ಬೆಂಗ​ಳೂರು-ಮೈಸೂರು ಹೆದ್ದಾರಿ ಟೋಲ್‌ ಸಂಗ್ರಹ: ಕಾಂಗ್ರೆಸ್, ಕನ್ನಡ ಸಂಘಟನೆಗಳಿಂದ ಪ್ರತಿಭಟನೆ, ಸ್ಥಳದಲ್ಲಿ ಬಿಗುವಿನ ವಾತಾವರಣ

|

Updated on: Mar 14, 2023 | 9:39 AM

ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ. ಆದ್ರೆ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಟೋಲ್ ಗೇಟ್ ಮುರಿದು ಕನ್ನಡಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

ರಾಮನಗರ: ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಸುವ ಮೂಲಕ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ(Bengaluru Mysuru Expressway) ನಲ್ಲಿ ಟೋಲ್ ಸಂಗ್ರಹ ಆರಂಭವಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದ್ರೆ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಟೋಲ್ ಗೇಟ್ ಮುರಿದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯುತ್ತಿದೆ. ಹಾಲಿನ ಕ್ಯಾನ್​ ಹಿಡಿದು, ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಗಿದೆ. ಪೊಲೀಸರು, ಕಾಂಗ್ರೆಸ್​​​ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಗಿದ್ದು ಕಾಂಗ್ರೆಸ್​​ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಟ್ರಾಫಿಕ್​ ಜಾಮ್​​ ಉಂಟಾಗಿದೆ. ಪ್ರತಿಭಟನಾನಿರತ ಕಾಂಗ್ರೆಸ್​ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ಬಸ್​ಗಳಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ. ಸ್ಥಳದಲ್ಲಿ ರಾಮನಗರ ಡಿವೈಎಸ್​​ಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Bengaluru-Mysuru Expressway:ಇಂದಿನಿಂದಲೇ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಟೋಲ್​ ಶುರು, ಎಷ್ಟು ಹಣ ಪಾವತಿಸಬೇಕು?

ಟೋಲ್ ಪೋಲ್ ಮುರಿದ ಕನ್ನಡ ಸಂಘಟನೆ ಸದಸ್ಯ

ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಕೆ ಬಳಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವೇಳೆ ಟೋಲ್ ಪ್ಲಾಜಾ ಕಂಬಿ ಮುರಿದು ಕನ್ನಡಪರ ಸಂಘಟನೆ ಸದಸ್ಯ ಆಕ್ರೋಶ ಹೊರ ಹಾಕಿದ್ದಾರೆ. ಟೋಲ್ ಕಂಬಿ ಮುರಿದ ಸದಸ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಣಮಿಣಿಕೆ ಬಳಿಯ ಟೋಲ್ ಪ್ಲಾಜಾ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಟೋಲ್‌ ಬಳಿ ಪೊಲೀಸ್ ಬಿಗಿ ಬಂದೋಬಸ್ತ್

ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಕೆ ಬಳಿಯ ಟೋಲ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 3 ಕೆಎಸ್​ಆರ್​ಪಿ ತುಕಡಿ, ಸ್ಥಳೀಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ 200‌ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಸಿದ್ಧತೆಯಿಲ್ಲದೇ ಟೋಲ್ ಸಂಗ್ರಹ, ಟೆಕ್ನಿಕಲ್ ಸಮಸ್ಯೆಯಿಂದ ವಾಹನ ಸವಾರರ ಪರದಾಟ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಟೆಕ್ನಿಕಲ್ ಎರರ್ ಆಗುತ್ತಿದೆ. ಫಾಸ್ಟ್ಯಾಗ್ ಇದ್ರೂ ಟೋಲ್ ಪ್ಲಾಜಾ ಸ್ಕ್ಯಾನ್ ತೆಗೆದುಕೊಳ್ಳುತ್ತಿಲ್ಲ. ಸ್ಕ್ಯಾನ್ ಆಗೋದ್ರಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಟೋಲ್ ಕಂಬಿ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಸ್ಕ್ಯಾನ್ ಆಗಿ ವಾಹನ ಚಲಿಸುವಾಗಲೇ ವಾಹನದ ಮೇಲೆ ಕಂಬಿ ಬೀಳುತ್ತಿದೆ. ಹೀಗಾಗಿ ವಾಹನ ಚಾಲಕರು ಗರಂ ಆಗುತ್ತಿದ್ದಾರೆ. ಸಿದ್ಧತೆ ಮಾಡಿಕೊಳ್ಳದೇ ಯಾಕೆ ಟೋಲ್‌ ತಗೋತಿರಿ ಅಂತ ‌ಅವಾಜ್ ಹಾಕುತ್ತಿದ್ದಾರೆ.

ಯಾವುದಕ್ಕೆ ಎಷ್ಟು ಶುಲ್ಕ?

  • ಕಾರು, ಜೀಪ್​​, ವ್ಯಾನ್​ಗೆ ಏಕಮುಖ ಸಂಚಾರಕ್ಕೆ 135 ರೂ ದರ
  • ಕಾರು, ಜೀಪ್​​​, ವ್ಯಾನ್​​ಗೆ​ ಎರಡು ಕಡೆ ಸಂಚಾರಕ್ಕೆ 205 ರೂ.
  • ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ. ನಿಗದಿ
  • ಕಾರು, ಜೀಪ್​​​, ವ್ಯಾನ್​​ಗಳಿಗೆ ತಿಂಗಳ ಪಾಸ್​​ ದರ 4,425 ರೂ.
  • ಲಘು ಸರಕುವಾಹನ, ಮಿನಿ ಬಸ್​ಗಳ ಏಕಮುಖ ಸಂಚಾರಕ್ಕೆ 220 ರೂ
  • ಲಘು ಸರಕುವಾಹನ, ಮಿನಿ ಬಸ್​ಗಳ ಎರಡು ಕಡೆ ಸಂಚಾರಕ್ಕೆ 330 ರೂ
  • ಲಘು ಸರಕುವಾಹನ, ಮಿನಿ ಬಸ್​ಗಳಿಗೆ ತಿಂಗಳ ಪಾಸ್​ ದರ 7315 ರೂ
  • ಟ್ರಕ್‌/ಬಸ್‌ ಏಕಮುಖ ಸಂಚಾರಕ್ಕೆ ಟೋಲ್​ ದರ 460 ರೂ. ನಿಗದಿ
  • ಟ್ರಕ್‌/ಬಸ್‌ ಎರಡು ಕಡೆ ಸಂಚಾರಕ್ಕೆ 690 ರೂಪಾಯಿ ನಿಗದಿ
  • ಟ್ರಕ್‌/ಬಸ್​​ಗಳ ತಿಂಗಳ ಟೋಲ್ ಪಾಸ್​ ದರ 15,325 ರೂ. ನಿಗದಿ
  • 3 ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರ ₹500, ಎರಡು ಕಡೆ ₹750
  • ಅತಿ ಭಾರದ ವಾಹನಗಳು ಏಕಮುಖ ಸಂಚಾರಕ್ಕೆ 880 ರೂ. ನಿಗದಿ
  • ಅತಿ ಭಾರದ ವಾಹನಗಳು ಎರಡು ಕಡೆ ಸಂಚಾರಕ್ಕೆ ₹1315 ದರ ನಿಗದಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:47 am, Tue, 14 March 23