ಬರಗಾಲದಿಂದ ತತ್ತರಿಸಿದ್ದ ಅನ್ನದಾತನಿಗೆ ಬೆಲೆ ಕುಸಿತದ ಶಾಕ್; ಸರ್ಕಾರದ ನೆರವಿಗೆ ಆಗ್ರಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 06, 2023 | 9:50 PM

ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯೂ ಆಗದೇ ಕೈಗೆ ಫಸಲು ಸಿಗದೇ ಕಂಗಾಲಾಗಿದ್ದಾನೆ. ಅದರಲ್ಲೂ ಮುಂಗಾರು ನಂಬಿ ಸೋಯಾಬಿನ್​ ಬೆಳೆದ ರೈತರಿಗೆ ಡಬಲ್​ ಶಾಕ್ ಆಗಿದೆ. ಮಳೆ ಕೊರತೆ ಹಿನ್ನೆಲೆ ಇಳುವರಿಯೂ ಕಡಿಮೆ ಆಗಿದ್ದು ಈಗ ಮಾರುಕಟ್ಟೆಯಲ್ಲಿ ಸೋಯಾಬಿನ್ ದರ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಬರಗಾಲದಿಂದ ತತ್ತರಿಸಿದ್ದ ಅನ್ನದಾತನಿಗೆ ಬೆಲೆ ಕುಸಿತದ ಶಾಕ್; ಸರ್ಕಾರದ ನೆರವಿಗೆ ಆಗ್ರಹ
ಬರಗಾಲದಿಂದ ಕಂಗೆಟ್ಟ ರೈತರು
Follow us on

ಬೆಳಗಾವಿ, ಅ.06: ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಬೆಳಗಾವಿ(Belagavi) ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ರೈತರು ಕಂಗಾಲಾಗಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆ ಅಪಾರ  ಬೆಳೆ ಹಾನಿಯಾಗಿದೆ. ಅದರಲ್ಲೂ ಮುಂಗಾರು ನಂಬಿ ಸಾಲ ಸೋಲ ಮಾಡಿ ಸೋಯಾಬಿನ್ ಬಿತ್ತನೆ ಮಾಡಿದ ರೈತರಿಗೆ ಡಬಲ್​ ಶಾಕ್ ಆಗಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಕೃಷಿಭೂಮಿಯಲ್ಲಿ ಸೋಯಾಬೀನ್(Soybean) ಬೆಳೆಯಲಾಗಿತ್ತು. ಆದ್ರೆ, ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆ ಇಳುವರಿ ಕುಂಠಿತವಾಗಿದೆ. ಒಂದು ಎಕರೆಗೆ ಒಂದು ಕ್ವಿಂಟಾಲ್​ನಷ್ಟು ಸೋಯಾಬಿನ್ ಇಳುವರಿ ಬಂದಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್​ಗೆ ಏಳು ಸಾವಿರ ರೂಪಾಯಿ ಇದ್ದ ಸೋಯಾಬಿನ್ ಈ ಬಾರಿ ನಾಲ್ಕು ನಾಲ್ಕೂವರೆ ಸಾವಿರ ರೂಪಾಯಿಗೆ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಸೋಯಾಬೀನ್​ ಕಾಳು ತೆಗೆದು ಉಳಿದ ಹೊಟ್ಟನ್ನು ದನಕರುಗಳಿಗೆ ಹಾಕಿ, ಉಳಿದ ಕಾಳು ಮಾರಿದರೂ ಕೈಗೆ ದರ ಸಿಗದ ಸ್ಥಿತಿಯಲ್ಲಿ ಇದೆ. ಹೌದು,ಇದೆ ಜಿಲ್ಲೆಯ ರಾಜು ಕೋಳಿ ಎಂಬ ರೈತನೊಬ್ಬ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಸುಮಾರು 20 ಸಾವಿರ ರೂ.ಗೂ ಹೆಚ್ಚು ಖರ್ಚು ಮಾಡಿ ಸೋಯಾಬಿನ್ ಬೆಳೆದಿದ್ದ. ಆದರೀಗ ಮಳೆ ಕೈಕೊಟ್ಟಿದ್ದು, ಕೇವಲ 50 ಕೆಜಿಯ 9 ಚೀಲದಷ್ಟು ಸೋಯಾಬಿನ್ ಬೆಳೆ ಬಂದಿದೆ. ‘ಕಳೆದ ವರ್ಷದ ದರ ಹೆಚ್ಚಿದ್ದರಿಂದ ಲಾಭವಾಗುತ್ತೆ ಎಂಬ ಆಸೆಯಲ್ಲಿ ಸೋಯಾಬಿನ್ ಬಿತ್ತನೆ ಮಾಡಿದ್ದೆ. ಆದ್ರೆ, ಮಳೆಯೂ ಕೈ ಕೊಟ್ಟಿದ್ದು, ದರವೂ ಕುಸಿದಿದೆ. ನಾವು ಖರ್ಚು ಮಾಡಿದಷ್ಟು ಹಣ ಬರಲ್ಲ. ಸರ್ಕಾರವಂತೂ ನಮ್ಮತ್ರ ನೋಡುತ್ತಲೇ ಇಲ್ಲ ಎಂದು ಅಸಮಾಧಾನ ಹೊರಹಗಾಕಿದ್ದಾರೆ.

ಇದನ್ನೂ ಓದಿ:ವಿಜಯಪುರ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಒಡೆದು ಜಮೀನಿಗೆ ನುಗ್ಗಿದ ನೀರು; ಅಪಾರ ಪ್ರಮಾಣದ ಬೆಳೆ ಹಾನಿ

ಸರ್ಕಾರದ ವಿರುದ್ಧ ರೈತ ಮುಖಂಡರ ಆಕ್ರೋಶ

ಇನ್ನು ತೀವ್ರ ಬರಗಾಲವಿದ್ದರೂ ರೈತರತ್ತ ಗಮನ ಹರಿಸದ ಸರ್ಕಾರದ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಡುವಲ್ಲಿ ಬ್ಯುಸಿ ಆಗಿದೆ. ಬರ ಪೀಡಿತ ತಾಲೂಕು ಘೋಷಣೆ ಮಾಡಿದ್ದಾರೆ, ಹೊರತು ಯಾವುದೇ ಬೆಳೆ ಹಾನಿ ಸಮೀಕ್ಷೆ ಮಾಡೋದಾಗಲಿ, ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗುತ್ತಿಲ್ಲ.

ದರ ಕುಸಿತ

ಮಳೆ ನೀರು ಇಲ್ಲದೇ ರೈತರು ಸಾಲ ಸೋಲ ಮಾಡಿ ಸೋಯಾಬೀನ್ ಬೆಳೆದರೆ ಇಳುವರಿ ಬಂದಿಲ್ಲ. ರಾಶಿ ಮಾಡಿ ಸೋಯಾಬಿನ್​ ಮಾರಲು ಮುಂದಾದ್ರೆ, ದರ ಕುಸಿತವಾಗಿದೆ. ಕಳೆದ ಬಾರಿ ಹತ್ತು ಸಾವಿರ ರೂಪಾಯಿಯಷ್ಟು ಪ್ರತಿ ಕ್ವಿಂಟಾಲ್ ಸೋಯಾಬಿನ್​ಗೆ ದರ ಇತ್ತು. ಈಗ ನಾಲ್ಕು ಸಾವಿರದಿಂದ ನಾಲ್ಕೂವರೆ ಸಾವಿರ ರೂಪಾಯಿಗೆ ಕುಸಿದಿದೆ. ಹೀಗಾಗಿ ಸರ್ಕಾರ ತಕ್ಷಣ ರೈತರಿಗೆ ಪರಿಹಾರ ನೀಡಬೇಕು. ಮುಂಗಾರು ಬೆಳೆಯಂತು ಹೋಯ್ತು, ಮುಂದೆ ಹಿಂಗಾರು ಬೆಳೆ ಬೆಳೆಯಬೇಕೆಂದರೂ ದುಡ್ಡಿಲ್ಲ. ಹೀಗಾಗಿ ಸರ್ಕಾರ ತಕ್ಷಣ ಪರಿಹಾರ ನೀಡುವ ಕೆಲಸಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:Karnataka Rains: ಈ ವರ್ಷ ಮಳೆಯಿಂದ 69 ಜನ ಸಾವು, 21,168 ಹೆಕ್ಟೇರ್​​ ಬೆಳೆ ಹಾನಿ; ಸಚಿವ ಕೃಷ್ಣ ಭೈರೇಗೌಡ

ಅದೇನೇ ಇರಲಿ ಜಗತ್ತಿಗೆ ಅನ್ನ ನೀಡುವ ಅನ್ನದಾತ ದಿನಕ್ಕೊಂದು ಸಂಕಷ್ಟ ಅನುಭವಿಸುತ್ತಿದ್ದರೂ ಸರ್ಕಾರ ಮಾತ್ರ ರೈತರತ್ತ ಕಣ್ತೆರೆದು ನೋಡುತ್ತಿಲ್ಲ. ಆದಷ್ಟು ಬೇಗ ಬೆಳೆಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ದರ ಕುಸಿತದಿಂದ ಕಂಗಾಲಾಗಿರುವ ಸೋಯಾಬೀನ್ ಬೆಳೆದ ರೈತರಿಗೆ ಬೆಂಬಲ ಬೆಲೆ ನೀಡಿ ನೆರವಿಗೆ ಧಾವಿಸಬೇಕು ಎಂಬುದು ಅನ್ನದಾತನ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ