AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಲಹಂಕದತ್ತ ಬಿಬಿಎಂಪಿ ಜೆಸಿಬಿ: ಇಂದೂ ಮುಂದುವರಿಯಲಿದೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

ಕೆರೆಗಳು ಹಾಗೂ ಮಳೆ ನೀರು ಹರಿಸುವ ರಾಜಕಾಲುವೆಗಳ ಒತ್ತುವರಿಯಿಂದಾಗಿ ಸ್ವಲ್ಪ ಮಳೆ ಬಂದರೂ ಮಳೆ ನೀರು ರಸ್ತೆಗೆ, ಮನೆಗಳಿಗೆ ನುಗ್ಗುತ್ತಿತ್ತು.

ಯಲಹಂಕದತ್ತ ಬಿಬಿಎಂಪಿ ಜೆಸಿಬಿ: ಇಂದೂ ಮುಂದುವರಿಯಲಿದೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ
ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್​ಮೆಂಟ್​ಗೆ ಮಳೆ ನೀರು ನುಗ್ಗಿತ್ತು (ಸಂಗ್ರಹ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 13, 2022 | 9:58 AM

Share

ಬೆಂಗಳೂರು: ನಗರದಲ್ಲಿ ಇಂದೂ ಸಹ ರಾಜಕಾಲುವೆ (Rajakaluve) ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಮಹದೇವಪುರ, ಯಲಹಂಕ (Yelahanka), ಪಾಪಯ್ಯರೆಡ್ಡಿ ಬಡಾವಣೆ, ಶಾಂತಿನಿಕೇತನ ಲೇಔಟ್​​ನಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿರುವ ಕಟ್ಟಡಗಳನ್ನು ಬಿಬಿಎಂಪಿ ಜೆಸಿಬಿಗಳು ತೆರವುಗೊಳಿಸಲಿವೆ. ತುಸುವೇ ಮಳೆ ಬಂದರೂ ಯಲಹಂಕದ ಅಂಡರ್​ ಪಾಸ್ ಜಲಾವೃತವಾಗುವುದು ಮತ್ತು ಅಲ್ಲಾಳಸಂದ್ರದ ಸಮೀಪ ರಸ್ತೆಯ ಮೇಲೆ ನೀರು ಹರಿಯುವುದು ಸಾಮಾನ್ಯ ಸಂಗತಿ ಎನಿಸಿತ್ತು. ಕೆರೆಗಳು ಹಾಗೂ ಮಳೆ ನೀರು ಹರಿಸುವ ರಾಜಕಾಲುವೆಗಳ ಒತ್ತುವರಿಯೇ ಇದಕ್ಕೆ ಕಾರಣ ಎಂದು ಜನರು ದೂರಿದ್ದರು. ಬಿಬಿಎಂಪಿಯ ಯಲಹಂಕ ವಲಯದ ಎಂಜಿನಿಯರ್​ಗಳು ಸಹ ಮಳೆಯಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದರು.

ಬೆಂಗಳೂರಿನ ಉತ್ತರಕ್ಕಿರುವ ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಕೃಷಿ ಭೂಮಿ ಹಾಗೂ ಹಸಿರುವ ವಲಯಗಳಲ್ಲಿಯೂ ಕಟ್ಟಡಗಳು ನಿರ್ಮಾಣಗೊಂಡಿವೆ. ಹಿಂದೂಪುರ ಮತ್ತು ಹೈದರಾಬಾದ್​ಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಯಲಹಂಕದಲ್ಲಿ ಸಂಧಿಸುತ್ತವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಒಂದು ಸಣ್ಣ ಮಳೆ ಬಂದರೂ ರಸ್ತೆಯ ಮೇಲೆ ನೀರು ಹರಿಯುವುದು, ಬಡಾವಣೆಗಳಿಗೆ ನೀರು ನುಗ್ಗುವುದು ಸಾಮಾನ್ಯ ಸಂಗತಿ ಎನಿಸಿದೆ. ಅಂಥ ಸಂದರ್ಭದಲ್ಲಿ ಮಾತ್ರ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕಣ್ಣೊರೆಸುವ ಮಾತನಾಡುತ್ತಿದ್ದರು.

ಯಲಹಂಕ ವಲಯದ ಯಲಹಂಕ, ಜಕ್ಕೂರು, ಅಲ್ಲಾಳಸಂದ್ರ, ಕೋಗಿಲು, ಅಟ್ಟೂರು, ಸಿಂಗಾಪುರ, ದೊಡ್ಡಬೊಮ್ಮಸಂದ್ರ, ಹೆಬ್ಬಾಳ, ನವನಗರ, ರಾಚೇನಹಳ್ಳಿ ಸೇರಿದಂತೆ ಸುಮಾರು 30 ಕೆರೆಗಳು ಒತ್ತುವರಿಯಾಗಿವೆ. ರಾಜಕಾಲುವೆಗಳು ಸಂಪೂರ್ಣ ಮಾಯವಾಗಿವೆ. ರಿಯಲ್ ಎಸ್ಟೇಟ್ ಕುಳಗಳೊಂದಿಗೆ ರಾಜಕಾರಿಣಿಗಳು ಶಾಮೀಲಾಗಿ ಕೆರೆ ನುಂಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇದೀಗ ಬಿಬಿಎಂಪಿ ಯಲಹಂಕ ವಲಯದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಮುಂದಾಗಿರುವುದು ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

Published On - 9:36 am, Tue, 13 September 22