TV9 Impact: ಬೆಳಗಾವಿಯ ಹಿಂಡಲಗಾ ಜೈಲಿನ ಅಕ್ರಮ ಬಯಲು, ಇಬ್ಬರು ಜೈಲಾಧಿಕಾರಿಗಳಿಗೆ ಎತ್ತಂಗಡಿ ಶಿಕ್ಷೆ

| Updated By: ಆಯೇಷಾ ಬಾನು

Updated on: Aug 16, 2023 | 12:28 PM

ಬೆಳಗಾವಿಯ ಹಿಂಡಲಗಾ ಜೈಲಿನ ಅಕ್ರಮ ಬಯಲು ಬೆನ್ನಲ್ಲೆ ಹತ್ತು ಹದಿನೈದು ವರ್ಷದಿಂದ ಜೈಲಿನಲ್ಲಿ ಬೀಡು ಬಿಟ್ಟು ಬೇಕಾ ಬಿಟ್ಟಿ ಆಟವಾಡ್ತಿದ್ದ ಅಧಿಕಾರಿಗಳಿಗೆ ವರ್ಗಾವಣೆ ಶಾಕ್ ಶುರುವಾಗಿದೆ. ಓರ್ವ ಜೈಲರ್, ಓರ್ವ ಸಹಾಯಕ ಅಧೀಕ್ಷಕರನ್ನ ವರ್ಗಾವಣೆ ಮಾಡಿ ಎಡಿಜಿ ಮಾಲಿನಿ ಆದೇಶ ಹೊರಡಿಸಿದ್ದಾರೆ.

TV9 Impact: ಬೆಳಗಾವಿಯ ಹಿಂಡಲಗಾ ಜೈಲಿನ ಅಕ್ರಮ ಬಯಲು, ಇಬ್ಬರು ಜೈಲಾಧಿಕಾರಿಗಳಿಗೆ ಎತ್ತಂಗಡಿ ಶಿಕ್ಷೆ
ಶಹಾಬುದ್ದೀನ್ ಕಾಲೇಖಾನ್, ಯಲ್ಲಪ್ಪ ನಾಯ್ಕ
Follow us on

ಬೆಳಗಾವಿ, ಆ.16: ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ(Belagavi Hindalga Central Jail) ನಡೆಯುತ್ತಿರುವ ಅಕ್ರಮಗಳ ಬಗ್ಗೆ ಈ ಹಿಂದೆ ಟಿವಿ9 ಕನ್ನಡ ವಾಹಿನಿ ಸುದ್ದಿ ಪ್ರಸಾರ ಮಾಡಿತ್ತು. ಹಿಂಡಲಗಾ ಜೈಲಿನಲ್ಲಿ ದುಡ್ಡು ಕೊಟ್ಟರೆ ಏನೆಲ್ಲ ನಡೆಯುತ್ತೆ. ಹಣ ಕೊಡುವ ಕೈದಿಗಳಿಗೆ ಏನೆಲ್ಲ ಸವಲತ್ತು ಸಿಗುತ್ತೆ. ದುಡ್ಡು ನೀಡಿದರೆ ಜೈಲು ಹೇಗೆ ಕೈದಿಗಳಿಗೆ ಐಷಾರಾಮಿ ಬಂಗಲೆಯಾಗುತ್ತೆ ಎಂಬ ಬಗ್ಗೆ ಟಿವಿ9 ಎಳೆ ಎಳೆಯಾಗಿ ಅಕ್ರಮ ಬಯಲು ಮಾಡಿತ್ತು. ಸದ್ಯ ಈಗ ಈ ಸುದ್ದಿ ಬೆನ್ನಲ್ಲೇ ಜೈಲಿನ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಕರ್ತವ್ಯ ನಿರ್ವಹಣೆ ವೇಳೆ ಬೇಜವಾಬ್ದಾರಿ ಹಿನ್ನೆಲೆ ಹೆಡ್ ವಾರ್ಡರ್ ಬಿ.ಎಲ್. ಮೇಳವಂಕಿ, ವಾರ್ಡರ್ ವಿ.ಟಿ ವಾಗಮೋರೆ ಅವರನ್ನು ಕಾರಾಗೃಹ ಉಪಮಹಾನಿರೀಕ್ಷಕ ಉತ್ತರ ವಯಲದ ಟಿ.ಪಿ ಶೇಷ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಈಗ ಮತ್ತೆ ಇದೇ ಜೈಲಿನ ಇಬ್ಬರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಹತ್ತು ಹದಿನೈದು ವರ್ಷದಿಂದ ಜೈಲಿನಲ್ಲಿ ಬೀಡು ಬಿಟ್ಟು ಬೇಕಾ ಬಿಟ್ಟಿ ಆಟವಾಡ್ತಿದ್ದ ಅಧಿಕಾರಿಗಳಿಗೆ ವರ್ಗಾವಣೆ ಶಾಕ್ ಶುರುವಾಗಿದೆ. ಓರ್ವ ಜೈಲರ್, ಓರ್ವ ಸಹಾಯಕ ಅಧೀಕ್ಷಕರನ್ನ ವರ್ಗಾವಣೆ ಮಾಡಿ ಎಡಿಜಿ ಮಾಲಿನಿ ಆದೇಶ ಹೊರಡಿಸಿದ್ದಾರೆ. ಜೈಲರ್ ಯಲ್ಲಪ್ಪ ನಾಯ್ಕ ಬಳ್ಳಾರಿ ಜೈಲಿಗೆ ಎತ್ತಂಗಡಿಯಾಗಿದ್ದಾರೆ. ಹಾಗೂ ಸಹಾಯಕ ಅಧೀಕ್ಷರಾಗಿದ್ದ ಶಹಾಬುದ್ದೀನ್ ಕಾಲೇಖಾನ್ ಅವರನ್ನು ಧಾರವಾಡ ಜೈಲಿಗೆ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಸು ಇದ್ದೋನೆ ಬಾಸ್, ಟಿವಿ9 ವರದಿ ಬೆನ್ನಲ್ಲೇ ಇಬ್ಬರು ಸಿಬ್ಬಂದಿ ಸಸ್ಪೆಂಡ್

ಯಲ್ಲಪ್ಪ ಮತ್ತು ಶಹಾಬುದ್ದೀನ್ ಇಬ್ಬರೂ ಕೈದಿಗಳಿಗೆ ನೀಡ್ತಿದ್ದ ಕಿರುಕುಳ ಕುರಿತು ಟಿವಿ9 ವರದಿ ಮಾಡಿತ್ತು. ಕೈದಿ ಪ್ರಶಾಂತ ಮೊಗವೀರ್ ಜೈಲಿನಲ್ಲಿದ್ದುಕೊಂಡೇ ಇಬ್ಬರು ಅಧಿಕಾರಿಗಳ ದರ್ಪದ ಕುರಿತು ಹೇಳಿಕೊಂಡಿದ್ದ. ಸೆಲ್ಫಿ ವಿಡಿಯೋ ಮಾಡಿ ಜೈಲು ಅವ್ಯವಸ್ಥೆ ಬಿಚ್ಚಿಟ್ಟಿದ್ದ. ಈ ಕುರಿತು ಆ.3ರಂದು ‘ಹಿಂಡಲಗಾ ಜೈಲು ಕಾಂಡ’ ಶೀರ್ಷಿಕೆಯಡಿ ಟಿವಿ9 ವಿಸ್ತೃತವಾದ ವರದಿ ಬಿತ್ತರಿಸಿತ್ತು. ಜೈಲಿನಲ್ಲಿ ನಡೆಯುವ ಅಕ್ರಮ ಕುರಿತು ಎಳೆ ಎಳೆಯಾಗಿ ವಿವರಿಸಿತ್ತು. ಮೊಬೈಲ್​ಗಳಿಗೆ ರೆಟ್ ಫಿಕ್ಸ್ ಮಾಡಿ ಕೈದಿಗಳ ನಡುವೆ ನಡೆದ ಗಲಾಟೆ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಸಿಬ್ಬಂದಿ ಅಮಾನತಾಗಿದ್ದರು. ಇದೀಗ ಮತ್ತೆ ಇಬ್ಬರು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಬಂಧಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ