ಎತ್ತ ಸಾಗುತ್ತಿದೆ ಬೆಂಗಳೂರು? ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ, ಕುಟುಂಬದ ಜೊತೆ ಹೋಗ್ತಿದ್ದ ಮಹಿಳೆಗೆ ಕಿರಿಕ್

| Updated By: ಆಯೇಷಾ ಬಾನು

Updated on: Jul 08, 2024 | 12:36 PM

ಬೆಂಗಳೂರಿನ ವಿ.ವಿ. ಪುರಂನಲ್ಲಿ ಕಾಮುಕ ಅಟ್ಟಹಾಸ ಮೆರೆದಿದ್ದಾನೆ. ಯುವತಿಯರು ಹೆಚ್ಚಾಗಿರುವ ಕಾಲೇಜು ಟಾರ್ಗೆಟ್ ಮಾಡಿ ಆ ರಸ್ತೆಗೆ ಇಳಿಯುವ ಕಾಮುಕ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಯುವತಿಯರಿರುವ ಕಡೆ ಬೈಕ್ ನಿಲ್ಲಿಸಿ ಮರ್ಮಾಂಗ ತೋರಿಸಿ ಪರಾರಿ ಆಗ್ತಿದ್ದಾನೆ. ಇದರಿಂದ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ಯುವತಿಯರು ಕಾಮುಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಎತ್ತ ಸಾಗುತ್ತಿದೆ ಬೆಂಗಳೂರು? ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ, ಕುಟುಂಬದ ಜೊತೆ ಹೋಗ್ತಿದ್ದ ಮಹಿಳೆಗೆ ಕಿರಿಕ್
ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ
Follow us on

ಬೆಂಗಳೂರು, ಜುಲೈ.08: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಲಕ್ಷಾಂತರ ಜನರಿಗೆ ಜೀವದಾನ ಮಾಡಿದೆ. ಜೀವನದಲ್ಲಿ ಸೋತು, ನೊಂದವರಿಗೆ ಭರವಸೆಯ ನಗರವಾಗಿ ಕೈ ಹಿಡಿದಿದೆ. ಅದೆಷ್ಟೋ ಯುವಕ, ಯುವತಿಯರು ತಮ್ಮ ಕುಟುಂಬ, ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುವುದು ಪದೇ ಪದೇ ಸಾಬೀತಾಗುತ್ತಿದೆ. ಸಜ್ಜನರಿರುವ ವಿ.ವಿ. ಪುರಂನಲ್ಲಿ (VV Puram) ಕಾಮುಕನ ಅಟ್ಟಹಾಸ ಹೆಚ್ಚಾಗಿದೆ.

ಬೈಕ್​ನಲ್ಲಿ ಬರುವ ಕಾಮುಕನೋರ್ವ ವಿ.ವಿ. ಪುರಂ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಕಿರುಕುಳ ನೀಡುತ್ತಿದ್ದಾನೆ. ಯುವತಿಯರು ಹೆಚ್ಚಾಗಿರುವ ಕಾಲೇಜು ಟಾರ್ಗೆಟ್ ಮಾಡಿ ಆ ರಸ್ತೆಗೆ ಇಳಿಯುವ ಕಾಮುಕ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಯುವತಿಯರಿರುವ ಕಡೆ ಬೈಕ್ ನಿಲ್ಲಿಸಿ ಮರ್ಮಾಂಗ ತೋರಿಸಿ ಪರಾರಿ ಆಗ್ತಾನೆ. ಕಾಮುಕನ ಕೃತ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿಯರು ವಿ.ವಿ.ಪುರಂ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಕಾಮುಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಫ್ಯಾಮಿಲಿ ಜೊತೆ ಹೋಗ್ತಿದ್ದ ಮಹಿಳೆಗೆ ಪುಂಡರಿಂದ ಕಿರಿಕಿರಿ

ಇನ್ನು ನಾಗರಭಾವಿ ಔಟರ್ ರಿಂಗ್ ರೋಡ್ ಬಳಿ ಫ್ಯಾಮಿಲಿ ಜೊತೆ ಕಾರಿನಲ್ಲಿ ಹೋಗ್ತಿದ್ದ ಮಹಿಳೆಗೆ ಕೆಲ ಪುಂಡರು ವ್ಹೀಲಿಂಗ್ ಮಾಡಿ ಭಯ ಪಡಿಸಿ ಪುಂಡಾಟ ಮೆರೆದಿದ್ದಾರೆ. ನಿನ್ನೆ ರಾತ್ರಿ 11.40ರ ಸುಮಾರಿಗೆ ನೀತು ಬಳೆಗಾರ್ ಎಂಬ ಮಹಿಳೆ ತನ್ನ ಕುಟುಂಬಸ್ಥರ ಜೊತೆ ಕಾರಿನಲ್ಲಿ ಹೋಗ್ತಿದ್ದರು. ಈ ವೇಳೆ ಕೆಲ ಪುಂಡರು ನಂಬರ್ ಪ್ಲೇಟ್ ಇಲ್ಲದ ಡ್ಯೂಕ್ ಬೈಕ್ ನಲ್ಲಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಹಿಳೆಯನ್ನ ನಿಂದಿಸಿದ್ದಾರೆ. ಸದ್ಯ ನೀತು ಅವರು ಈ ಘಟನೆ ಸಂಬಂಧ ಪುಂಡರ ಫೋಟೋ ಸಮೇತ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗೆ ಸೇಫ್ಟಿ ಇಲ್ಲ. ದಯ ಮಾಡಿ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ನೀತು ಅವರು ಎಕ್ಸ್ ಖಾತೆ ಮೂಲಕ ದೂರು ನೀಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಬಳಿ ಘಾಟ್ ರಸ್ತೆಯಲ್ಲಿ ಕುಡುನೊಬ್ಬನ ಹುಚ್ಚಾಟ, ಮಳೆಯಲ್ಲಿ ವಾಹನ ಸವಾರರಿಗೆ ತೊಂದರೆ

ಬೆಂಗಳೂರಿನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯ ಹತ್ಯೆ

ಬೆಂಗಳೂರಿನ ಕೊತ್ತನೂರು ಸಮುದಾಯ ಭವನದ ಬಳಿ ಭೀಕರ ಹತ್ಯೆ ನಡೆದಿದೆ. ಕುಡಿದ ಅಮಲಿನಲ್ಲಿ ಸ್ನೇಹಿತರೆ ವ್ಯಕ್ತಿಯ ಹತ್ಯೆ ಮಾಡಿದ್ದಾರೆ. ನೇಪಾಳ ಮೂಲದ ಬಾಲಾಜಿ ಹತ್ಯೆಯಾದವ. ಬಾಲಾಜಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿ ಸ್ನೇಹಿತರ ಜೊತೆ ತೆರಳಿದ್ದು ಕೊಲೆಯಾಗಿದ್ದಾರೆ. ಆರೋಪಿಗಳು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರಿನ ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ದಿಯಾ ಮಂಡೋಲ್ ಎಂಬ ನರ್ಸಿಂಗ್ ವಿದ್ಯಾರ್ಥಿನಿ ಹಾಸ್ಟೆಲ್​ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಶ್ಚಿಮ ಬಂಗಾಳ‌ ಮೂಲದ ದಿಯಾ ಕೌಟುಂಬಿಕ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 3 ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:29 pm, Mon, 8 July 24