Marathi: ದಿಢೀರನೆ ಮರಾಠಿ ಪ್ರೇಮಕ್ಕೆ ಗಂಟುಬಿದ್ದ ರಮೇಶ್ ಜಾರಕಿಹೊಳಿ ಹೇಳಿದ್ದೇನು! ಏನಿದರ ರಾಜಕೀಯ ಒಳಸುಳಿ?

| Updated By: ಸಾಧು ಶ್ರೀನಾಥ್​

Updated on: Mar 06, 2023 | 11:49 AM

Ramesh Jarkiholi: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮರಾಠಿ ಮತದಾರರಿದ್ದು ಅವರ ಓಲೈಕೆಗೆ ಹೆಬ್ಬಾಳ್ಕರ್ ಮತ್ತು ರಮೇಶ್ ನಿಂತಿರುವುದು ಸ್ಪಷ್ಟ. ಇಷ್ಟೆಲ್ಲಾ ಸರ್ಕಸ್ ಮಾಡ್ತಿರುವ ನಾಯಕರಿಗೆ ಮತದಾರರು ಯಾವ ರೀತಿ ತೀರ್ಪು ಬರೆಯುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

Marathi: ದಿಢೀರನೆ ಮರಾಠಿ ಪ್ರೇಮಕ್ಕೆ ಗಂಟುಬಿದ್ದ ರಮೇಶ್ ಜಾರಕಿಹೊಳಿ ಹೇಳಿದ್ದೇನು! ಏನಿದರ ರಾಜಕೀಯ ಒಳಸುಳಿ?
ದಿಢೀರನೆ ಮರಾಠಿ ಪ್ರೇಮಕ್ಕೆ ಗಂಟುಬಿದ್ದ ರಮೇಶ್ ಜಾರಕಿಹೊಳಿ ಹೇಳಿದ್ದೇನು! ಏನಿದರ ರಾಜಕೀಯ ಒಳಸುಳಿ?
Follow us on

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸೋಲಿಸಲು ಪಣ ತೊಟ್ಟಿರುವ ರಮೇಶ್ ಜಾರಕಿಹೊಳಿ (Ramesh Jarkiholi) ಎರಡು ತಿಂಗಳಿಂದ ಸ್ವಕ್ಷೇತ್ರಕ್ಕಿಂತ ಗ್ರಾಮೀಣ ಕ್ಷೇತ್ರದಲ್ಲಿ (Belagavi Rural constituency) ರೌಂಡ್ಸ್ ಮಾಡ್ತಿದ್ದಾರೆ. ಚುನಾವಣಾ ಪ್ರಚಾರದ ಜತೆಗೆ ರಮೇಶ್ ಮರಾಠಿ ಜಪ ಕೂಡ ಮಾಡ್ತಿದ್ದಾರೆ. ಈ ವರೆಗೂ ಹೆಬ್ಬಾಳ್ಕರ್ ಸೋಲಿಸುವುದೇ ನನ್ನ ಗುರಿ ಅಂತಿದ್ದ ಸಾಹುಕಾರ್ ಇದೀಗ ಮರಾಠಿ ಮನುಷ್ಯರನ್ನೇ ಶಾಸಕರನ್ನಾಗಿ ಆಯ್ಕೆ ಮಾಡಿ ಅಂತಾ ಹೇಳುವ ಮೂಲಕ ಮರಾಠಿಗರ (Marathi) ಜಪ ಮಾಡ್ತಿದ್ದಾರೆ. ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಹೆಬ್ಬಾಳ್ಕರ್ ಸೋಲಿಸುವ ಭರದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಡ್ತಿರೋದಾದ್ರೂ ಎನೂ ಅಂತೀರಾ ಈ ಸ್ಟೋರಿ ನೋಡಿ… ಜಿದ್ದು, ಸೇಡು, ವೈಯಕ್ತಿಕ ಪ್ರತಿಷ್ಠೆ, ಸೋಲು ಗೆಲುವಿನ ಲೆಕ್ಕಾಚಾರ, ರಾಜಕೀಯ ದ್ವೇಷ ಇದೆಲ್ಲವೂ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸರಿ ಹೊಂದುವ ಶಬ್ಧಗಳಾಗಿವೆ. ಹೌದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಖಾಡದಲ್ಲಿ ಕೇಳಿ ಬರುತ್ತಿರುವ ಕಂಡು ಬರುತ್ತಿರುವ ದೃಶ್ಯಗಳು. ಒಂದು ಕಡೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಂದು ಕಡೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಬದ್ದ ವೈರಿಗಳಾಗಿರುವುದು ಅಷ್ಟೇ ಅಲ್ಲದೇ ವೈಯಕ್ತಿಕವಾಗಿಯೂ ವಾಗ್ದಾಳಿ ನಡೆಸಿದ್ದಾರೆ (Karnataka Assembly Elections 2023).

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಗೆಲ್ಲಬೇಕು ಅಂದುಕೊಂಡು ಅತೀ ಹೆಚ್ಚು ಮತದಾರರಿರುವ ಮರಾಠಿಗರನ್ನ ಸೆಳೆಯಲು ಲಕ್ಷ್ಮೀ ಹೆಬ್ಬಾಳ್ಕರ್ ಶಿವಾಜಿ ಪ್ರತಿಮೆ ಉದ್ಘಾಟನೆ ಮತ್ತು ಮರಾಠಿಯಲ್ಲಿ ಕಾರ್ಯಕ್ರಮ ಮಾಡುವುದರ ಮೂಲಕ ಮರಾಠಿಗರನ್ನ ಸೆಳೆಯುವ ಕೆಲಸ ಮಾಡ್ತಿದ್ದಾರೆ. ಆದ್ರೇ ಅದಕ್ಕೂ ಒಂದು ಹೆಜ್ಜೆ ಮುಂದಿಟ್ಟಿರುವ ರಮೇಶ್ ಜಾರಕಿಹೊಳಿ ಮರಾಠಿಗರೇ ಗೆಲ್ಲಬೇಕು ಅಂದಿದ್ದಾರೆ. ಹೌದು ರಮೇಶ್ ಜಾರಕಿಹೊಳಿ ಅವರ ಈ ಒಂದು ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೀಜಗರ್ಣಿ ಗ್ರಾಮದಲ್ಲಿ ನಿನ್ನೆ ಭಾನುವಾರ ರಮೇಶ್ ಬೆಂಬಲಿಗರು, ಅಭಿಮಾನಿಗಳು ಆಯೋಜಿಸಿದ್ದ ಜನಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ‌ ರಮೇಶ್ ಅವರು ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ಕರೆ ಕೊಟ್ಟರು. ಕನ್ನಡ ಬಿಟ್ಟು ಮರಾಠಿಯಲ್ಲಿ ಭಾಷಣ ಆರಂಭಿಸಿದ ರಮೇಶ್, ಮರಾಠಿ ಬರಲ್ಲಾ ಅಂತಾ ಹೇಳ್ತಾ… ಹಿಂದಿಯಲ್ಲಿ ಭಾಷಣ ಮಾಡಿ ಮರಾಠಿ ಭಾಷಿಕರನ್ನ ಸೆಳೆಯುವ ಕೆಲಸ ಮಾಡಿದರು! ಈ ವರೆಗೂ ಹೆಬ್ಬಾಳ್ಕರ್ ಸೋಲಿಸಬೇಕು, ಬಿಜೆಪಿ ಅಭ್ಯರ್ಥಿ ಯಾರೇ ಆದ್ರೂ ಗೆಲ್ಲಿಸಿ ಅಂತಾ ಭಾಷಣ ಮಾಡ್ತಿದ್ದ ರಮೇಶ್ ಇಂದು ಮೊದಲ ಬಾರಿಗೆ ಗ್ರಾಮೀಣ ಕ್ಷೇತ್ರದಲ್ಲಿ 2023ರಲ್ಲಿ ಮರಾಠಿ ಮನುಷ್ಯನನ್ನ ಶಾಸಕರಾಗಿ ಆಯ್ಕೆ ಮಾಡಿ ಅಂತಾ ಹೇಳುವ ಮೂಲಕ ಮರಾಠಿ ಮೇಲೆ ಎಷ್ಟು ಪ್ರೇಮ ಇದೆ ಅನ್ನೋದನ್ನ ಸಾಬೀತು ಪಡಿಸಿದ್ದಾರೆ.

ಇನ್ನು ಚುನಾವಣೆ ಬಂದಾಗ ಯಾವುದೇ ಪಕ್ಷದವರು ಇರಲಿ ಮರಾಠಿಗರ ಓಲೈಕೆ ಮಾಡುವುದು ಸಹಜ. ಆದ್ರೇ ನಾಡದ್ರೋಹಿ ಎಂಇಎಸ್ ಮಾತ್ರ ಮರಾಠಿಗರೇ ಗೆಲ್ಲಬೇಕು, ಅಧಿಕಾರ ಹಿಡಿಯಬೇಕು ಅನ್ನೋ ಮನಸ್ಥಿತಿಯಲ್ಲಿದ್ರೂ ಅವರನ್ನ ಇದೀಗ ಕನ್ನಡಿಗರು ಮನೆಗೆ ಕಳುಹಿಸುವ ಕೆಲಸ ಮಾಡಿದ್ದಾರೆ. ಆದ್ರೇ ಇಂದು ರಮೇಶ್ ಜಾರಕಿಹೊಳಿ ಮರಾಠಿ ವ್ಯಕ್ತಿ ಶಾಸಕರಾಗಿ ಗ್ರಾಮೀಣ ಕ್ಷೇತ್ರದಲ್ಲಿ ಆಯ್ಕೆಯಾಗಬೇಕು ಅಂದಿರುವುದು ಮರಾಠಿ ಪ್ರೇಮದ ಮೇಲೆಯಾ ಅಥವಾ ಹೆಬ್ಬಾಳ್ಕರ್ ಸೋಲಿಸಬೇಕೆಂಬ ಭರದಲ್ಲಿ ಈ ರೀತಿ ಹೇಳಿಕೆ ಕೊಟ್ಟಿದ್ದಾರಾ ಅನ್ನೋದನ್ನ ಅವರೇ ಸ್ಪಷ್ಟಪಡಿಸಬೇಕು.

ಇನ್ನು ಕಾರ್ಯಕ್ರಮದಲ್ಲಿ ಮತ್ತೆ ಹೆಬ್ಬಾಳ್ಕರ್ ವಿರುದ್ಧ ಗುಡುಗಿದ ಸಾಹುಕಾರ್ ‌ಬಿಜಗರ್ಣಿ ಅಲ್ಲ ಪಶ್ಚಿಮ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತೇನೆ. ನಾನು ಹಿಂದೆ ನೀರಾವರಿ ಸಚಿವನಾಗಿದ್ದ ವೇಳೆ ಸಭೆ ಮಾಡಿದೆ. ಮುಂಬೈನಲ್ಲಿ ಸಭೆ ಮಾಡಿ ತಿಲ್ಲಾರಿ ಡ್ಯಾಂ ನಿಂದ ನೀರು ತರಲು ಸಿದ್ದತೆ ಮಾಡಿದ್ದೇವೆ. ಚುನಾವಣೆ ಮುಗಿದ ಬಳಿಕ ಮೊದಲ ಕೆಲಸವೇ ನೀರಾವರಿ ಯೋಜನೆ ತರುವುದು. ಕಣ್ಣೀರು ಹಾಕಿ ಮನೆಗಳು ಎಂದು ನಾಟಕ ಆಡುತ್ತಾರೆ ಈಗಿನ ಗ್ರಾಮೀಣ ಶಾಸಕರು. ಭಾರತದಲ್ಲಿ ಮಹಿಳೆಯರಿಗೆ ಬಹಳ ಗೌರವ ಇದೆ.
2023ರ ಚುನಾವಣೆಗೆ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ನಾಗೇಶ ಮನ್ನೋಳ್ಕರ್ ಸೇರಿ ಅನೇಕರು ಆಕಾಂಕ್ಷಿಗಳು ಇದ್ದಾರೆ‌.

ಜಾತಿ ಜಾತಿ ನಡುವೆ ಜಗಳ ಹಚ್ಚುವ ಕೆಲಸ ಮಾಡೋದು ಕಾಂಗ್ರೆಸ್. ನಾಗೇಶ ಮನ್ನೊಳ್ಕರ್ ಗೆ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ‌ ಆದರೆ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ.‌ 2023ರಲ್ಲಿ ಮರಾಠಿ ಮನುಷ್ಯ ಶಾಸಕರಾಗಿ ಆಯ್ಕೆಯಾಗಬೇಕು. ಐದು ಸಲ ಶಾಸಕನಾದ್ರು ನನ್ನ ಮೇಲೆ ಇನ್ನೂ ಸಾಲ ಇದೆ.‌ ಅದೇ ಹೆಬ್ಬಾಳ್ಕರ್‌ ಐದು ವರ್ಷದಲ್ಲಿ ಹೇಗೆ ಬದಲಾವಣೆ ಆಗಿದ್ದಾರೆ ನೋಡಿ. ಹಣ ಮಾಡಲು ಹೆಬ್ಬಾಳ್ಕರ್ ಶಾಸಕರಾಗಿದ್ದಾರೆ. ನನ್ನ ತಪ್ಪಿನಿಂದ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಇದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಅಂತಾ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮರಾಠಿ ಮತದಾರರಿದ್ದು ಅವರ ಓಲೈಕೆಗೆ ಹೆಬ್ಬಾಳ್ಕರ್ ಮತ್ತು ರಮೇಶ್ ನಿಂತಿರುವುದು ಸ್ಪಷ್ಟ. ಆದ್ರೇ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಮರಾಠಿ ಪ್ರೇಮ ಮೆರೆಯುತ್ತಿರುವುದು ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗುತ್ತಿದೆ. ಇಷ್ಟೆಲ್ಲಾ ಸರ್ಕಸ್ ಮಾಡ್ತಿರುವ ನಾಯಕರಿಗೆ ಮತದಾರರು ಯಾವ ರೀತಿ ತೀರ್ಪು ಬರೆಯುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಸಹದೇವ ಮಾನೆ, ಟಿವಿ9, ಬೆಳಗಾವಿ