ರಸ್ತೆ ಜಗಳ, ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ: ನೆಟ್ಟಿಗರಿಗೆ ಭರವಸೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ

|

Updated on: Aug 19, 2023 | 7:54 PM

ಬೆಂಗಳೂರು ನಗರದ ರಸ್ತೆಗಳಲ್ಲಿ ನಡೆಯುತ್ತಿರುವ ವಾಹನ ಚಾಲಕರ ಕಿರಿಕ್, ಆಟೋ ಚಾಲಕರ ನೈತಿಕ ಪೊಲೀಸ್​ಗಿರಿ ಇತ್ಯಾದಿ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ನೆಟ್ಟಿಗರಿಗೆ ಭರವಸೆ ನೀಡಿದ್ದಾರೆ. ಟ್ವಿಟರ್​ನಲ್ಲಿ (ಎಕ್ಸ್) ನೆಟ್ಟಿಗರೊಂದಿಗಿನ ಸಂವಾದ ನಡೆಸಿದ ವೇಳೆ ಈ ಭರವಸೆ ನೀಡಿದ್ದಾರೆ.

ರಸ್ತೆ ಜಗಳ, ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ: ನೆಟ್ಟಿಗರಿಗೆ ಭರವಸೆ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ
Follow us on

ಬೆಂಗಳೂರು, ಆಗಸ್ಟ್ 19: ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ (X) ನಡೆದ ಸಂವಾದದ ವೇಳೆ ನಗರದಲ್ಲಿ ನಡೆಯುತ್ತಿರುವ ರಸ್ತೆ ಜಗಳ, ಆಟೋ ಚಾಲಕರ ನೈತಿಕ ಪೊಲೀಸ್ ಗಿರಿ ಸೇರಿದಂತೆ ಇತರೆ ಘಟನೆ ಬಗ್ಗೆ ನೆಟ್ಟಿಗರು ನಗರ (Bengaluru) ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

“ಇಂತಹ ಘಟನೆಗಳು ನಡೆದಾಗೆಲ್ಲಾ, ಪೊಲೀಸರು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ ಮತ್ತು ಅಪರಾಧಿಗಳನ್ನು ಬಂಧಿಸಿದ್ದಾರೆ” ಎಂದು ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ. ಗೂಂಡಾಗಳ ಮೇಲೆ ನಿಗಾ ಇಡಲು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟ್‌ಗಳನ್ನು ತೆರೆಯಲಾಗುತ್ತಿದೆ. ರಸ್ತೆಗಳ ಮಧ್ಯೆ ವಾಹನ ಸವಾರರು ಅಥವಾ ಸಾರ್ಜವನಿಕರು ಜಗಳ ಮಾಡುತ್ತಿದ್ದರೆ ಕೂಡಲೇ Namma112 ಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.

ಇತ್ತೀಚಿನ ವಾರಗಳಲ್ಲಿ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ರಸ್ತೆ ನಡುವೆ ಜಗಳ ನಡೆಯುವ ಹಲವಾರು ಘಟನೆಗಳು ವರದಿಯಾಗಿವೆ. ಟ್ವಿಟರ್ ಖಾತೆ ಥರ್ಡ್‌ಐನಲ್ಲಿ ಬೆಂಗಳೂರಿನಲ್ಲಿ ಇಂತಹ ಘಟನೆಗಳ ಬಗ್ಗೆ ನಿರಂತರವಾಗಿ ಸಾಕ್ಷಿಗಳ ಸಹಿತ ವರದಿ ಮಾಡುತ್ತಿದೆ.

ಕಳೆದ ವಾರ, ನೆಟ್ಟಿಗರೊಬ್ಬರ ಟ್ವೀಟ್​ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ದಯಾನಂದ, “ರಸ್ತೆ ಜಗಳ ಅಥವಾ ಸುಲಿಗೆ ಪ್ರಕರಣಗಳಲ್ಲಿ ತೊಡಗಿರುವ ವ್ಯಕ್ತಿಗಳ ಮೇಲೆ ರೌಡಿ ಶೀಟ್ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೆಲವು ಆಟೋರಿಕ್ಷಾ ಚಾಲಕರು ನಡೆಸುತ್ತಿರುವ ನೈತಿಕ ಪೊಲೀಸ್‌ಗಿರಿಯ ಬಗ್ಗೆ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಯಾನಂದ, ಇಂತಹ ನೈತಿಕ ಪೊಲೀಸ್‌ಗಿರಿಗೆ ಕಾನೂನು ಅವಕಾಶ ನೀಡುವುದಿಲ್ಲ. ಇಂತಹ ಘಟನೆ ನಡೆದರೆ ಕೂಡಲೇ ಪೊಲೀಸರಿಗೆ ದೂರು ನೀಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: 8 ವರ್ಷಗಳ ಹಿಂದೆ ನೈಲ್ ಕಟ್ಟರ್​​ ನುಂಗಿದ್ದ ವ್ಯಕ್ತಿ; ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಬೆಂಗಳೂರು ವೈದ್ಯರು

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿ ಅವರಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು. ನಕಲಿ ಸುದ್ದಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳ ಕುರಿತು ನೆಟ್ಟಿಗರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಚೋದನಕಾರಿ ಅಥವಾ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸುದ್ದಿ ಬಗ್ಗೆ ನಿಮಗೆ ಸಂದೇಹವಿದ್ದರೆ kspfactcheck ಗೆ ಕಳುಹಿಸಿ ಎಂದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಫುಟ್‌ಪಾತ್‌ ಅತಿಕ್ರಮಣದ ಕುರಿತು ಕಾರ್ತಿಕ್‌ ಎಂಬವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಫುಟ್‌ಪಾತ್ ಅತಿಕ್ರಮಣವು ಪಾದಚಾರಿಗಳ ಸುಗಮ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಅತಿಕ್ರಮಣಗಳನ್ನು ತೆಗೆದುಹಾಕಲು ನಿಯಮಿತವಾಗಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದೇವೆ. ಎಲ್ಲಾ ಮಧ್ಯಸ್ಥಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಕವಿತಾ ರೆಡ್ಡಿ ಎಂಬವರು ಕೌಟುಂಬಿಕ ಕಲಹದ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಯಾವಾಗಲೂ ಪತಿಯೊಂದಿಗೆ ಹೊಂದಾಣಿಕೆ ಅಥವಾ ರಾಜಿ ಮಾಡಿಕೊಳ್ಳಲು ಮಹಿಳೆಗೆ ಹೇಳಲು ಪ್ರಯತ್ನಿಸುತ್ತಾರೆ, ಕೌಟುಂಬಿಕ ಹಿಂಸೆಯನ್ನು ಏಕೆ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು ಪೊಲೀಸರನ್ನು ಸಂಪರ್ಕಿಸಿದಾಗ, ನಾವು ಸಾಮಾನ್ಯವಾಗಿ ಮೊದಲ ಹಂತವಾಗಿ ತರಬೇತಿ ಪಡೆದ ಸಲಹೆಗಾರರೊಂದಿಗೆ ಸಂವಹನ ನಡೆಸುವಂತೆ ಸಲಹೆ ನೀಡುತ್ತೇವೆ. ಕೌನ್ಸೆಲಿಂಗ್ ವಿಫಲವಾದಾಗ ಮಾತ್ರ, ನಾವು ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೇವೆ. ಇದು ಪೊಲೀಸರ ಕೆಲಸ. ಅಂತಹ ಪ್ರಕರಣಗಳನ್ನು ತನಿಖೆ ಮಾಡಲು ಮತ್ತು ಮಹಿಳೆಯರನ್ನು ಘನತೆಯಿಂದ ನಡೆಸಿಕೊಳ್ಳಲು ನಮ್ಮಲ್ಲಿ ಸಾಕಷ್ಟು ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ