AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ರೌಡಿಶೀಟರ್​​ ಅಟ್ಟಹಾಸಕ್ಕೆ ಅಮಾಯಕ ಬಲಿ: ಚಿಕಿತ್ಸೆಗೆ ಹಣವಿಲ್ಲದೇ ನರಳಿ ನರಳಿ ಪ್ರಾಣಬಿಟ್ಟ

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಾಲ್ವರು ರೌಡಿಗಳು ಕುಡಿದ ಮತ್ತಿನಲ್ಲಿ ಅಮಾಯಕ ಪ್ರೇಮ್ ಎಂಬುವರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ರೌಡಿಶೀಟರ್‌ಗಳಾದ ವಿಶಾಲ್, ಪುನೀತ್, ಹೇಮಂತ್‌ರನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಎಂಬ ರೌಡಿಶೀಟರ್‌ಗಾಗಿ ಹುಡುಕಾಟ ನಡೆಯುತ್ತಿದೆ. ಈ ಘಟನೆಯಿಂದ ಪೀಣ್ಯ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ರೌಡಿಶೀಟರ್​​ ಅಟ್ಟಹಾಸಕ್ಕೆ ಅಮಾಯಕ ಬಲಿ: ಚಿಕಿತ್ಸೆಗೆ ಹಣವಿಲ್ಲದೇ ನರಳಿ ನರಳಿ ಪ್ರಾಣಬಿಟ್ಟ
ಕೊಲೆಯಾದ ಪ್ರೇಮ್
ವಿವೇಕ ಬಿರಾದಾರ
|

Updated on:Aug 04, 2025 | 10:40 PM

Share

ಬೆಂಗಳೂರು, ಆಗಸ್ಟ್​ 04: ಕುಡಿದ ಅಮಲಿನಲ್ಲಿದ್ದ ನಾಲ್ವರು ರೌಡಿಗಳು ಡ್ಯಾಗರ್​ನಿಂದ ಇರಿದು ಅಮಾಯಕನನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಪೀಣ್ಯ (Peenya) ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ವಿಶಾಲ್, ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ನವೀನ್, ಹೇಮಂತ್, ಪುನೀತ್​ ಕುಡಿದು ಬಂದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಗಾರ್ಮೆಂಟ್ಸ್ ಬಳಿ ಗಲಾಟೆ ಮಾಡುತ್ತಿದ್ದರು. ರೌಡಿಗಳು ಕುಡಿದ ಅಮಲಿನಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದರು.

ಈ ವೇಳೆ ಸ್ನೇಹಿತರ ಜೊತೆ ಹೋಗುತ್ತಿದ್ದ ಪ್ರೇಮ್​ನನ್ನು ರೌಡಿಗಳ ಗ್ಯಾಂಗ್ ಅಡ್ಡಗಟ್ಟಿದೆ. ಅನಗತ್ಯವಾಗಿ ಪ್ರೇಮ್​ ಜೊತೆ ಜಗಳ ತೆಗೆದು ಆತನ ಕೈಗೆ ಡ್ಯಾಗರ್​ನಿಂದ ಇರಿದು ಹಲ್ಲೆ ಮಾಡಿದೆ. ಈ ವೇಳೆ, ಮಧ್ಯಪ್ರವೇಶಿಸಿದ ಪ್ರೇಮ್​ನ ಸ್ನೇಹಿತ ಮಾದೇಶ ಜಗಳ ಬಿಡಿಸಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪ್ರೇಮ್​ನನ್ನು ಅಡ್ಮಿಟ್​ ಮಾಡುವಂತೆ ಹೇಳಿದ್ದಾರೆ. ಆದರೆ, ಚಿಕಿತ್ಸೆಗೆ ಹಣವಿಲ್ಲವೆಂದು ಮಾದೇಶ್​ ಸ್ನೇಹಿತ ಪ್ರೇಮ್​ಗೆ ಪ್ರಥಮ ಚಿಕಿತ್ಸೆ ಕೊಡಿಸಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಮಾದೇಶ್​, ಪ್ರೇಮ್ ಕೆಲಸ ಮಾಡುತ್ತಿದ್ದ ಸರ್ವಿಸ್ ಸ್ಟೇಷನ್​ನಲ್ಲೇ ಆತನನ್ನು ಮಲಗಿಸಿ ತೆರಳಿದ್ದಾನೆ.

ಇದನ್ನೂ ಓದಿ: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿಯಿಂದ ಅಸಭ್ಯ ವರ್ತನೆ!

ಸ್ವಲ್ಪ ಸಮಯ ಬಿಟ್ಟು ಮಾದೇಶ, ಪ್ರೇಮ್​ನನ್ನು ನೋಡಲು ಬಂದಿದ್ದನು. ಅಷ್ಟರಲ್ಲಿ ತೀವ್ರ ರಕ್ತಸ್ರಾವವಾಗಿ ಪ್ರೇಮ್ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ರೌಡಿಶೀಟರ್​ಗಳಾದ ವಿಶಾಲ್, ಪುನೀತ್, ಹೇಮಂತ್​ನನ್ನು ಬಂಧಿಸಿದ್ದಾರೆ. ಮತ್ತೋರ್ವ ರೌಡಿಶೀಟರ್ ನವೀನ್​ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರೇಮ್ ಕೊಲೆ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವಿಕಾಸ್​, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 pm, Mon, 4 August 25