ಕಾಲೇಜು ಪ್ರೇಮಿಗಳಾಗಿದ್ದರು! ವರ್ಷದ ಹಿಂದೆ ಮದುವೆಯಾದರು -ಆತ ಪಿಎಸ್​​ಐ, ಆದರೆ IAS ಪರೀಕ್ಷೆ ತಯಾರಿಯಲ್ಲಿದ್ದ ಹೆಂಡತಿ ಅನುಮಾನಾಸ್ಪದ ಸಾವು

ಕಾಲೇಜು ದಿನಗಳಿಂದಲೂ ಪರಸ್ಪರ ‌ಪ್ರೀತಿಸುತ್ತಿದ್ದ ರಮೇಶ್ ಮತ್ತು ಶಿಲ್ಪಾ ಉನ್ನತ ಶಿಕ್ಷಣ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ಎಂಎ ಮುಗಿಸಿ ಐಎಎಸ್​​ನತ್ತ ಶಿಲ್ಪಾ ಚಿತ್ತ ನೆಟ್ಟಿದ್ದಳು. ಪಿಎಸ್ಐ ಆಗಿ ರಮೇಶ್ ಪೊಲೀಸ್ ಇಲಾಖೆ ಸೇರಿದ್ದಾನೆ. ಅಲ್ಲಿಯವರೆಗೆ ಇಬ್ಬರ ಸಂಬಂಧ ಚೆನ್ನಾಗಿತ್ತು. ಆದರೆ, ದಿನ ಕಳೆದಂತೆ

ಕಾಲೇಜು ಪ್ರೇಮಿಗಳಾಗಿದ್ದರು! ವರ್ಷದ ಹಿಂದೆ ಮದುವೆಯಾದರು -ಆತ ಪಿಎಸ್​​ಐ, ಆದರೆ IAS ಪರೀಕ್ಷೆ ತಯಾರಿಯಲ್ಲಿದ್ದ ಹೆಂಡತಿ ಅನುಮಾನಾಸ್ಪದ ಸಾವು
IAS ಪರೀಕ್ಷೆ ತಯಾರಿಯಲ್ಲಿದ್ದಳು, ಮೊನ್ನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ
Edited By: ಸಾಧು ಶ್ರೀನಾಥ್​

Updated on: Jun 05, 2023 | 9:08 AM

ಆನೇಕಲ್​: ಅವ್ರು ಕಾಲೇಜು ದಿನಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಬರೋಬ್ಬರಿ 10 ವರ್ಷಗಳ ಬಳಿಕ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆತ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಆಕೆ IAS ಪರೀಕ್ಷೆಗೆ ಸಿದ್ದತೆ ನಡೆಸಿದ್ದಳು. ಆದ್ರೆ ಮದುವೆಯಾಗಿ‌ ಒಂದು ವರ್ಷ ಕಳೆಯುವುದರೊಳಗೆ ನವವಿವಾಹಿತೆ ಶನಿವಾರ ಬೆಳಗ್ಗೆ ನೇಣು ಹಾಕಿಕೊಂಡು, ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿ ಸಬ್ ಇನ್ಸ್ಪೆಕ್ಟರ್ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಇವರಿಬ್ಬರ ನಡುವೆ ಆಗಿದ್ದೇನು..? ಮೇಲಿನ ಪೋಟೋದಲ್ಲಿ ಕಾಣುತ್ತಿರುವ ಈಕೆಯ ಹೆಸರು ಶಿಲ್ಪಾ (29). ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಗೊಲ್ಲಹಳ್ಳಿ ನಿವಾಸಿಯಾದ ಈಕೆ ಮದುವೆಯಾಗಿ ‌ಬರೊಬ್ಬರಿ ಒಂದು ವರ್ಷ ಆಗೋಕೆ ಬರ್ತಾ ಇದೆ. ‌ಅಷ್ಟರೊಳಗೆ ತಾನು ವಾಸವಿದ್ದ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಶಿಲ್ಪಾಳನ್ನು ಆಕೆಯ ಪತಿ (Wife) ನಗರದ ಬೇಗೂರು ಠಾಣೆ ಸಬ್ ಇನ್ಸ್ಪೆಕ್ಟರ್ ರಮೇಶ್ (Begur Police Station Sub Inspector Ramesh) ಕೊಲೆ ಮಾಡಿದ್ದಾನೆಂದು ಕುಟುಂಬದವರು ಆರೋಪಿಸಿದ್ದಾರೆ.

ಕಾಲೇಜು ದಿನಗಳಿಂದಲೂ ಪರಸ್ಪರ ‌ಪ್ರೀತಿಸುತ್ತಿದ್ದ ಬಾಗೇಪಲ್ಲಿಯ ಎಸ್​​ ವಿ ರಮೇಶ್ ಮತ್ತು ಚಿಂತಾಮಣಿಯ ಶಿಲ್ಪಾ ಉನ್ನತ ಶಿಕ್ಷಣ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ಎಂಎ ಮುಗಿಸಿ ಐಎಎಸ್​​ನತ್ತ ಶಿಲ್ಪಾ ಚಿತ್ತ ನೆಟ್ಟಿದ್ದಳು. ಪಿಎಸ್ಐ ಆಗಿ ರಮೇಶ್ ಪೊಲೀಸ್ ಇಲಾಖೆ ಸೇರಿದ್ದಾನೆ. ಅಲ್ಲಿಯವರೆಗೆ ಇಬ್ಬರ ಸಂಬಂಧ ಚೆನ್ನಾಗಿತ್ತು. ಆದರೆ, ದಿನ ಕಳೆದಂತೆ ಇಬ್ಬರ ನಡುವೆ ಜಾತಿ ಅಡ್ಡ ಬಂದಿತ್ತು! ರಮೇಶ್ ಸಬ್ ಇನ್ಸ್ಪೆಕ್ಟರ್ ಆದ ಮೇಲೆ ಜಾತಿ ನೆಪವೊಡ್ಡಿ ಮದುವೆಯಾಗಲು ನಿರಾಕರಿಸಿದ್ದ. ಆದ್ರೆ ಶಿಲ್ಪಾ ಮಾತ್ರ ನನ್ನ ಸರ್ವಸ್ವವನ್ನೂ ನಿನಗೆ ಧಾರೆಯೆರೆದಿದ್ದು, ನೀನೇ ಬೇಕು ಎಂದು ಬೇಗೂರು ಠಾಣೆ ಮೆಟ್ಟಿಲೇರಿದ್ದಳು.

ಕೊನೆಗೆ ಬೇರೆ ದಾರಿಯಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ. ಮದುವೆಯಾದ ಬಳಿಕವೂ ಇವನ ಕಿರುಕುಳ ಮುಂದುವರಿದಿದ್ದು, ಹಣ ಪಡೆದು ವಿಚ್ಛೇದನ ಪಡೆಯುವಂತೆ ಪದೇ ಪದೇ ಒತ್ತಾಯಿಸಿರೋ ಆರೋಪ‌ ಕೇಳಿ ಬಂದಿದೆ. ಒಪ್ಪದಿದ್ದಾಗ ತುತ್ತು ಅನ್ನಕ್ಕೂ ಅಲೆಸಿದ್ದಾನೆ ಎಂಬ ಗಂಭೀರವಾದ ಆರೋಪವನ್ನು ಪೋಷಕರು ಮಾಡಿದ್ದಾರೆ. ನನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯೆಂದು ಪದೇ ಪದೇ ಜಾತಿ ಹಿಡಿದು ನಿಂದಿಸುತ್ತಿದ್ದ ಎನ್ನಲಾಗಿದೆ. ಆದರೂ ಹಠ ಬಿಡದೆ ಆಕೆ ಕಿರುಕುಳ ಸಹಿಸಿಕೊಂಡಿದ್ದಳು. ನಿನ್ನೆ ರಾತ್ರಿ ಸಹ ಪೋಷಕರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದ ಮೃತ ಶಿಲ್ಪಾ ಖರ್ಚಿಗಾಗಿ ತನ್ನ ಅಕೌಂಟಿಂಗೆ ಹಣ ಹಾಕಿಸಿಕೊಂಡಿದ್ದಳು. ಆದ್ರೆ ಇದೀಗ ಶವವಾಗಿದ್ದು, ಪತಿ ರಮೇಶ್ ಕೊಲೆ ಮಾಡಿರುವ ಶಂಕೆ ಇದೆ ಎಂದು ಮೃತಳ ಸಂಬಂಧಿ ಆರೋಪಿಸಿದ್ದಾರೆ.

ಇನ್ನು ಮನೆ ಮಾಲೀಕ ಶಿಲ್ಪಾಳ ಪೋಷಕರಿಗೆ ಮಾಹಿತಿ ತಿಳಿಸುತ್ತಿದ್ದಂತೆ ಪತಿ ರಮೇಶ್ ತರಾತುರಿಯಲ್ಲಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದು, ಆಕೆಯ ಪರ್ಸ್, ಮೊಬೈಲ್ ಮತ್ತಿತರ ವಸ್ತುಗಳನ್ನು ತೆಗೆದುಕೊಂಡಿದ್ದಾನೆ. ಜೊತೆಗೆ ಬೇಗೂರು ಠಾಣೆ ಪೊಲೀಸ್ ಅಧಿಕಾರಿಗಳು ಸಹ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮೇಶ್ ರಕ್ಷಣೆಗೆ ನಿಂತಿದ್ದು, ಡೆತ್ ನೋಟ್ ಸೇರಿದಂತೆ ಮಗಳು ಮೃತಪಟ್ಟ ಮನೆ ಒಳಗೂ ಸಹ ನಮ್ಮನ್ನು ಬಿಡುತ್ತಿಲ್ಲ ಎಂದು ಪೋಷಕರು ಆರೋಪಿಸಲಾಗಿದೆ. ಘಟನೆ ಬಗ್ಗೆ ಅಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಮಾತನಾಡಿ ಈಗಾಗಲೇ ಶವವನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ತನಿಖೆ ಮುಂದುವರಿದಿದೆ. ಮೃತಳ ಕುಟುಂಬದವರು ನೀಡುವ ದೂರು ಆಧರಿಸಿ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಒಟ್ನಲ್ಲಿ ಹತ್ತಾರು ಕನಸ್ಸು ಹೊತ್ತು ವಿವಾಹವಾಗಿದ್ದ ನವವಿವಾಹಿತೆ ಶಿಲ್ಪಾ ಮದುವೆಯಾಗಿ ಕೇವಲ ಒಂಬತ್ತು ತಿಂಗಳಿಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಸಬ್ ಇನ್ಸ್ಪೆಕ್ಟರ್ ಹುದ್ದೆಯಲ್ಲಿರುವ ಪತಿ ರಮೇಶ್ ಕೊಲೆ ಮಾಡಿದ್ದಾರೆಂದು ಪೋಷಕರ ಆರೋಪವಾಗಿದ್ದು, ಪೊಲೀಸರ ಪ್ರಾಮಾಣಿಕ ತನಿಖೆಯಿಂದ ಸತ್ಯ ಹೊರ ಬರಬೇಕಿದೆ. ಶಿಲ್ಪಾ‌ ಸಾವಿನ ಬಗ್ಗೆ ಕೊಲೆ‌ ಆರೋಪ ಹೊರಿಸಿ ದೂರು ನೀಡಿದ್ದ ತಮ್ಮದೇ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿರುದ್ಧ ತನಿಖೆಗೆ ಮುಂದಾಗಿದ್ದಾರೆ.

ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:00 am, Mon, 5 June 23

Loading...
Unable to load recommendations.
Follow Us