ಕಾವೇರಿ ವಿವಾದ: ಸುಪ್ರೀಂ ಕೋರ್ಟ್ಗೆ ತಮಿಳುನಾಡು ಅರ್ಜಿ ಸಂಬಂಧ ಕರ್ನಾಟಕದಿಂದ ಪ್ರತ್ಯುತ್ತರ ಸಲ್ಲಿಕೆ
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ಸಂಬಂಧ Cauvery Dispute: ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ಗೆ ಸುದೀರ್ಘ ಪ್ರತ್ಯುತ್ತರ ಸಲ್ಲಿಕೆ ಮಾಡಿದೆ. ರಾಜ್ಯದಲ್ಲಿ 'ಎಲ್ ನಿನೋ' ಪರಿಣಾಮದಿಂದಾಗಿ ಭೀಕರ ಮಳೆ ಕೊರತೆ ಎದುರಾಗಿದ್ದರೂ ಸಿಡಬ್ಲ್ಯೂಎಂಎ (CWMA) ಶಿಫಾರಸಿಗಿಂತ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ.

ಮುಖ್ಯಾಂಶಗಳು
- ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ಜಲ ವಿವಾದ
- ಕಾವೇರಿ ನೀರು ಹರಿಸುವಂತೆ ಕೋರಿ ತಮಿಳುನಾಡು ಅರ್ಜಿ
- ಸುಪ್ರೀಂ ಕೋರ್ಟ್ಗೆ ಕರ್ನಾಟಕದಿಂದ ಪ್ರತ್ಯುತ್ತರ ಸಲ್ಲಿಕೆ
ನವದೆಹಲಿ, ಆಗಸ್ಟ್ 12: ಕಾವೇರಿ ನೀರು ಹರಿಸುವಂತೆ ಸೂಚಿಸಲು ಕೋರಿ ಸುಪ್ರೀಂ ಕೋರ್ಟ್ಗೆ ತಮಿಳುನಾಡು ಅರ್ಜಿ ಸಂಬಂಧ ನಾಳೆ ವಿಚಾರಣೆ ಹಿನ್ನೆಲೆ ಅರ್ಜಿಗೆ ಕರ್ನಾಟಕದ ವಕೀಲರ ತಂಡದಿಂದ ಪ್ರತ್ಯುತ್ತರ ಸಲ್ಲಿಕೆ ಮಾಡಲಾಗಿದೆ. ಈ ವರ್ಷ ಎಲ್ ನಿನೋ ಪರಿಣಾಮದಿಂದಾಗಿ ಸಂಕಷ್ಟ ಎದುರಾಗಿದ್ದು, ಕರ್ನಾಟಕದ 4 ಡ್ಯಾಂಗಳ ಒಳಹರಿವಿನಲ್ಲಿ ಶೇಕಡಾ 65.76ರಷ್ಟು ಕೊರತೆ ಉಂಟಾಗಿದೆ. ಹೀಗಿದ್ದರೂ CWMA ಶಿಫಾರಸುಗಳಿಗಿಂತ ಹೆಚ್ಚಿನ ನೀರನ್ನು ಬಿಳಿಗುಂಡ್ಲು ಬಳಿ ಬಿಡುಗಡೆ ಮಾಡಲಾಗಿದೆ. ವಯನಾಡು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಜುಲೈ 29ರಿಂದ ಆಗಸ್ಟ್ 10ರವರೆಗೆ ಜಲಾಶಯಗಳಿಂದ ಹೆಚ್ಚುವರಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
‘86,797 ಕ್ಯೂಸೆಕ್ ನೀರು ತಮಿಳುನಾಡು ತಲುಪಿದೆ’
ಜಲಾಶಯಗಳಿಂದ ಒಟ್ಟು 1,64,080 ಕ್ಯೂಸೆಕ್ ನೀರು ಹರಿದಿದ್ದು, ಬಿಳಿಗುಂಡ್ಲು ಮೂಲಕ 86,797 ಕ್ಯೂಸೆಕ್ ನೀರು ತಮಿಳುನಾಡು ತಲುಪಿದೆ. ತಮಿಳುನಾಡು ಶೇ.26.954 TMC ಸಂಕಷ್ಟದ ಕೊರತೆಯನ್ನು ಲೆಕ್ಕಹಾಕಿದೆ. ಬಿಳಿಗುಂಡ್ಲುವಿನಲ್ಲಿರುವ CWRC ಗೇಜ್ ಸ್ಟೇಷನ್ ನೀರಿನ ಹರಿವನ್ನ ದಾಖಲಿಸಿದೆ. ಗೇಜ್ ಸ್ಟೇಷನ್ ಗಂಟೆಗೊಮ್ಮೆ ನೀರಿನ ಹರಿವನ್ನು ದಾಖಲಿಸುತ್ತಿದ್ದು, ನೀರಿನ ಹರಿವನ್ನು ದಾಖಲಿಸಲು ಪ್ರತ್ಯೇಕ ಮೇಲ್ವಿಚಾರಣೆಯ ಅಗತ್ಯವಿಲ್ಲ. ಸಂಕಷ್ಟದ ವರ್ಷದಲ್ಲಿ ಪ್ರೊ-ರೇಟಾ ಪರಿಗಣಿಸದಿದ್ದರೆ ನ್ಯಾಯಸಮ್ಮತವಾಗಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ಹಿರಿಯ ವಕೀಲ ಮೋಹನ್ ವಿ.ಕಾತರಕಿ ಪ್ರತಿಕ್ರಿಯೆ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರು ವಿವಾದ: CWRC ಶಿಫಾರಸ್ಸು ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಬರೆ
’16 ಟಿಎಂಸಿ ನೀರು ಬಿಡೋದು ಕಷ್ಟ’
ಇನ್ನು ತಮಿಳುನಾಡಿಗೆ ನೀರು ಬಿಡುವುದಕ್ಕೆ CWMA ಆದೇಶ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಮೂರುವರೆ ಸಾವಿರ ಕ್ಯೂಸೆಕ್ ಬಿಡಲು ಏನು ಸಮಸ್ಯೆ ಇರಲಿಲ್ಲ. ಆದರೆ 16 ಟಿಎಂಸಿ ನೀರು ಬಿಡೋದು ಕಷ್ಟ. ಎಸಿಎಸ್, ನಮ್ಮ ವಕೀಲರು ಸಮರ್ಥವಾಗಿ ವಾದ ಮಾಡಿದ್ದರೂ ನಮಗೆ ಅನ್ಯಾಯ ಆಗಿದೆ. ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಮುಂದಿನ ತೀರ್ಮಾನ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಮಾತುಕತೆಯಾದರೆ ಒಳ್ಳೆಯದು: ಹೆಚ್ಡಿಕೆ
ಜಲ ವಿವಾದ ಸಂಬಂಧ ತಮಿಳುನಾಡು ಸರ್ಕಾರದ ಜೊತೆ ಮಾತುಕತೆಯಾದರೆ ಒಳ್ಳೆಯದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನೀರಿನ ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತಿದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ತಮಿಳುನಾಡಿಗೆ ಹೋಲಿಸಿದರೆ ರಾಜ್ಯ ಸರ್ಕಾರ ಯಾವುದೇ ತಯಾರಿ ಮಾಡಿಲ್ಲ. ಈ ವರ್ಷ ಮಳೆಯ ಕೊರತೆ ಇರುವ ಬಗ್ಗೆ ಮುಂಚೆ ಮಾಹಿತಿ ಇತ್ತು. ಮೇ ತಿಂಗಳಲ್ಲಿ CWMA, CWRC ಮೇಲೆ ತಮಿಳುನಾಡು ಒತ್ತಡ ಹಾಕಿ ತಮಿಳುನಾಡು ನೀರು ಪಡೆದಿದೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:49 pm, Wed, 12 August 26




