ್ತಿ ಲಭಿಸಿದೆ. ಅವರ ಸಾಧನೆ ಇದೀಗ ಬೆಳಗಾವಿಯ ಯುವಕರಲ್ಲಿ ಒಳ್ಳೆಯ ಕನಸುಗಳನ್ನು ಮೂಡಿಸಿದೆ. ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿಯೇ ಇರಬೇಕು ಎಂಬ ಸರಳ ಮಂತ್ರವನ್ನು ನಂಬಿರುವ ರಾಜಶೇಖರ್ ರಗಟಿ (43) ಅವರು ಇಂದು ಕರ್ನಾಟಕದ ಮನೆಮಾತಾಗಿದ್ದಾರೆ. 2025-26ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸ್ವೀಕರಿಸಿರುವ ಇವರ ಯಶೋಗಾಥೆಯ ಹಿಂದೆ ಹಸಿವು, ಕಷ್ಟ ಮತ್ತು ಬದ್ಧತೆಯ ದೊಡ್ಡ ಕಥೆಯನ್ನೇ ಜೋಡಿಸಿದ್ದಾರೆ.
1981ರಲ್ಲಿ ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ ಜನಿಸಿದ ರಾಜಶೇಖರ್ ಅವರ ಆರಂಭಿಕ ಜೀವನ ಸುಲಭವಾಗಿರಲಿಲ್ಲ. ವಿಜ್ಞಾನ ಕಾಲೇಜು ಬಿಟ್ಟ ನಂತರ ಸುಮಾರು ಮೂರು ವರ್ಷಗಳ ಕಾಲ ಅವರು ಬದುಕಿಗಾಗಿ ಹರಸಾಹಸ ಪಟ್ಟಿದ್ದರು. ಹೋಟೆಲ್ ಕಾರ್ಮಿಕನಾಗಿ, ಮೆಡಿಕಲ್ ಶಾಪ್ ಸಹಾಯಕನಾಗಿ ಕೆಲಸ ಮಾಡಿದ್ದರು. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ಗಳ ಮೇಲೆ ಪತ್ರಿಕೆಗಳನ್ನು ಹೊದ್ದುಕೊಂಡು ಚಳಿಯಲ್ಲಿ ಮಲಗಿದ ದಿನಗಳನ್ನೂ ಅವರು ನೆನಪಿಸಿಕೊಂಡಿದ್ದಾರೆ.
ತಂದೆಯ ಪ್ರೇರಣೆಯಿಂದ ಮತ್ತೆ ಶಿಕ್ಷಣ ಆರಂಭಿಸಿದ ಅವರು, ಪಿಯುಸಿಯಲ್ಲಿ ಶೇ. 56 ಹಾಗೂ ಬಿಎ ಪದವಿಯಲ್ಲಿ ಶೇ. 70 ಅಂಕ ಗಳಿಸಿ ಸಾಧನೆಯ ಹಾದಿ ಹಿಡಿದರು. ಕೆಎಎಸ್ (KAS), ಪಿಎಸ್ಐ (PSI), ಎಫ್ಡಿಎ (FDA) ಪರೀಕ್ಷೆಗಳಲ್ಲಿ ಅಲ್ಪ ಅಂಕಗಳ ಅಂತರದಿಂದ ಸೋತರೂ ಧೃತಿಗೆಡದ ಅವರು, ಆ ಸೋಲನ್ನೇ ಪಾಠವಾಗಿ ಬಳಸಿಕೊಂಡರು. “ನಾನು ಅನೇಕ ಬಾರಿ ಸೋತಿದ್ದೇನೆ, ಅದಕ್ಕೇ ನನ್ನ ವಿದ್ಯಾರ್ಥಿಗಳಿಗೆ ಗುರಿ ತಲುಪುವುದು ಹೇಗೆ ಎಂದು ಕಲಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಿಲೋಮೀಟರ್ಗೆ ಕೇವಲ 50 ಪೈಸೆ ಖರ್ಚು! ಎಲ್ಪಿಜಿ ಬೆಲೆ ಏರಿಕೆ ನಡುವೆ ಗಮನ ಸೆಳೆಯುತ್ತಿದೆ ಎಲೆಕ್ಟ್ರಿಕ್ ಆಟೋಗಳ ಮ್ಯಾಜಿಕ್
2010ರಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ರಾಜಶೇಖರ್, ಬೆಳಗಾವಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ‘ಸಮಾಜ ವಿಜ್ಞಾನ ಪ್ರಯೋಗಾಲಯ’ ಸ್ಥಾಪಿಸಿದ ಕೀರ್ತಿ ಹೊಂದಿದ್ದಾರೆ. ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಡಿಜಿಟಲ್ ಉಪಕರಣಗಳು, ನಕ್ಷೆಗಳು ಮತ್ತು ಮಾದರಿಗಳನ್ನು ಒಳಗೊಂಡ ಈ ಲ್ಯಾಬ್ ಗ್ರಾಮೀಣ ಮಕ್ಕಳಿಗೆ ವರದಾನವಾಗಿದೆ. ಅವರ ಶಾಲೆಯ ಸಮಾಜ ವಿಜ್ಞಾನ ಫಲಿತಾಂಶ ಸತತವಾಗಿ ಶೇ. 100 ರಷ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:15 am, Mon, 6 April 26