ಫೇಲ್ ಆದ ವಿಚಾರ ಅಪ್ಪನಿಗೆ ತಿಳಿಯುತ್ತೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ

ಮೈಸೂರು ರಸ್ತೆಯ ಆರ್.ವಿ ಕಾಲೇಜಿನಲ್ಲಿ 3ನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್ ಪಾಂಡೆ ಎರಡು ವಿಷಯದಲ್ಲಿ ಫೇಲ್​ ಆಗಿದ್ದ. ಜೊತೆಗೆ ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ. ಈ ವಿಚಾರ ಪೋಷಕರಿಗೆ ತಿಳಿದರೆ ಬೈತಾರೆ ಎಂದು ಹೆದರಿ ಜಿಗಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಫೇಲ್ ಆದ ವಿಚಾರ ಅಪ್ಪನಿಗೆ ತಿಳಿಯುತ್ತೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ
ಜಿಗಣಿ ಪೊಲೀಸ್ ಠಾಣೆ
Edited By: ಆಯೇಷಾ ಬಾನು

Updated on: May 12, 2024 | 10:36 AM

ಆನೇಕಲ್, ಮೇ.12: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ (Anekal) ತಾಲೂಕಿನ ಜಿಗಣಿ ಬಳಿ ನಡೆದಿದೆ. ಅಮೃತೇಶ್ ಪಾಂಡೆ(21) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಿಹಾರ ಮೂಲದ ಅಮೃತೇಶ್ ಪಾಂಡೆ ಜಿಗಣಿ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾನೆ.

ಹೇಮಲತಾ ಪಾಂಡೆ, ವಿಜಯ್ ಶಂಕರ್ ದಂಪತಿ ಪುತ್ರ ಅಮೃತೇಶ್ ಕಳೆದ ಕೆಲ ವರ್ಷಗಳ ಹಿಂದೆ ಜಿಗಣಿಗೆ ಬಂದು ನೆಲೆಸಿದ್ದ. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಂಡಿದ್ದ ಪೋಷಕರು ಅದರಂತೆಯೇ ಮೈಸೂರು ರಸ್ತೆಯ ಆರ್.ವಿ ಕಾಲೇಜಿಗೆ ಸೇರಿಸಿದ್ರು. ಅಮೃತೇಶ್, R​.V.ಕಾಲೇಜಿನಲ್ಲಿ 3ನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಹಾಸ್ಟೆಲ್​ನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದ. ಅಮೃತೇಶ್ ಎರಡು ವಿಷಯದಲ್ಲಿ ಫೇಲ್​ ಆಗಿದ್ದ. ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ. ಈ ವಿಚಾರ ಪೋಷಕರಿಗೆ ತಿಳಿದರೆ ಬೈತಾರೆ ಎಂಬ ಭಯ ಅಮೃತೇಶನಿಗೆ ಇತ್ತು.

ಲೋಕಸಭಾ ಚುನಾವಣೆಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತೆ ಎಂದು ಹೆದರಿಕೊಂಡಿದ್ದ. ಕಾಲೇಜಿನವರು ಅಪ್ಪನಿಗೆ ಫೋನ್ ಮಾಡ್ತಾರೆ ಅಂತ ತಂದೆ ಫೋನ್​ನಲ್ಲಿದ್ದ ನಂಬರ್​ಗಳನ್ನು ಬ್ಲಾಕ್ ಮಾಡಿದ್ದ. ಈ ವೇಳೆ ಆರನೇ ಸೆಮಿಸ್ಟರ್​ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರ್ತೀನಿ ಎಂದು ಅಮೃತೇಶ್ ತಂದೆ ಹೇಳಿದ್ದರು. ತಂದೆಯ ಜೊತೆ ಕಾಲೇಜಿಗೆ ಹೋದ್ರೆ ಫೇಲ್ ಆದ ವಿಚಾರ ತಿಳಿಯುತ್ತೆ ಅಂತ ಹೆದರಿ ಹತ್ತನೇ ತಾರೀಖಿನಂದು ಮನೆಯಿಂದ ಹೊರಟ ಅಮೃತೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಮೈಸೂರು: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥ

ಮಗನ ನಾಪತ್ತೆ ಬಳಿಕ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದು ನಿನ್ನೆ ಜಿಗಣಿ ಕೆರೆಯಲ್ಲಿ ಮೃತದೇಹ ತೇಲಿಕೊಂಡು ಬಂದಿದೆ. ಮೃತ ದೇಹ ತೇಲುವುದನ್ನು ಕಂಡ ಸ್ಥಳೀಯರು ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಸದ್ಯ ಮೃತದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ ಸಾವಿನಿಂದ ಬೇಸತ್ತು ಅತ್ಮಹತ್ಯೆಗೆ ಶರಣಾದ ಮಗ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ತಂದೆ ಸಾವಿನಿಂದ ಬೇಸತ್ತು ಮಗ ಅತ್ಮಹತ್ಯೆಗೆ ಶರಣಾಗಿದ್ದಾನೆ. ವಯೋಸಹಜವಾಗಿ ಚಂದ್ರನಾಯ್ಕ್(65) ಮೃತಪಟ್ಟಿದ್ದು ತಂದೆ ಮೃತಪಟ್ಟಿದ್ದಕ್ಕೆ ನೊಂದ ಮಗ ಶಿವಕುಮಾರ್(32) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿವ್ಯಾಂಗನಾಗಿದ್ದ ಶಿವಕುಮಾರ್​ಗೆ ತಂದೆ ಆಸರೆಯಾಗಿದ್ದರು. ತಂದೆಯ ಆಸರೆಯೇ ಇಲ್ಲದೆ ಬದುಕುವುದೇಗೆ ಎಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Loading...
Unable to load recommendations.
Follow Us