ಹೋಟೆಲ್, ಪಬ್- ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ಹೊಸ ಮಾರ್ಗಸೂಚಿ: ಉಲ್ಲಂಘಿಸಿದ್ರೆ ಕ್ರಮದ ಎಚ್ಚರಿಕೆ
ಕಳೆದ ನಾಲ್ಕೈದು ದಿನಗಳಿಂದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಕೆಲ ಸ್ಟಾರ್ ಹೋಟೆಲ್ಗಳ ಮೇಲೆ ದಾಳಿ ಮಾಡಿದ್ದು, ಈ ವೇಲೆ ಅವಧಿ ಮುಗಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಕೊಳೆತ ತರಕಾರಿ, ಮಾಂಸ ಸಿಕ್ಕಿದ್ದು, ಈ ಮೂಲಕ ಆಹಾರ ಸುರಕ್ಷಾ ನಿಯಮಗಳನ್ನ ಉಲ್ಲಂಘನೆ ಮಾಡಿವೆ. ಹೀಗಾಗಿ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು, (ಆಗಸ್ಟ್ 11): ಬೆಂಗಳೂರಿನ (Bengaluru) ಕೆಲ ಸ್ಟಾರ್ ಹೋಟೆಲ್ಗಳಲ್ಲಿ (Hotels) ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮಾಂಸ, ತರಕಾರಿಗಳು ಪತ್ತೆಯಾಗಿದ್ದು, ಇದನ್ನು ಆಹಾರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ಗಳಿಗೆ ಹೊಸ ಮಾರ್ಗಸೂಚಿ(guidelines) ಬಿಡುಗಡೆ ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಎಕ್ಸ್ಪೈರಿ ಫಂಗಸ್ ಫುಡ್ಗೆ ಕಡಿವಾಣ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಮಾರ್ಗಸೂಚಿಯಲ್ಲೇನಿದೆ?
- ಮಾಂಸಾಹರವನ್ನು 4°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.
- ವೆಜ್ ಆಹಾರ 65°C & ನಾನ್ವೆಜ್ ಆಹಾರ 70°C ತಾಪಾಮನದಲ್ಲಿ ಇಡಬೇಕು.
- ಶೀತ ಆಹಾರ 5°C & ಫ್ರೋಜನ್ ಆಹಾರ -18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸಬೇಕು
- ಅಡುಗೆ 25% TPC ಮೀರದಂತ ಎಣ್ಣೆಯನ್ನು ಆಹಾರಕ್ಕೆ ಬಳಸಬೇಕು.
- ಕಚ್ಚಾ ಆಹಾರ, ಅರೆಬೆಂದ ಆಹಾರ ಮತ್ತು ಪೂರ್ಣವಾಗಿ ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು.
- ವೆಜ್ ಮತ್ತು ನಾನ್ವೆಜ್ ಆಹಾರಕ್ಕೆ ಪ್ರತ್ಯೇಕ ಸಂಗ್ರಹಣೆ ಹಾಗೂ ನಿರ್ವಹಣೆ ಕಡ್ಡಾಯ.
- ತಯಾರಿಸಿದ ಆಹಾರ ಮತ್ತೆ ಬಿಸಿ ಮಾಡುವಾಗ 75°C ತಾಪಮಾನ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಬಳಸಬೇಕು.
- ಜೊತೆಗೆ FSSAI ಅಂಗೀಕೃತ ಪ್ರಮಾಣ ಪತ್ರ ಹೋಟೆಲ್ ಬಲ್ಲಿ ಪ್ರದರ್ಶನ ಮಾಡಬೇಕು.
ಹೀಗೆ ಹಲವು ಅಂಶಗಳ ಒಳಗೊಂಡ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ.
ಇದನ್ನೂ ಓದಿ: 3 ದಿನಗಳಲ್ಲಿ ಬೆಂಗಳೂರಿನ 60 ಸ್ಟಾರ್ ಹೋಟೆಲ್ಗಳ ಮೇಲೆ ದಾಳಿ: 1 ವರ್ಷಕ್ಕೂ ಹಳೆಯ ಮಾಂಸ ಪತ್ತೆ!
ಇತ್ತೀಚಿನ ದಾಳಿಗಳಲ್ಲಿ ಸ್ಟಾರ್ ಹೋಟೆಲ್ಗಳ ಕಿಚನ್ಗಳಲ್ಲೇ ಅವಧಿ ಮೀರಿದ ಆಹಾರ, ಫಂಗಸ್ ಹಿಡಿದ ತರಕಾರಿ, ಹಾಳಾದ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಪತ್ತೆಯಾಗಿವೆ. ಈ ಹಿನ್ನಲೆ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಹೋಟೆಲ್ಗಳಲ್ಲಿ ಹಾಳಾದ ಆಹಾರ ಪದಾರ್ಥ ಪತ್ತೆ
ಬೆಂಗಳೂರಿನಲ್ಲಿ ನಡೆದ ವಿಶೇಷ ತಪಾಸಣೆಯಲ್ಲಿ 60ಕ್ಕೂ ಹೆಚ್ಚು 3-ಸ್ಟಾರ್ ಮತ್ತು 5-ಸ್ಟಾರ್ ಹೋಟೆಲ್ಗಳನ್ನು ಪರಿಶೀಲಿಸಲಾಗಿದೆ. ಅಧಿಕಾರಿಗಳು 1,000 ಕೆಜಿಗೂ ಅಧಿಕ ಆಹಾರ ಮತ್ತು ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಜನರಿಗೆ ಫಂಗಸ್ ಇರುವ ಮತ್ತು ಎಕ್ಸ್ಪೈರಿಯಾದ ಆಹಾರ ನೀಡುತ್ತಿದ್ದುದು ಬಯಲಾಗಿದೆ. ಇದಕ್ಕಾಗಿ ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಕಡಿವಾಣ ಹಾಕಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.




