Bengaluru Safe City: ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಗೃಹಸಚಿವ ಅಮಿತ್ ಶಾ

|

Updated on: Mar 03, 2023 | 9:03 PM

'ನಿರ್ಭಯಾ ಯೋಜನೆ' ಅಡಿಯಲ್ಲಿ ದೇಶದಾದ್ಯಂತ ಅನೇಕ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿರುವ ಸೇಫ್ ಸಿಟಿ ಯೋಜನೆ ಇದೀಗ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ.

Bengaluru Safe City: ಸೇಫ್ ಸಿಟಿ ಯೋಜನೆಗೆ ಚಾಲನೆ ನೀಡಿದ ಕೇಂದ್ರ ಗೃಹಸಚಿವ ಅಮಿತ್ ಶಾ
ಅಮಿತ್ ಶಾ
Follow us on

ಬೆಂಗಳೂರು: ಹೊಸದಿಲ್ಲಿಯಲ್ಲಿ 2016 ರಲ್ಲಿ ನಡೆದಿದ್ದ ಭೀಕರ ಅತ್ಯಾಚಾರ ಘಟನೆಯ ನಂತರ ರಚಿಸಲಾದ ‘ನಿರ್ಭಯಾ ಯೋಜನೆ’ (Nirbhaya Project) ಅಡಿಯಲ್ಲಿ ದೇಶದಾದ್ಯಂತ ಅನೇಕ ನಗರಗಳಲ್ಲಿ ಜಾರಿಗೊಳಿಸಲಾಗುತ್ತಿರುವ ಸೇಫ್ ಸಿಟಿ ಯೋಜನೆಗೆ (Safe City Project)  ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಇಂದು (ಮಾರ್ಚ್ 3) ನಗರದ ಟೌನ್​ಹಾಲ್​ನಲ್ಲಿ ಹೊಯ್ಸಳ ಇಆರ್​ಎಸ್ಎಸ್ 112 ಫ್ಲೀಟ್, ಮೊಬೈಲ್ ಕಮಾಂಡ್, ಕಂಟ್ರೋಲ್ ಸೆಂಟರ್‌ ಒಳಗೊಂಡಿರುವ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ‌ (Basavaraj Bommai), ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ಡಿಜಿ ಐಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, 667 ಕೋಟಿ ಸೇಫ್ ಸಿಟಿ ಯೋಜನೆ ಬೆಂಗಳೂರಿನಲ್ಲಿ ಕಾರ್ಯಗತ ಆಗುತ್ತಿದೆ. 8 ನಗರಗಳಲ್ಲಿ ವೇಗವಾಗಿ ಕಾರ್ಯಗತ ಮಾಡಿರುವುದು ಬೆಂಗಳೂರು ಮಾತ್ರ. ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಚೈನ್ ಸ್ನಾಚಿಂಗ್ ಆಗುವುದನ್ನ ತಪ್ಪಿಸಬೇಕಿದೆ. ಇದಕ್ಕಾಗಿ 7,500 ಕ್ಯಾಮೆರಾ ಅಳವಡಿಸುತ್ತಿದ್ದೇವೆ. ಬಾಡಿ ಕ್ಯಾಮೆರಾ ನೀಡುತ್ತಿದ್ದೇವೆ. ಪೊಲೀಸ್ ವ್ಯವಸ್ಥೆಯನ್ನ ಕರ್ನಾಟಕದಲ್ಲಿ ಹೆಚ್ಚಿಸುವುದರ ಜೊತೆಗೆ ಪೊಲೀಸರಿಗೆ ವಸತಿ ಸೌಲಭ್ಯ ನೀಡುತ್ತಿದ್ದೇವೆ. ಸೀನ್ ಆಫ್ ಕ್ರೈಮ್ ಆಫೀಸರ್ ನೇಮಕ ಮಾಡಿ ಅಪಾರಾಧ ನಡೆದ ಕೂಡಲೇ ತಡೆಯುವ ಉದ್ದೇಶ ಇದೆ. ವಿಧಿ ವಿಜ್ಞಾನ ಪ್ರಯೋಗಾಲಯ (FSL) ಸಂಸ್ಥೆ ತಂದು ಅಪರಾಧ ತಡೆಯಲಾಗುತ್ತಿದೆ. ಎಫ್​ಎಸ್​ಎಲ್ ವಿಶ್ವವಿದ್ಯಾಲಯ ಕೂಡ ಸ್ಥಾಪಿಸುತ್ತೇವೆ ಎಂದರು.

ಇದನ್ನೂ ಓದಿ: Amit Shah: ನಿಮ್ಮ ಮತ ಪಿಎಫ್​ಐ ನಿಷೇಧಿಸಿದ ಬಿಜೆಪಿಗೋ, ಭಯೋತ್ಪಾದನೆ ಬೆಂಬಲಿಸುವ ಕಾಂಗ್ರೆಸ್​ಗೋ; ಅಮಿತ್ ಶಾ

ವಿದ್ಯಾರ್ಥಿನಿಯರು, ಮಹಿಳೆಯರೊಂದಿಗೆ ಅಮಿತ್ ಶಾ ಸಂವಾದ

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ರಾಣಿ ಚೆನ್ನಮ್ಮ ಪಡೆ, ಮಹಿಳಾ ನೌಕರರ ಜೊತೆ ಅಮಿತ್ ಶಾ ಅವರು ಸಂವಾದ ನಡೆಸಲಿದ್ದಾರೆ. ಮಹಿಳೆಯರ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಗೃಹಸಚಿವರಿಗೆ ಪ್ರಶ್ನೆಗಳನ್ನು ಕೇಳಲಿದ್ದು, ಚರ್ಚೆಯೂ ನಡೆಯಲಿದೆ. ಈ ಸಂವಾದ ಕಾರ್ಯಕ್ರಮವು ಸುಮಾರು ಒಂದು ಗಂಟೆಗಳ ಕಾಲ ನಡೆಯಲಿದೆ.

ಟೌನ್​ಹಾಲ್ ವ್ಯಾಪ್ತಿಯಲ್ಲಿ ಭಾರೀ ಭದ್ರತೆ

ನಗರದ ಹೃದಯ ಭಾಗದಲ್ಲಿರುವ ಟೌನ್​ಹಾಲ್​ಗೆ ಅಮಿತ್ ಶಾ ಆಗಮಿಸಿದ ಹಿನ್ನಲೆ ಸ್ಥಳದಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಟ್ರಾಫಿಕ್ ಜಂಟಿ ಆಯುಕ್ತ ಅನುಚೇತ್ ಅವರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. 3 ಜ‌ನ ಡಿಸಿಪಿ, ಎಸಿಪಿ ಸೇರಿದಂತೆ 450ಕ್ಕೂ ಹೆಚ್ಚು ಪೋಲಿಸರನ್ನು ನಿಯೋಜನೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:44 pm, Fri, 3 March 23