ಕ್ಷಣಾರ್ಧದಲ್ಲೇ ಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದ ಕಾಲೇಜಿನ ಟಾಪರ್ ರ್ಯಾಗಿಂಗ್ಗೆ ಬಲಿ!
ಈತನ ಹೆಸರು ಅರುಣ್. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಜೊತೆಗೆ ಕಲೆಗಾರ ಸಹ ಆಗಿದ್ದ. ಕೂತಲ್ಲೇ 5 ನಿಮಿಷದಲ್ಲಿ ಭಾವಚಿತ್ರ ಬಿಡಿಸುತ್ತಿದ್ದ ಅರುಣ್, ಗಣ್ಯರು ಹಾಗೂ ಸಿನಿಮಾ ತಾರೆಯರ ಭಾವಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದ. ಆದ್ರೆ, ಕಾಲೇಜಿನ ಟಾಪರ್ ವಿದ್ಯಾರ್ಥಿಯಾಗಿದ್ದ ಅರುಣ್ ರ್ಯಾಗಿಂಗ್ ಗೆ ಬಲಿಯಾಗಿದ್ದಾನೆ. ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.

ಬೆಂಗಳೂರು, (ಜುಲೈ 21): ಆರ್ಕಿಟೆಕ್ಚರ್ ವಿದ್ಯಾರ್ಥಿಯೋರ್ವ ಸೆಲ್ಫಿ ವಿಡಿಯೋ ಮಾಡಿ ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ನಂದರಾಮಯ್ಯನ ಪಾಳ್ಯದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಮೂಲದ ಚನ್ನಕೇಶವ, ತುಳಸಿ ದಂಪತಿ ಪುತ್ರ ಅರುಣ್(22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸೆಲ್ಫಿ ವಿಡಿಯೋ ಮಾಡಿ ಅದನ್ನು ಕಾಲೇಜಿನ ಗ್ರೂಪ್ ಗೆ ಹಾಕಿ ಬಳಿಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಬಾಗಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಫ್ರೀ ಸೀಟ್ ಪಡೆದಿದ್ದ ಅರುಣ್, ಕುಂತಲ್ಲೇ 5 ನಿಮಿಷದಲ್ಲಿ ಗಣ್ಯರ ಹಾಗೂ ಸಿನಿಮಾ ತಾರೆಯರ ಭಾವಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದ.
ಹಾಸನ ಜಿಲ್ಲೆಯ ಮೂಲದ ಚನ್ನಕೇಶವ, ತುಳಸಿ ದಂಪತಿ ನಂದರಾಮಯ್ಯನ ಪಾಳ್ಯದಲ್ಲಿ ಮಕ್ಕಳೊಂದಿಗೆ ವಾಸವಿದ್ದರು. ಮೂಟೆ ಹೊತ್ತು ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಇನ್ನು ಬಡ ಕುಟುಂಬದಲ್ಲಿ ಹುಟ್ಟಿ ಶಾಲಾ, ಕಾಲೇಜಿನಲ್ಲಿ ಟಾಪರ್ ಆಗಿದ್ದ ಅರಣ್, ಜು.10ರಂದು ಕಾಲೇಜಿನಿಂದ ಮನೆಗೆ ಬಂದಿದ್ದ. ಆದ್ರೆ, ಜುಲೈ 11ರಂದು ತಂದೆ, ತಾಯಿ ಕೆಲಸಕ್ಕೆ ತೆರಳಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಶಿಕ್ಷಕರ ಕಿರುಕುಳ ತಾಳಲಾರದೆ ಶಾರದಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆತ್ಮಹತ್ಯೆ; ಇಬ್ಬರು ಅಧ್ಯಾಪಕರ ಬಂಧನ
ಕಾಲೇಜಿನಲ್ಲಿ ಸ್ನೇಹಿತರ ರ್ಯಾಗಿಂಗ್ ನಿಂದ ಸಾಕಷ್ಟು ಮನನೊಂದಿದ್ದ ಎನ್ನಲಾಗಿದ್ದು, ಸಾವಿಗೂ ಮುನ್ನ ಸ್ನೇಹಿತರ ರ್ಯಾರಿಂಗ್ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೆಲ್ಫಿ ವಿಡಿಯೋ ಮಾಡಿ ಬಳಿಕ ಅದನ್ನು ಕಾಲೇಜಿನ ಗ್ರೂಪ್ ಗೆ ಶೇರ್ ಮಾಡಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕಾಲೇಜಿನವರು ಕೂಡಲೇ ಅರುಣ್ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದ್ರೆ, ಕೆಲಸಕ್ಕೆ ಹೋಗಿದ್ದ ಪೋಷಕರು ಮನೆಗೆ ಬಂದು ನೋಡುವಷ್ಟರಾಗಲೇ ಅರುಣ್ ನೇಣಿಗೆ ಶರಣಾಗಿದ್ದ.
ಅರುಣ್ ಶಾಲಾ, ಕಾಲೇಜಿನಲ್ಲೇ ಟಾಪರ್ ಆಗಿದ್ದ. ಇದರಿಂದ ಬಾಗಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಫ್ರೀ ಸೀಟ್ ಸಿಕ್ಕಿತ್ತು. ಜೊತೆಗೆ ಚಿತ್ರ ಬಿಡಿಸುವ ಹವ್ಯಾಸ ಸಹ ಅರುಣ್ ಗೆ ಇತ್ತು. ಕುಂತಲ್ಲೇ 5 ನಿಮಿಷದಲ್ಲಿ ಭಾವಚಿತ್ರ, ವಿಭಿನ್ನ ಚಿತ್ರಗಳನ್ನ ಬಿಡಿಸುತ್ತಿದ್ದ. ಗಣ್ಯರು ಹಾಗೂ ಸಿನೆಮಾ ತಾರೆಯರ ಭಾವ ಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದ. ಇಂತಹ ಪ್ರತಿಭಾವಂತ ವಿದ್ಯಾರ್ಥಿ ಕಾಲೇಜಿನಲ್ಲಿ ಸ್ನೇಹಿತರ ರ್ಯಾರಿಂಗ್ ಗೆ ಬಲಿಯಾಗಿರುವುದು ದುರಂತ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:33 pm, Mon, 21 July 25




