Bangalore Metro: ಕೆಟ್ಟು ನಿಂತ ಮೆಟ್ರೋ ರೈಲು: ಚಲ್ಲಘಟ್ಟ – ವೈಟ್‌ಫೀಲ್ಡ್ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

Namma Metro Purple Line: ಚಲ್ಲಘಟ್ಟ ಟು ವೈಟ್ ಫೀಲ್ಡ್ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಗುರುವಾರ ಬೆಳಗ್ಗೆ ಸಂಚಾರ ವ್ಯತ್ಯಯವಾಗಿದ್ದು, ಪ್ರಯಾಣಿಕರು ಸುಮಾರು ಹೊತ್ತು ಕಾಯುವಂತಾಯಿತು. ಸುಮಾರು 1 ಗಂಟೆಗೂ ಹೆಚ್ಚು ಕಾಲ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ವಿವಿಧ ಕೆಲಸ ಕಾರ್ಯಗಳಿಗೆ ಹೊರಟಿದ್ದವರು, ಕಚೇರಿಗಳಿಗೆ ಹೊರಟಿದ್ದವರು ತಡವಾಗಿ ಹೋಗುವಂತಾಗಿದೆ.

Bangalore Metro: ಕೆಟ್ಟು ನಿಂತ ಮೆಟ್ರೋ ರೈಲು: ಚಲ್ಲಘಟ್ಟ - ವೈಟ್‌ಫೀಲ್ಡ್ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ನಮ್ಮ ಮೆಟ್ರೋ ನೇರಳೆ ಮಾರ್ಗ (ಸಂಗ್ರಹ ಚಿತ್ರ)

Updated on: Oct 30, 2025 | 10:08 AM

ಬೆಂಗಳೂರು, ಅಕ್ಟೋಬರ್ 30: ಮೆಟ್ರೋ ರೈಲೊಂದು ಕೆಟ್ಟು ನಿಂತ ಕಾರಣ ನಮ್ಮ ಮೆಟ್ರೋದ (Namma Metro) ಚಲ್ಲಘಟ್ಟದಿಂದ ವೈಟ್ ಫೀಲ್ಡ್​​ಗೆ ಸಂಚರಿಸುವ ನೇರಳೆ ಮಾರ್ಗದಲ್ಲಿ ಗುರುವಾರ ಬೆಳಗ್ಗೆ ಸಂಚಾರ ವ್ಯತ್ಯಯವಾಗಿದೆ. ಚಲ್ಲಘಟ್ಟದಿಂದ ಹಾಗೂ ವೈಟ್​ಫೀಲ್ಡ್​​ನಿಂದ ಹೊರಟ ಮೆಟ್ರೋ ರೈಲುಗಳು ಎಲ್ಲೆಲ್ಲಿ ಇವೆಯೋ ಆ ನಿಲ್ದಾಣಗಳಲ್ಲಿಯೇ ಸುಮಾರು 10 ನಿಮಿಷಗಳಿಗೂ ಹೆಚ್ಚು ಸಮಯ ನಿಲ್ಲುವಂತಾಯಿತು. ಮೆಟ್ರೋ ರೈಲು ಸುಮಾರು 10 ನಿಮಿಷಗಳಿಂದಲೂ ನಿಲ್ದಾಣದಲ್ಲಿಯೇ ನಿಂತಿದ್ದು, ಆನಂತರ ಪ್ರಯಾಣ ಆರಂಭಿಸಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಮೆಟ್ರೋ ರೈಲು ಮುಂದಕ್ಕೆ ಚಲಿಸದೆ ಇರುವ ಬಗ್ಗೆ ಸ್ಥಳದಲ್ಲಿರುವ ಸಿಬ್ಬಂದಿ ಕಾರಣ ನೀಡಿಲ್ಲ. ಆದರೆ, ನಂತರ ಬಿಎಂಆರ್​ಸಿಎಲ್ (BMRCL) ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

‘ವಿಳಂಬಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ಮಾಹಿತಿ ಸಿಕ್ಕ ತಕ್ಷಣ ನಿಮಗೆ ತಿಳಿಸುತ್ತೇವೆ’ ಎಂದು ಮೆಟ್ರೋ ರೈಲಿನಲ್ಲಿ ಅನೌನ್ಸ್ ಮಾಡಲಾಗಿದೆ. ಸದ್ಯ ಮೆಟ್ರೋ ರೈಲು ಸಂಚಾರ ಶುರುವಾಗಿದ್ದು, ವಿಳಂಬವಾಗಿ ಸಂಚರಿಸುತ್ತಿದೆ.

ಮೆಟ್ರೋ ರೈಲು ಸಂಚಾರ ವ್ಯತ್ಯಯಕ್ಕೆ ಕಾರಣವೇನು? ಬಿಎಂಆರ್​​ಸಿಎಲ್ ಹೇಳಿದ್ದೇನು?

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣ ರೈಲು ಸಂಚಾರ ವಿಳಂಬವಾಗಿದೆ. ಬೆಳಗ್ಗೆ 8.50ರಿಂದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಈ ಬಗ್ಗೆ ಬಿಎಂಆರ್​ಸಿಎಲ್ ಅಧಿಕಾರಿಗಳು ‘ಟಿವಿ9’ಗೆ ಮಾಹಿತಿ ನೀಡಿದ್ದು, ಚಲ್ಲಘಟ್ಟ-ವೈಟ್ ಫೀಲ್ಡ್ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿದೆ. ವಿಜಯನಗರ -ಹೊಸಹಳ್ಳಿ ನಿಲ್ದಾಣಗಳ ನಡುವೆ ವ್ಯತ್ಯಯವಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ರೈಲೊಂದು ಕೆಟ್ಟು ನಿಂತಿದ್ದೇ ಇದಕ್ಕೆ ಕಾರಣ. ಕೆಟ್ಟುನಿಂತ ರೈಲನ್ನು ಚಲ್ಲಘಟ್ಟ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ. ಆನಂತರ ಮೆಟ್ರೋ ರೈಲು ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಪೀಕ್ ಅವರ್​​ನಲ್ಲಿ ಸಮಸ್ಯೆಯಿಂದ ಮೆಟ್ರೋ ಪ್ರಯಾಣಿಕರ ಪರದಾಟ

ಪೀಕ್ ಅವರ್​​ನಲ್ಲೇ ಮೆಟ್ರೋ ಸಂಚಾರ ವ್ಯತ್ಯಯವಾಗಿದ್ದರಿಂದ ಪ್ರಯಾಣಿಕರು ಪರದಾಟ ಪಡುವಂತಾಯಿತು. ಕೆಲವು ಪ್ರಯಾಣಿಕರು ಮೆಟ್ರೋದಿಂದ ಅರ್ಧದಲ್ಲೇ ಇಳಿದು ಹೊರ ಹೋದರೂ ಕ್ಯಾಬ್ ಸಿಗದೆ ಪರದಾಡಿದರು. ಸದ್ಯ ಮೆಟ್ರೋ ಸಂಚಾರ ಆರಂಭವಾಗಿದ್ದರೂ ಒಂದು ತಾಸಿನಿಂದ ಕಾಯುತ್ತಿದ್ದವರು ಏಕಾಏಕಿ ನಿಲ್ದಾಣಗಳಿಗೆ ಮುಗಿಬೀಳುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಭರ್ಜರಿ ಬೇಟೆ: ಕಳವಾಗಿದ್ದ 3 ಕೋಟಿ ರೂ. ಮೌಲ್ಯದ 1949 ಮೊಬೈಲ್ ವಶಕ್ಕೆ

ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಸದ್ಯ ನೇರಳೆ ಮಾರ್ಗದ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಒಳಬಿಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 am, Thu, 30 October 25