
ಬೆಳಗಾವಿ, ಸೆಪ್ಟೆಂಬರ್ 29: ಜಿಲ್ಲೆಯ ಹುಕ್ಕೇರಿ ಸಹಕಾರ ಸಂಘದ ಚುನಾವಣೆ ನಡೆದಿದ್ದು, ಸಚಿವ ಸತೀಶ್ ಜಾರಕಿಹೊಳಿ (Satish JarkiholI) ಮತ್ತು ಮಾಜಿ ಸಂಸದ ರಮೇಶ್ ಕತ್ತಿ (Ramesh Katti) ಬೆಂಬಲಿತ ಸದಸ್ಯರ ಮಧ್ಯೆ ನೇರಾನೇರ ಫೈಟ್ಗೆ ಕಾರಣವಾಗಿತ್ತು. ಕೊನೆಗೆ ರಮೇಶ ಕತ್ತಿ ಬಣ ಎಲ್ಲಾ 15 ಸ್ಥಾನ ಗೆದ್ದುಕೊಂಡರು. ಆ ಮೂಲಕ ಜಾರಕಿಹೊಳಿ ಸಹೋದರರಿಗೆ ಮುಖಭಂಗವಾಗಿದೆ. ಇನ್ನು ಗೆಲುವಿನ ಸಂಭ್ರಮದಲ್ಲಿ ರಮೇಶ್ ಕತ್ತಿ ಬೆಂಬಲಿಗರಿಂದ ಸತೀಶ್ ಜಾರಕಿಹೊಳಿ ಬೆಂಬಗಲಿಗರಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಹುಚ್ಚಾಟ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಗೆಲುವಿನ ಕೇಕೆ ಹಾಕಿದ್ದಾರೆ. ರಮೇಶ ಕತ್ತಿ ಬಣ ಎಲ್ಲಾ 15 ಸ್ಥಾನ ಗೆದ್ದುಕೊಂಡಿದೆ. ಜಾರಕಿಹೊಳಿ ಸಹೋದರರಿಗೆ ರಮೇಶ ಕತ್ತಿ ಮತ್ತು ಎ.ಬಿ.ಪಾಟೀಲ ಜೋಡಿ ಭರ್ಜರಿ ಏಟು ಕೊಟ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಪರಸ್ಪರ ಮಾತಿನ ಸಮರವೂ ಏರ್ಪಟ್ಟಿತ್ತು.
ಇದನ್ನೂ ಓದಿ: ಹೊಸ ಹೆಲಿಕಾಪ್ಟರ್ ಖರೀದಿಸಿದ ಸತೀಶ್ ಜಾರಕಿಹೊಳಿ: ಕುತೂಹಲಕ್ಕೆ ಕಾರಣವಾಯ್ತು ಸಚಿವರ ನಡೆ
ಬಾಪೂಜಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಬಳಿಕ ಕತ್ತಿ ಸಪೋಟರ್ಸ್ ಸಂಭ್ರಮಾಚರಿಸಿದರು. ಆದರೆ ಈ ವೇಳೆ ಸತೀಶ್ ಜಾರಕಿಹೊಳಿ ಬೆಂಬಗಲಿಗರಿದ್ದ ಕಾರಿಗೆ ಕೈಯಿಂದ ಗುದ್ದಿದ್ದು, ಬಳಿಕ ಕಲ್ಲು ತೂರಿದ್ದಾರೆ. ಪೊಲೀಸರು ಕೂಡಲೇ ಎಲ್ಲರನ್ನೂ ಚದುರಿಸಿದ್ದಾರೆ.
ಎಂಎಲ್ಎಗಳಾದ ರಮೇಶ್, ಬಾಲಚಂದ್ರ ಮತ್ತು ಎಂಎಲ್ಸಿ ಲಖನ್ ಸಚಿವ ಸತೀಶ್ಗೆ ಸಾಥ್ ಕೊಟ್ಟರೂ ಗೆಲುವಿನ ದಡ ಸೇರುವಲ್ಲಿ ಸೈಲೆಂಟ್ ಸಾಹುಕಾರ್ಗೆ ಸಾಧ್ಯವಾಗಿಲ್ಲ. ಸತೀಶ್ ಪ್ಯಾನೆಲ್ ಒಂದೂ ಸ್ಥಾನ ಗೆಲ್ಲಲಾಗಿಲ್ಲ.
ಸ್ವಾಭಿಮಾನಕ್ಕೆ ಮತ ನೀಡಿ ಅಂತಾ ಭಾವನಾತ್ಮಕ ಕಾರ್ಡ್ ಪ್ಲೇ ಮಾಡಿದ್ದ ಕತ್ತಿಯ ಕೈಹಿಡಿದಿದ್ದಾರೆ ಹುಕ್ಕೇರಿ ಮತದಾರರು. ಜಾರಕಿಹೊಳಿ ಬ್ರದರ್ಸ್ ಹಣಿಯಲು ಕಾಂಗ್ರೆಸ್ನ ಮಾಜಿ ಶಾಸಕ ಎ.ಬಿ ಪಾಟೀಲ್, ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ, ಬಿಜೆಪಿ ಮುಖಂಡ ಬಸವರಾಜ ಹುಂದ್ರಿ ಒಟ್ಟಾಗಿದ್ದರು. ಇದರಿಂದ ಕತ್ತಿ ಪ್ಯಾನಲ್ ಗೆದ್ದು ಬೀಗಿದೆ.
ಹುಕ್ಕೇರಿ ಪಟ್ಟಣದಲ್ಲಿ ಟಿವಿ9ಗೆ ಮಾಜಿ ಸಂಸದ ರಮೇಶ್ ಕತ್ತಿ ಹೇಳಿಕೆ ನೀಡಿದ್ದು, ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ ಡ್ರಗ್ಸ್ ಮಾಫಿಯಾ ಇದೆ. ಗೋಕಾಕ್ನಲ್ಲಿ ಹಫ್ತಾ ವಸೂಲಿ ಮಾಡಲಾಗುತ್ತಿದೆ ಎಂದು ಜಾರಕಿಹೊಳಿ ಬ್ರದರ್ಸ್ ವಿರುದ್ಧ ರಮೇಶ್ ಕತ್ತಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಕತ್ತಿಗೆ ಜಾರಕಿಹೊಳಿ ಟಾಂಗ್
ಗೋಕಾಕ್ ತಾಲೂಕಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ಅವರಿಗೆ ಗೋಕಾಕ್, ಮೂಡಲಗಿಯ ಯುವಕರ ಬಗ್ಗೆ ಗಮನ ಇಲ್ಲ. ಹಣದ ಬಗ್ಗೆ ಅವರ ಗಮನ ಇದೆ, ಹಫ್ತಾ ಬಗ್ಗೆ ಗಮನ ಇದೆ. ಎಲ್ಲವೂ ಮೀತಿಮೀರಿ ಹೋಗಿದೆ. ಜಮೀನು ತೆಗೆದುಕೊಳ್ಳುವ ಸ್ಥಿತಿ ಇಲ್ಲ. ಏನೇ ಮಾಡಬೇಕಾದ್ರೂ ಅವರ ಮುಖಾಂತರ ಮಾಡಬೇಕು. ವಿಷ ಕುಡಿಯಬೇಕು ಅಂದ್ರೂ ಅವರನ್ನ ಕೇಳಿ ಕುಡಿಯುವ ಸ್ಥಿತಿ ಇದೆ. ನಾವು, ಜನ ಸುಮ್ಮನೆ ಕುಳಿತುಕೊಂಡ್ರೇ ಆಗುವುದಿಲ್ಲ. ಗೂಂಡಾಗಿರಿ, ದಬ್ಬಾಳಿಕೆ, ಬೆದರಿಕೆ ಹಾಕಿ ಹೊಲ ಬರೆಸಿಕೊಳ್ಳುತ್ತಾರೆ. ಈ ವ್ಯವಸ್ಥೆಗೆ ತಡೆ ಒಡ್ಡಬೇಕು ಆ ನಿಟ್ಟಿನಲ್ಲಿ ನಾನು ಹೋರಾಡುವೆ. ನನ್ನನ್ನು ಹಣಿಯಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಮತದಾರ ದೇವರುಗಳು ಪ್ರಬುದ್ಧರಿದ್ದು ಕೈ ಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಿತ್ತೂರಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಸ್ಥಾನದ ಚುನಾವಣೆ
ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋದರ ಚೆನ್ನರಾಜ ಹಟ್ಟಿಹೊಳಿ ಗೆದ್ದು ಬೀಗಿದ್ದಾರೆ. ತಮ್ಮೆಲ್ಲ ಬೆಂಬಲಿಗರನ್ನ ಗೆಲ್ಲಿಸಿಕೊಳ್ಳುವ ಮೂಲಕ ಹಾಲಿ ಕೈ ಎಂಎಲ್ಸಿ ಚನ್ನರಾಜ ಸಕ್ಕರೆ ಕಾರ್ಖಾನೆ ಮೇಲೆ ತಮ್ಮ ಕುಟುಂಬದ ಹಿಡಿತ ಸಾಧಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ನಮ್ಮ ಮೇಲೆ ವಿಶ್ವಾಸವಿಟ್ಟು ಮತದಾರರು ನಮ್ಮವರನ್ನು ಗೆಲ್ಲಿಸಿದ್ದಾರೆ. ಸಾಕಷ್ಟು ಪೈಪೋಟಿಯಿಂದ ಚುನಾವಣೆ ನಡೆಯಿತು. ನಮಗೆ ಯಾರೂ ಕೂಡ ವಿರೋಧಿಗಳು ಇಲ್ಲ. ಮಲಪ್ರಭಾ ಸಕ್ಕರೆ ಕಾರ್ಖಾನೆ ಗತವೈಭವ ತರುವುದೇ ನಮ್ಮ ಗುರಿ. ನಾವು ಹೇಳಿದಂತೆ ಕೆಲಸ ಮಾಡಿ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.