Ragi Kana Santhe: ಕೊರೊನಾದಿಂದ ಸ್ಥಗಿತಗೊಂಡಿದ್ದ ‘ರಾಗಿ ಕಣ ಸಂತೆ’ ಅಕ್ಟೋಬರ್ 2ರಿಂದ ಪುನರಾರಂಭ

| Updated By: shivaprasad.hs

Updated on: Sep 25, 2021 | 11:01 AM

ಕೊರೊನಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರಾಗಿ ಕಣ ಸಂತೆಯು ಮತ್ತೆ ಆರಂಭವಾಗಲಿದೆ. ಅಕ್ಟೋಬರ್ 2 ಹಾಗೂ 3ರಂದು ಸಂತೆ ನಡೆಯಲಿದೆ.

Ragi Kana Santhe: ಕೊರೊನಾದಿಂದ ಸ್ಥಗಿತಗೊಂಡಿದ್ದ ‘ರಾಗಿ ಕಣ ಸಂತೆ’ ಅಕ್ಟೋಬರ್ 2ರಿಂದ ಪುನರಾರಂಭ
ರಾಗಿ ಕಣ ಸಂತೆ (ಸಾಂಕೇತಿಕ ಚಿತ್ರ)
Follow us on

ಕೊವಿಡ್ ಮಹಾಮಾರಿಯಿಂದ ತತ್ತರಿಸುತ್ತಿರುವ ಶ್ರಮಿಕ ಸಮುದಾಯದೊಂದಿಗೆ ಕೈಗೂಡಿಸುವ ಕಾರ್ಯದಲ್ಲಿ ಸದಾ ನಿರತವಾಗಿರುವ ಕೈಉತ್ಪನ್ನ ಕ್ಷೇತ್ರಕ್ಕೆ ಒತ್ತು ಕೊಡುವ ಸಂತೆಯಾದ ರಾಗಿಕಣ ಸಂತೆಯು ಗಾಂಧಿ ಜಯಂತತಿಯಂದು ಆರಂಭಗೊಳ್ಳಲಿದೆ. ಸಾಂಸ್ಕೃತಿಕ ಕೇಂದ್ರ ರಾಗಿಕಣ ಸಂತೆಯು ಅಕ್ಟೋಬರ್ 2ರಂದು ಆರಂಭಗೊಳ್ಳಲಿದ್ದು, ಅಕ್ಟೋಬರ್​ 3ರಂದು ಮುಕ್ತಾಯವಾಗಲಿದೆ. ಎರಡು ದಿನಗಳ ಸಂತೆಯಲ್ಲಿ, ಕೈಉತ್ಪನ್ನಗಳ ಜೊತೆಗೆ ಕೈಮಗ್ಗ ಮತ್ತು ಖಾದಿ ಕ್ಷೇತ್ರಕ್ಕೆ ವಿಶೇಷ ಗಮನ ನೀಡಲಾಗಿದೆ.

ಅಕ್ಟೋಬರ್ 2 ರಂದು 11 ಘಂಟೆಗೆ ನಿವೃತ್ತ ಐಪಿಸ್ ಅಧಿಕಾರಿ ಹಾಗೂ ಗಾಂಧೀವಾದಿ ಶ್ರೀ ಅಜಯ್ ಕುಮಾರ್ ಸಿಂಗ್​ ಸಂತೆಯ ಉದ್ಘಾಟನೆಯನ್ನು ನಡೆಸಲಿದ್ದಾರೆ. ಅಕ್ಟೋಬರ್ 2ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ನಿಶಾಂತ್ ಗುರವ್ ಗಾಂಧಿ ಸ್ಮರಣ ಗೀತೆಗಳನ್ನು ಹಾಡಲಿದ್ದಾರೆ. ನಂತರ ಹೆಸರಾಂತ ನೃತ್ಯಕಲಾವಿದ ಸುಹಾಸಿನಿ ಜಲಗಿಯವರಿಂದ ಭರತನಾಟ್ಯ ಪ್ರದರ್ಶನವಿದ್ದು, ಅದರ ಮೂಲಕ ರೈತರ ಬವಣೆಯನ್ನು ಕಟ್ಟಿಕೊಡಲಾಗುತ್ತದೆ.

ಅಕ್ಟೋಬರ್ 3 ರಂದು 11 ಘಂಟೆಗೆ ‘ಖಾದಿ ಮತ್ತು ಕೈಮಗ್ಗದಲ್ಲಿ ಪ್ರಸ್ತುತ ಸವಾಲುಗಳು’ ವಿಷಯದ ಕುರಿತಂತೆ ಚರ್ಚಾಘೋಷ್ಠಿಯನ್ನು ಏರ್ಪಡಿಸಲಾಗಿದೆ. ಇದರಲ್ಲಿ ವಿಮೊರ್ ಸಂಸ್ಥೆಯ ಪವಿತ್ರಾ ಮುದ್ದಯ್ಯ, ಮೆಟಫರ್ ರಾಚದ ರವಿಕಿರಣ್, KASKOM ಸಂಸ್ಥೆಯ ಸ್ವಾಮಿನಾಥನ್ ವೈತಲಿಂಗಂ ಭಾಗವಹಿಸಲಿದ್ದು, ಈ ಚರ್ಚೆಯನ್ನು NIFT ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ವಿನ್ಯಾಸಕಿ ಇಳಾ ದುಬೆ ನಡೆಸಿಕೊಡಲಿದ್ದಾರೆ.

ಏನಿದು ರಾಗಿ ಕಣ ಸಂತೆ?:
ರಾಗಿಕಣ ಸಂತಯು ಮೇ 2017 ರಲ್ಲಿ ಗ್ರಾಮಸೇವಾ ಸಂಘ ಮತ್ತು ಹುಲ್ಕುಲ್ ಮುನಿಸ್ವಾಮಪ್ಪ ಮುನಿವೆಂಕಟಮ್ಮ ಅವರ ಸಂಯುಕ್ತಾಶ್ರಯದಲ್ಲಿ ಪ್ರಾರಂಭವಾಯಿತು. ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕಣ, ಗೊಟ್ಟಿಗೆರೆ- ಬನ್ನೇರುಘಟ್ಟ ರಸ್ತೆಯಲ್ಲಿ 4 ವರ್ಷಗಳಿಂದ ಸಂತೆಯು ಯಶಸ್ವಿಯಾಗಿ ನಡೆಯುತ್ತಿತ್ತು. ಅದರ ಕೊವಿಡ್ ಕಾರಣದಿಂದ ಸಂತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಪ್ರಸ್ತುತ ಸಂತೆ ಪುನರಾರಂಭಗೊಳ್ಳಲಿದೆ.

ರಾಗಿಕಣ ಸಂತೆಯು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶ್ರಮಿಕ ಸಮುದಾಯದ ಕೃಷಿಕರು, ಕುಶಲ ಕರ್ಮಿಗಳು, ಅರಣ್ಯ ಉತ್ಪನ್ನ ಹಾಗೂ ಇತರ ತಯಾರಕರುಗಳು ಹಾಗೂ ನಗರ/ಪಟ್ಟಣ ಮಾರುಕಟ್ಟೆಯ ನಡುವೆ ಸಂಪರ್ಕ ಸೇತುವೆಯಾಗಲು ವಾರದ ಸಂತೆ/ ಬಜಾರ್‌ ಗಳನ್ನು ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆಗಳು, ಕಲಾ ಮತ್ತು ಚಲನಚಿತ್ರ ಪ್ರದರ್ಶನಗಳು- ಇವೆಲ್ಲವನ್ನು ಒಳಗೊಂಡಂತೆ ಸುತ್ತಿಗೆ ಬದುಕು, ಕೃಷಿ ಹಾಗೂ ಪರಿಸರದ ಸಮಸ್ಯೆಗಳ ಸುತ್ತ ರಾಗಿ ಕಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪ್ರದರ್ಶನ ಹಾಗೂ ಮಾರಾಟದಲ್ಲಿ ಏನೇನಿದೆ?:
ಇವೆರಡೂ ದಿನಗಳಲ್ಲಿ ವೈವಿಧ್ಯ ಕೈ ಉತ್ಪನ್ನ ಪದಾರ್ಥಗಳು ಮಾರಾಟಕ್ಕಿವೆ. ಪ್ರಖ್ಯಾತ ಖಾದಿ ಮತ್ತು ಕೈಮಗ್ಗ ಸಂಸ್ಥೆಗಳಾದ ಜನಪದ ಖಾದಿ, ಮಗನ್ ಖಾದಿ, ಚರಕ ಸೊಸೈಟಿ, ದೇಸಿ ಟ್ರಸ್ಟ್, ಕೈಮಗ್ಗ ನೇಕಾರರ ಒಕ್ಕೂಟ, KASKOM ಸಂಸ್ಥೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ನೈಸರ್ಗಿಕವಾಗಿ ಬೆಳೆದ ಹೂವು ತರಕಾರಿಗಳು, ದಿನಸಿ ಪದಾರ್ಥಗಳು, ಗಾಣದ ಎಣ್ಣೆಗಳು, ಕೈಉತ್ಪಾದಿತ ಕಲಾತ್ಮಕ ಹಾಗೂ ಕರಕುಶಲ ವಸ್ತುಗಳು ಸೇರಿದಂತೆ ಹಲವು ಪದಾರ್ಥಗಳು ಮಾರಾಟಕ್ಕೆ ಲಭ್ಯವಿದೆ.

ಇದನ್ನೂ ಓದಿ:

UPSCಯಲ್ಲಿ ಮೈಸೂರಿನ ನಿಶ್ಚಯ್ ಪ್ರಸಾದ್​​ಗೆ 130ನೇ ರ್‍ಯಾಂಕ್; ಸ್ವಂತ ಪರಿಶ್ರಮದಿಂದ ಓದಿ ಸಾಧನೆಗೈದ 24ರ ಯುವಕ!

ವಿಜಯಪುರ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿಗೆ ರ್‍ಯಾಂಕ್

ಉಡುಪಿಯಲ್ಲಿ ಫ್ರೀಡಂ ರನ್​ಗೆ ಶೋಭಾ ಕರಂದ್ಲಾಜೆ ಚಾಲನೆ

(Ragi Kana Santhe will restart from October 2nd)

Published On - 10:43 am, Sat, 25 September 21