Bangalore Rain: ಬೆಂಗಳೂರಿನಲ್ಲಿ ಭಾರೀ ಮಳೆ: ಅಂಡರ್​ಪಾಸ್​ನಲ್ಲಿ ಮುಳುಗಿದ ಕಾರು, ಓರ್ವ ಮಹಿಳೆ ಸ್ಥಿತಿ ಗಂಭೀರ, ಸ್ಥಳಕ್ಕೆ ಸಿಎಂ ಭೇಟಿ

ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಕೆಆರ್​ಸರ್ಕಲ್​ ಬಳಿಯ ಅಂಡರ್​ಪಾಸ್​ನಲ್ಲಿ ಕಾರು ಮುಳುಗಡೆಯಾಗಿ ಅವಾಂತರವೇ ಸೃಷ್ಟಿಯಾಗಿದೆ.

Bangalore Rain: ಬೆಂಗಳೂರಿನಲ್ಲಿ ಭಾರೀ ಮಳೆ: ಅಂಡರ್​ಪಾಸ್​ನಲ್ಲಿ ಮುಳುಗಿದ ಕಾರು, ಓರ್ವ ಮಹಿಳೆ ಸ್ಥಿತಿ ಗಂಭೀರ, ಸ್ಥಳಕ್ಕೆ ಸಿಎಂ ಭೇಟಿ
ಕೆಆರ್​ ಸರ್ಕಲ್​ ಅಂಡರ್​ಪಾಸ್​ನಲ್ಲಿ ನೀರಿನಲ್ಲಿ ಮುಳುಗಿದ ಕಾರು, ಪ್ರಯಾಣಿಕರ ರಕ್ಷಣೆ, ಓರ್ವ ಮಹಿಳೆಯ ಸ್ಥಿತಿ ಗಂಭೀರ
Rakesh Nayak Manchi

Updated on: May 21, 2023 | 5:31 PM

ಬೆಂಗಳೂರು: ಮಹಾನಗರದ ಹಲವೆಡೆ ಧಾರಾಕಾರ ಮಳೆಯಾಗಿದ್ದು (Bangalore Rain), ಕೆ.ಆರ್​.ಸರ್ಕಲ್​ನ (KR Circle) ಅಂಡರ್​ಪಾಸ್​ನಲ್ಲಿ ಕಾರು ಮುಳುಗಡೆಯಾಗಿ ಅವಾಂತರವೇ ಸೃಷ್ಟಿಯಾಗಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯ ಆರಂಭಿಸಿ ಸದ್ಯ ಕಾರಿನಲ್ಲಿದ್ದ ಎಲ್ಲರನ್ನು ರಕ್ಷಣೆ ಮಾಡಲಾಗಿದ್ದು, ಓರ್ವ ಮಹಿಳೆ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರತೆಗೆದಿದ್ದಾರೆ.

ಭಾನುವಾರ ರಜಾ ದಿನ ಹಿನ್ನೆಲೆ ಕಬ್ಬನ್ ಪಾರ್ಕ್ ನೋಡಲು ಹೈದರಾಬಾದ್​​​ನಿಂದ ಆರು ಮಂದಿ ಕಾರಿನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಪಾರ್ಕ್ ವೀಕ್ಷಣೆ ವೇಳೆ ಮಳೆ ಆರಂಭವಾದ ಹಿನ್ನೆಲೆ ಮಳೆ ವಾಪಸ್ ಆಗುತ್ತಿದ್ದರು. ಈ ವೇಳೆ ಕೆಆರ್ ಸರ್ಕಲ್​ ಬಳಿ ಭಾರೀ ಮಳೆಗೆ ಅಂಡರ್​ಪಾಸ್​ನಲ್ಲಿ ನೀರು ತುಂಬಿತ್ತು. ಆದರೆ ಅಂಡರ್​ಪಾಸ್​ನ ಮಟ್ಟ ತಿಳಿಯದೇ ಕಾರು ಚಾಲಕ ನೀರಿನಲ್ಲಿ ಚಲಾಯಿಸಿದ್ದು, ಮಧ್ಯ ಭಾಗಗಕ್ಕೆ ತಲುಪುತ್ತಿದ್ದಂತೆ ಕಾರು ಮುಳುಗಡೆಯಾಗಿದೆ. ಚಾಲಕ ಕಾರನ್ನು ಹಿಂದಕ್ಕೆ ಕೊಂಡೊಯ್ಯಲು ಯತ್ನಿಸಿದರೂ ಸಾಧ್ಯವಾಗದೆ ಕಾರು ಮುಳುಗಡೆಯಾಗಿದೆ.

ಇದನ್ನೂ ಓದಿ: ಕೆಆರ್​.ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಮುಳುಗಿದ ಕಾರು, ಮಹಿಳೆಯನ್ನ ರಕ್ಷಿಸಿದ್ದೇ ರೋಚಕ

ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಕ್ಕೆ ದಾವಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ದೌಡಾಯಿಸಿ ಹರಸಾಹಸಪಟ್ಟು ಆರು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಈಕೆಯನ್ನು ಮಾರ್ಥಾಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ಸಿಬ್ಬಂದಿ ಆರಂಭದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಸುಮಾರು ಅರ್ಧಗಂಟೆಗಳ ಕಾಲ ಹೊರಗೇ ಇರಿಸಲಾಗಿತ್ತು. ಪತ್ರಕರ್ತರು ಹಾಗೂ ಸ್ಥಳೀಯರ ತರಾಟೆ ನಂತರ ಚಿಕಿತ್ಸೆ ನೀಡಲು ಆರಂಭಿಸಿದ್ದಾರೆ.

ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳ ವೀಕ್ಷಣೆ ನಡೆಸಿದ್ದಾರೆ. ನಂತರ ಆಸ್ಪತ್ರೆಗೆ ಭೇಟಿ ನೀಡಿದ ಸಿದ್ದರಾಮಯ್ಯ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಇನ್ನೊಂದೆಡೆ, ಭಾರೀ ಮಳೆಗೆ ಅವಾಂತರ ಸೃಷ್ಟಿಯಾದ ಹಿನ್ನಲೆ ಸಿದ್ದರಾಮಯ್ಯ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ಅವರಿಗೆ ಕರೆ ಮಾಡಿದ್ದಾರೆ. ಮಳೆಯ ಪರಿಸ್ಥಿತಿ ಅವಲೋಕಿಸಿ ಫೀಲ್ಡ್‌ಗೆ ಇಳಿಯಲು ಸೂಚನೆ ನೀಡಿದ್ದಾರೆ.

ಅಂಡರ್​ಪಾಸ್​​ ನೀರಿನಲ್ಲಿ ಸಿಲುಕಿದ ಆಟೋ

ಕಾರು ಮುಳುಗಿದ್ದ ಕೆ.ಆರ್​.ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಎರಡು ಆಟೋಗಳು ಕೂಡ ಮುಳುಗಡೆಯಾಗಿವೆ. ಈ ಪೈಕಿ ಒಂದು ಆಟೋವನ್ನು ಹೊರತೆಗೆಯಲಾಗಿದೆ. ಮತ್ತೊಂದು ಆಟೋವನ್ನು ಹೊರತೆಗೆಯುವ ಪ್ರಯತ್ನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Sun, 21 May 23

Loading...
Unable to load recommendations.
Follow Us