ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟ; 8 ಜಿಲ್ಲೆಗಳಲ್ಲಿ 13 ಕೋಟಿಯಷ್ಟು ಹಾನಿ

| Updated By: ಆಯೇಷಾ ಬಾನು

Updated on: Jun 09, 2024 | 8:00 AM

ಮಳೆಗಾಗಿ ಕಾಯುತ್ತಿದ್ದ ಜನರಿಗೆ ವರುಣ ಕೃಪೆ ತೋರಿದ್ದಾಯ್ತು, ಆದರೆ ಅದರ ಜೊತೆ ಸೈಡ್ ಎಫೆಕ್ಟ್ ಕೂಡ ಹೆಚ್ಚಾಗಿದೆ. ಮರ ಬೀಳುವುದು ಒಂದೆಡೆಯಾದ್ರೆ, ಇನ್ನೊಂದೆಡೆ ಬೆಸ್ಕಾಂ ಕಂಬಗಳು ಧರೆಗುರುಳಿ ಹಾಗೂ ಟ್ರಾನ್ಸ್‌ಫರ್ಮರ್ ಕೆಟ್ಟು ಹೋಗಿ ಸಾಕಷ್ಟು ನಷ್ಟವಾಗಿದೆ.

ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟ; 8 ಜಿಲ್ಲೆಗಳಲ್ಲಿ 13 ಕೋಟಿಯಷ್ಟು ಹಾನಿ
ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಕೋಟಿ ಕೋಟಿ ನಷ್ಟ
Follow us on

ಬೆಂಗಳೂರು, ಜೂನ್.09: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯೂ ಮೇ ತಿಂಗಳಲ್ಲಿ ಅಬ್ಬರಿಸಿತ್ತು (Karnataka Rain). ಇದೀಗ ಮುಂಗಾರು (Monsoon) ಮಳೆ ಚುರುಕುಗೊಂಡಿದ್ದು ರಾಜ್ಯಾದ್ಯಂತ ಉತ್ತಮವಾಗಿ ಮಳೆ ಬೀಳ್ತಿದೆ. ಬೆಂಗಳೂರಿನಲ್ಲಿಯೂ‌ ಹೆಚ್ಚಿನ ಪ್ರಮಾಣದಲ್ಲಿಯೇ ಮಳೆಯಾಗಿದೆ. ಗಾಳಿ ಮಳೆಯಿಂದಾಗಿ ಸಾಕಷ್ಟು ಅವಾಂತರವಾಗಿದ್ದು ಹಲವೆಡೆ ವಿದ್ಯುತ್‌ ಕಂಬಗಳಿಗೆ, ಟ್ರಾನ್ಸ್‌ಪಾರ್ಮರ್ ಗೆ ಹಾನಿಯಾಗಿದೆ. ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಗಾಳಿ ಮಳೆಯಿಂದ ಸಾಕಷ್ಟು  ಹಾನಿಯಾಗಿದ್ದು, ಬಿರುಗಾಳಿ ಸಹಿತ ಗಾಳಿ ಮಳೆಗೆ ಹಲವೆಡೆ ಕಂಬಗಳ ಮೇಲೆ ಮರಗಳು ಬಿದ್ದು ಕಂಬ ಮುರಿದಿದ್ರೆ. ಇನ್ನೂ ಕೆಲವೆಡೆ ಸಿಡಿಲಿಗೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಗೆ ಹಾನಿಯಾಗಿದೆ. ಮರ ಮತ್ತು ಮರದ ಕೊಂಬೆ ಬಿದ್ದು ವಿದ್ಯುತ್ ತಂತಿಗಳೂ ಕೂಡ ಹಾನಿ ಆಗಿವೆ.

ಮೇ ತಿಂಗಳಿಂದ ಜೂನ್ 5ರ ವರೆಗೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಬರೋಬ್ಬರಿ 3ಕೋಟಿ 24ಲಕ್ಷ ಮೌಲ್ಯದ 4312 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 10.04ಕೋಟಿ ಮೌಲ್ಯದ 762 ಟ್ರಾನ್ಸ್‌ಫಾರ್ಮರ್ ಗಳಿಗೆ ಹಾನಿಯಾಗಿದೆ. 2.72ಲಕ್ಷ ಮೌಲ್ಯದ ತಂತಿ ಹಾಗೂ 2.8ಲಕ್ಷ ಮೌಲ್ಯದ ಡಿಪಿ ಸ್ಟ್ರಕ್ಚರ್ ಗೆ ಹಾನಿಯಾಗಿದ್ದು ಒಟ್ಟಾರೆ 13 ಕೋಟಿಯಷ್ಟು ಬೆಸ್ಕಾಂಗೆ ನಷ್ಟವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡಿವೋರ್ಸ್ ಕೇಸ್ ಹೆಚ್ಚಳ, ಚಿಕ್ಕ ವಿಚಾರಕ್ಕೂ ದಾಂಪತ್ಯ ಜೀವನ ಅಂತ್ಯಗೊಳಿಸುತ್ತಿರುವ ಸಿಟಿ ಮಂದಿ

ಒಟ್ಟಿನಲ್ಲಿ ಮಳೆಗಾಲದ ಆರಂಭದಲ್ಲಿಯೇ ಬೆಸ್ಕಾಂಗೆ ಭಾರೀ ನಷ್ಟವಾಗಿದ್ದು‌, ಬೆಸ್ಕಾಂನ ನಷ್ಟದಲ್ಲಿ ಬಹುಪಾಲು ಬೆಂಗಳೂರೂ‌ ನಗರ ವ್ಯಾಪ್ತಿಯದ್ದೇ ಇದೆ. ಈಗ ಅಷ್ಟೇ ಮುಂಗಾರು ಆರಂಭವಾಗಿರೊದ್ರಿಂದ ಮುಂದಿನ ದಿನದಲ್ಲಿ ಸಹಜವಾಗಿ ಹೆಚ್ಚಿನ ಮಳೆಯಾಗಲಿದೆ. ಹೀಗಾಗಿ ಗಾಳಿ ಮಳೆಗೆ ವಿದ್ಯುತ್ ಕಂಬ, ತಂತಿಗಳ ಮೇಲೆ ಬೀಳುವ ಸಂಭವವಿರುವ ಮರ ಗಿಡಗಳನ್ನ ಕತ್ತರಿಸಿ ವಿದ್ಯುತ್ ಕಂಬಗಳಿಗಾಗುವ ಹಾನಿಯನ್ನ ತಪ್ಪಿಸುವ ಕೆಲಸವನ್ನ ಬೆಸ್ಕಾಂ ಅಧಿಕಾರಿಗಳು ಮಾಡ್ಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:59 am, Sun, 9 June 24